ಬೀದರ್: ಕರ್ನಾಟಕ ಜಾನಪದ ಅಕಾಡೆಮಿ ಆಯೋಜಿಸಿರುವ ರಾಜ್ಯ ಮಟ್ಟದ ಜಾನಪದ ಸಂಭ್ರಮ ಹಾಗೂ ವಾರ್ಷಿಕ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದ ಅಂಗವಾಗಿ ನಗರದಲ್ಲಿ ಗುರುವಾರ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಾನಪದ ಕಲಾ ತಂಡಗಳಿಂದ ಅದ್ಧೂರಿ ಮೆರವಣಿಗೆ ನಡೆಯಿತು.
ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ ಮೆರವಣಿಗೆಗೆ ಚಾಲನೆ ನೀಡಿದರು. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಬಿ.ಟಾಕಪ್ಪ, ಸದಸ್ಯ ವಿಜಯಕುಮಾರ ಸೋನಾರೆ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಪ್ರಕಾಶ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ ವಟಗೆ ಡೊಳ್ಳುಬಾರಿಸುವ ಮೂಲಕ ಕಲಾವಿದರಲ್ಲಿ ಹುರುಪು ತುಂಬಿದರು.
ಚಂದ್ರಕುಮಾರ ತಂಡದ ಹುಲಿವೇಷ, ಹನುಮಂತ ನಾಯಕ ತಂಡದ ಪೂಜಾಕುಣಿತ, ಲಕ್ಷ್ಮಣ ಹಾಗೂ ಬಾಲರಾಜ ತಂಡದ ತಮಟೆ ವಾದನ, ವೆಂಕಟರಾಮ ತಂಡ ಚಕ್ಕೆ ಭಜನೆ, ತಟರಾಜ ತಂಡದ ಸೋಮನ ಕುಣಿತ, ಗಣೇಶ ತಂಡದ ನಂದಿಧ್ವಜ ಕುಣಿತ, ಚಂದ್ರಪ್ಪ ತಂಡದ ಕೊಂಬು ಕಹಳೆ, ನಾರಾಯಣಪ್ಪ ಹಾಗೂ ಸಂಜುಕುಮಾರ ತಂಡದ ಡೊಳ್ಳು ಕುಣಿತ, ಬಡವಾ ಗಣಪುಗೌಡ ತಂಡದ ಹಾಲಕ್ಕಿ ಸುಗ್ಗಿ ಕುಣಿತ, ಮಹೇಶ ಹಾಗೂ ಮಲ್ಲಪ್ಪ ಹೂಗಾರ ತಂಡದ ಪುರವಂತಿಕೆ, ಕಿರಾಣ ತಂಡದ ಕಂಸಾಳೆ ಮೆರವಣಿಗೆಗೆ ಮೆರುಗು ನೀಡಿದವು.
ಮೆರವಣಿಗೆಯು ಡಾ.ಅಂಬೇಡ್ಕರ್ ವೃತ್ತದಿಂದ ಆರಂಭವಾಗಿ ಭಗತ್ಸಿಂಗ್ ವೃತ್ತ, ಬಸವೇಶ್ವರ ವೃತ್ತ, ಛತ್ರಪತಿ ಶಿವಾಜಿ ವೃತ್ತ, ಹರಳಯ್ಯ ವೃತ್ತದ ಮಾರ್ಗವಾಗಿ ಜಿಲ್ಲಾ ರಂಗ ಮಂದಿರಕ್ಕೆ ತಲುಪಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.