ಬೀದರ್: ಇಲ್ಲಿಯ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ವತಿಯಿಂದ 6 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದ ಪಠ್ಯಕ್ರಮಕ್ಕನುಗುಣವಾಗಿ ಡಿಜಿಟಲ್ ಆನ್ಲೈನ್ ತರಗತಿ ಪ್ರಾರಂಭಿಸಲಾಯಿತು.
ಸಮಗ್ರ ಶಿಕ್ಷಣ ಕರ್ನಾಟಕ, ಸಾರ್ವಜನಿಕ ಶಿಕ್ಷಣ ಇಲಾಖೆ, ಅಗಸ್ತ್ಯ ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ವತಿಯಿಂದ ಡಿಜಿಟಲ್ ಆನ್ಲೈನ್ ಮೂಲಕ ತರಗತಿ ನಡೆಸುವ ನೂತನ ಕಾರ್ಯಕ್ರಮಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಸಿ. ಚಂದ್ರಶೇಖರ ಚಾಲನೆ ನೀಡಿದರು.
ನಂತರ ಮಾತನಾಡಿದ ಚಂದ್ರಶೇಖರ್, ‘ಕೋವಿಡ್–19 ಸೋಂಕು ಹರಡುವಿಕೆ ಭೀತಿಯಿಂದ ಶಾಲೆಗಳು ಆರಂಭವಾಗಿಲ್ಲ. ಹೀಗಾಗಿ ಮನೆಯಲ್ಲಿರುವ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ತರಗತಿ ನಡೆಸಲು ಮುಂದಾಗಿರುವುದು ಒಳ್ಳೆಯ ಸಂಗತಿ. ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕು’ ಎಂದು ಹೇಳಿದರು.
ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ಮುಖ್ಯಸ್ಥ ಬಾಬುರಾವ್ ಎನ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ, ‘ವಿದ್ಯಾರ್ಥಿಗಳು ಮನೆಯಿಂದ ಆನ್ಲೈನ್ ತರಗತಿಗಳಲ್ಲಿ ಪಾಲ್ಗೊಂಡು ಅದರ ಸದುಪಯೋಗ ಪಡೆದುಕೊಳ್ಳಬೇಕು. ಯಾವುದೇ ಪ್ರಶ್ನೆಗಳಿದ್ದರೂ ಹೊಸದಾಗಿ ರಚಿಸಲಾದ ವಾಟ್ಸ್ಆ್ಯಪ್ ಗುಂಪುಗಳಲ್ಲಿ ತಮ್ಮ ಪ್ರಶ್ನೆಗಳನ್ನು ಕಳಿಸಿ ಉತ್ತರ ಪಡೆಯಬಹುದು’ ಎಂದು ತಿಳಿಸಿದರು.
ರಾಜ್ಯ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಭಟ್ ಮಾತನಾಡಿ, ‘ವಿಜ್ಞಾನ ನಮ್ಮ ಬದುಕಿನ ಭಾಗವಾಗಿದೆ. ಆನ್ಲೈನ್ ನಲ್ಲಿ ನಡೆಯುವ ತರಗತಿಗಳಿಂದ ಪ್ರಗತಿ ಸಾಧಿಸಬಹುದು. ಮಕ್ಕಳು ಆನ್ಲೈನ್ನಲ್ಲೇ ಎಲ್ಲ ವಿಷಯಗಳ ಮಾಹಿತಿ ಪಡೆಯಬಹುದು’ ಎಂದು ಹೇಳಿದರು.
ವಿಜ್ಞಾನ ಪಠ್ಯ ಪುಸ್ತಕ ಭಾಷಾಂತರ ಸಮಿತಿ ಸದಸ್ಯ ಶಶಿಕುಮಾರ್ ಬಿ.ಎಸ್., ಮಾತನಾಡಿ, ‘ಮಕ್ಕಳು ಆಟ, ಪಾಠದೊಂದಿಗೆ ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸಬೇಕು’ ಎಂದರು.
ಮಾರ್ಗದರ್ಶಕಿ ವೈಶಾಲಿ ಅವರು ಬೆಳಕು ಪಾಠದ ಪ್ರಯೋಗಗಳನ್ನು ಅಚ್ಚುಕಟ್ಟಾಗಿ ಹೇಳಿಕೊಟ್ಟರು. ಕೋರ್ ವಿಜ್ಞಾನ ಚಟುವಟಿಕಾ ಕೇಂದ್ರದ ಪ್ರಾದೇಶಿಕ ಮುಖ್ಯಸ್ಥರು ಗೀತಾ ಪಾಟೀಲ, ಡಿಜಿಟಲ್ ಆನ್ಲೈನ್ ಕಾರ್ಯಕ್ರಮದಲ್ಲಿ ಮಾರ್ಗದರ್ಶಕರಾದ ವಿರಾಜ, ವೀರೇಶ, ಸೂರ್ಯಕಾಂತ, ವೈಶಾಲಿ, ವಿಶಾಲ, ಹಾವಪ್ಪ ಮತ್ತು ಆಡಳಿತ ಸಹಾಯಕ ಮಹೇಶಕುಮಾರ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.