
ಬೀದರ್: ಬೀದರ್ಗೆ ಸೈನಿಕ ಶಾಲೆ ಮಂಜೂರು ಮಾಡಬೇಕು ಎನ್ನುವ ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರ ಬೇಡಿಕೆಗೆ ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ನವದೆಹಲಿಯಲ್ಲಿ ಅವರನ್ನು ಭೇಟಿಯಾಗಿ ಮಾಡಿದ ಮನವಿ ಹಿನ್ನೆಲೆಯಲ್ಲಿ ಸೈನಿಕ ಶಾಲೆ ಆರಂಭಿಸುವ ದಿಸೆಯಲ್ಲಿ ವರದಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಖೂಬಾ ತಿಳಿಸಿದ್ದಾರೆ.
ಬೀದರ್ ತೆಲಂಗಾಣ ಹಾಗೂ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದೆ. ಇಲ್ಲಿಯ ವಾಯುಪಡೆ ತರಬೇತಿ ಕೇಂದ್ರದಲ್ಲಿ ಯುದ್ಧ ವಿಮಾನಗಳ ತರಬೇತಿ ನೀಡಲಾಗುತ್ತದೆ. ಸೈನಿಕ ಶಾಲೆ ಆರಂಭಿಸಲು ಎಲ್ಲ ರೀತಿಯ ಅನುಕೂಲತೆಗಳು ಇವೆ ಎಂದು ರಾಜನಾಥ್ ಸಿಂಗ್ ಅವರಿಗೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಎಚ್.ಕೆ.ಇ. ಸಂಸ್ಥೆಯ ಬಿ.ವಿ.ಬಿ. ಕಾಲೇಜು 20 ಎಕರೆ ಪ್ರದೇಶದಲ್ಲಿ ಇದೆ. ಸಂಸ್ಥೆಯವರು ಸೈನಿಕ ಶಾಲೆಗೆ ಜಮೀನು ಕೊಡಲು ಸಿದ್ಧರಿದ್ದಾರೆ. ಇನ್ನೂ 32 ಎಕರೆ ಜಮೀನು ಲಭ್ಯ ಇದೆ. ಈ ಭಾಗದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಸಾರ್ವಜನಿಕ ಹಾಗೂ ಖಾಸಗಿ ಸಹ ಭಾಗಿತ್ವದಲ್ಲಿ ಸೈನಿಕ ಶಾಲೆ ಆರಂಭಿಸಲು ಕೋರಲಾಗಿದೆ ಎಂದು ತಿಳಿಸಿದ್ದಾರೆ.
ಎಚ್.ಕೆ.ಇ. ಸಂಸ್ಥೆಯ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.