ADVERTISEMENT

ಎಸ್ಸೆಸ್ಸೆಲ್ಸಿ ಮರುಮೌಲ್ಯಮಾಪನ: ರಾಜ್ಯಕ್ಕೆ ಆದಿತ್ಯ ದ್ವಿತೀಯ ಸ್ಥಾನ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 13:43 IST
Last Updated 9 ಜೂನ್ 2022, 13:43 IST
ಆದಿತ್ಯ ಸುಭಾಷ್ ಗಂಗಾ
ಆದಿತ್ಯ ಸುಭಾಷ್ ಗಂಗಾ   

ಬೀದರ್: ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆ ಮರು ಮೌಲ್ಯಮಾಪನದಲ್ಲಿ ಹುಮನಾಬಾದ್ ತಾಲ್ಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಮಾತೋಶ್ರೀ ಕಸ್ತೂರಬಾಯಿ ತಾಳಂಪಳ್ಳಿ ಪ್ರೌಢಶಾಲೆಯ ವಿದ್ಯಾರ್ಥಿ ಆದಿತ್ಯ ಸುಭಾಷ್ ಗಂಗಾ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾನೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾದಾಗ ಆದಿತ್ಯಗೆ 625 ಅಂಕಗಳ ಪೈಕಿ 622 ಅಂಕಗಳು ದೊರೆತಿದ್ದವು. ಕನ್ನಡದಲ್ಲಿ 125ಕ್ಕೆ 125, ಗಣಿತ, ಸಮಾಜ ವಿಜ್ಞಾನ, ವಿಜ್ಞಾನ ಹಾಗೂ ಹಿಂದಿಯಲ್ಲೂ ಗರಿಷ್ಠ ಅಂದರೆ ತಲಾ 100 ಅಂಕಗಳು ಲಭಿಸಿದ್ದವು. ಆದರೆ, ಇಂಗ್ಲಿಷ್‍ನಲ್ಲಿ ಮಾತ್ರ 97 ಅಂಕಗಳು ಬಂದಿದ್ದವು. ನಿರೀಕ್ಷೆಗಿಂತ ಕಡಿಮೆ ಅಂಕ ಬಂದ ಕಾರಣ ಆದಿತ್ಯ ಇಂಗ್ಲಿಷ್ ಉತ್ತರ ಪತ್ರಿಕೆಯ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ. ಮರು ಮೌಲ್ಯಮಾಪನದಲ್ಲಿ ಇಂಗ್ಲಿಷ್‍ನಲ್ಲಿ ಆದಿತ್ಯಗೆ 99 ಅಂಕಗಳು ದೊರಕಿವೆ. ಮರು ಮೌಲ್ಯಮಾಪನದಲ್ಲಿ ಎರಡು ಹೆಚ್ಚು ಅಂಕಗಳು ಬಂದಿರುವುದರಿಂದ ಈಗ ಆದಿತ್ಯ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾನೆ.

‘ಇಂಗ್ಲಿಷ್‍ನಲ್ಲೂ ಅಧಿಕ ಅಂಕಗಳು ಬರುವ ವಿಶ್ವಾಸ ಇತ್ತು. ಇದೀಗ ಮರು ಮೌಲ್ಯಮಾಪನದಲ್ಲಿ ಎರಡು ಹೆಚ್ಚು ಅಂಕಗಳು ಬಂದಿದ್ದರಿಂದ ಖುಷಿಯಾಗಿದೆ. ಕಠಿಣ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಹಾಗೂ ಪಾಲಕರ ಸಹಕಾರದಿಂದ ಪರೀಕ್ಷೆಯಲ್ಲಿ ಸಾಧನೆ ಸಾಧ್ಯವಾಗಿದೆ’ ಎಂದು ಆದಿತ್ಯ ಪ್ರತಿಕ್ರಿಯಿಸಿದ್ದಾನೆ.

ADVERTISEMENT

‘ಮಗನಿಗೆ ಆತ್ಮವಿಶ್ವಾಸ ಇದ್ದ ಕಾರಣ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದೆವು. ಇಂಗ್ಲಿಷ್‍ನಲ್ಲೂ ಅಧಿಕ ಅಂಕಗಳು ದೊರಕಿರುವುದರಿಂದ ಸಂತಸ ಇಮ್ಮಡಿಗೊಂಡಿದೆ’ ಎಂದು ಆದಿತ್ಯ ತಂದೆ ಸುಭಾಷ್ ಗಂಗಾ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.