ADVERTISEMENT

ಸೈನಿಕರ ದೇಶ ಪ್ರೇಮ ಅನುಕರಣೀಯ

ಸೇನಾ ವಂದನ ಕಾರ್ಯಕ್ರಮದಲ್ಲಿ ಸಂಸದ ಭಗವಂತ ಖೂಬಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 15:33 IST
Last Updated 14 ಆಗಸ್ಟ್ 2019, 15:33 IST
ಬೀದರ್‌ನ ವಿದ್ಯಾರಣ್ಯ ಪ್ರೌಢ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ‘ಸೇನಾ ವಂದನ’ ಕಾರ್ಯಕ್ರಮದಲ್ಲಿ ಸಂಸದ ಭಗವಂತ ಖೂಬಾ, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪುರೆ, ಪ್ರತಿಭಾ ಚಾಮಾ, ಎಸ್.ಬಿ. ಬಿರಾದಾರ, ನಾರಾಯಣರಾವ್‌ ಮುಖೇಡಕರ್ ಇದ್ದರು
ಬೀದರ್‌ನ ವಿದ್ಯಾರಣ್ಯ ಪ್ರೌಢ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ‘ಸೇನಾ ವಂದನ’ ಕಾರ್ಯಕ್ರಮದಲ್ಲಿ ಸಂಸದ ಭಗವಂತ ಖೂಬಾ, ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್‌ ಮಲ್ಕಾಪುರೆ, ಪ್ರತಿಭಾ ಚಾಮಾ, ಎಸ್.ಬಿ. ಬಿರಾದಾರ, ನಾರಾಯಣರಾವ್‌ ಮುಖೇಡಕರ್ ಇದ್ದರು   

ಬೀದರ್‌: ‘ಸೈನಿಕರ ದೇಶ ಪ್ರೇಮ ಅನುಕರಣೀಯ. ಪ್ರತಿಯೊಬ್ಬರು ದೇಶ ಪ್ರೇಮ ಬೆಳೆಸಿಕೊಂಡರೆ ದೇಶ ವಿರೋಧಿ ಚಟುವಟಿಕೆಗಳಿಗೆ ಸ್ಥಾನವೇ ಇರದು’ ಎಂದು ಸಂಸದ ಭಗವಂತ ಖೂಬಾ ಹೇಳಿದರು.

ನಗರದ ವಿದ್ಯಾರಣ್ಯ ಪ್ರೌಢ ಶಾಲೆಯಲ್ಲಿ ಬುಧವಾರ ಪರಮವೀರ ಚಕ್ರ ಪುರಸ್ಕೃತ ದೇಶದ 21 ಸೈನಿಕರು ಹಾಗೂ ಸೇವೆ ಸಲ್ಲಿಸುತ್ತಿರುವ ಸೈನಿಕರಿಗಾಗಿ ಆಯೋಜಿಸಿದ್ದ ‘ಸೇನಾ ವಂದನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸೇನಾ ವಂದನ ಕಾರ್ಯಕ್ರಮ ಒಂದು ಹೊಸ ಪರಿಕಲ್ಪನೆಯಾಗಿದೆ. ಮಕ್ಕಳಲ್ಲಿ ಪರಮವೀರ ಚಕ್ರ ಪಡೆದಿರುವ ಸೈನಿಕರ ಜೀವನ ಮತ್ತು ಅವರ ಸಾಹಸದ ಪರಿಚಯವನ್ನು ಕಥಾ ರೂಪದಲ್ಲಿ ಸಾದರಪಡಿಸುತ್ತಿರುವುದು ಒಳ್ಳೆಯ ಸಂಗತಿಯಾಗಿದೆ’ ಎಂದು ಹೇಳಿದರು.

ADVERTISEMENT

‘ಮಕ್ಕಳ ಮನಸ್ಸಿನಲ್ಲಿ ದೇಶ ಪ್ರೇಮ ಬಿತ್ತಲು ಪ್ರೇರಣೆ ನೀಡುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು’ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ರಘುನಾಥರಾವ್ ಮಲ್ಕಾಪುರೆ ಮಾತನಾಡಿ, ‘ಪರಮವೀರ ಚಕ್ರ ಪುರಸ್ಕೃತ ಸೇನಾನಿಗಳ ಚರಿತ್ರೆಯನ್ನು ಮಕ್ಕಳೇ ವಿವರಿಸುತ್ತಿರುವುದು ಶ್ಲಾಘನೀಯ. ಇದು ಮಕ್ಕಳಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಲಿದೆ. ಈ ಕಾರ್ಯಕ್ರಮ ನಮಗೆ ಹೊಸ ಅನುಭವ ಮತ್ತು ಸ್ಫೂರ್ತಿ ನೀಡಿದೆ’ ಎಂದು ಬಣ್ಣಿಸಿದರು.

ಸಂಸ್ಥೆಯ ಅಧ್ಯಕ್ಷ ಪ್ರೊ. ಎಸ್.ಬಿ. ಬಿರಾದಾರ ಮಾತನಾಡಿ, ‘ರಾಷ್ಟ್ರದ ಗಡಿ ಕಾಯುವ ವೀರ ಯೋಧರ ನಿಜ ಸ್ಥಿತಿಯನ್ನು ತಿಳಿಸುವ ದಿಸೆಯಲ್ಲಿ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ನಾರಾಯಣರಾವ್ ಮುಖೇಡಕರ್ ಮಾತನಾಡಿ, ‘ಸೇನಾ ವಂದನ ಮತ್ತು ಮಾತೃ ಅರ್ಚನಾ ಕಾರ್ಯಕ್ರಮ ಭಾರತ ದೇಶದ ಸೈನಿಕರಿಗೆ ಸಮರ್ಪಿತವಾಗಿವೆ. ದೇಶಕ್ಕಾಗಿ ಪ್ರಾಣ ನೀಡಿದ ಯೋಧರನ್ನು ಸ್ಮರಿಸಲು ದೊರೆತ ಅವಕಾಶ ಇದಾಗಿದೆ’ ಎಂದು ಹೇಳಿದರು.

ಆಡಳಿತ ಮಂಡಳಿಯ ಸದಸ್ಯ ನಾಗೇಶರೆಡ್ಡಿ ಮಾತನಾಡಿದರು.

ಶಾಲೆಯ ಎಲ್ಲ ವಿದ್ಯಾರ್ಥಿಗಳನ್ನು ಎಂಟು ಗುಂಪುಗಳಾಗಿ ವಿಭಾಗಿಸಿ, ಪ್ರತಿ ಗುಂಪಿನಲ್ಲಿ ನಾಲ್ವರನ್ನು ಸೈನಿಕರ ಹೋರಾಟದ ಬಗ್ಗೆ ಕಥಾ ಬೋಧಕರಾಗಿ ಮಾಡಿ, ಅವರಿಂದ ಉಳಿದ ಎಲ್ಲ ಗುಂಪುಗಳಿಗೆ ಆಯ್ದ 8 ಜನ ಪರಮವೀರ ಸೈನಿಕರ ಜೀವನ ಹಾಗೂ ಯುದ್ಧದಲ್ಲಿನ ಹೋರಾಟದ ಕತೆಯನ್ನು ವಿವರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಶಾಲೆಯಲ್ಲಿ ರಂಗೋಲಿಯಲ್ಲಿ ಸೈನಿಕರ ಭಾವಚಿತ್ರವನ್ನು ಅರಳಿಸಲಾಗಿತ್ತು. ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿದೇರ್ಶಕ ಸಿ.ಎಚ್. ಚಂದ್ರಶೇಖರ, ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ, ಸಂಸ್ಥೆಯ ಉಪಾಧ್ಯಕ್ಷ ಎಸ್.ಬಿ. ಸಜ್ಜನಶೆಟ್ಟಿ, ಕಾರ್ಯದರ್ಶಿ ಹನುಮಂತರಾವ್ ಪಾಟೀಲ, ಕೋಶಾಧ್ಯಕ್ಷ ಎನ್.ಕೃಷ್ಣಾರೆಡ್ಡಿ, ಸದಸ್ಯ ಶಿವರಾಜ್ ಹಲಶೆಟ್ಟಿ, ಆಡಳಿತಾಧಿಕಾರಿ ರೇವಣಪ್ಪ ಸಂಗೊಳಗಿ, ಮುಖ್ಯ ಶಿಕ್ಷಕಿ ಪ್ರತಿಭಾ ಚಾಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.