ಬೀದರ್: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನ ಮೂರ್ತಿ ಭಗ್ನಗೊಳಿಸಿದ ಹಾಗೂ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದವು.
ನಗರದ ಡಾ.ಅಂಬೇಡ್ಕರ್ ವೃತ್ತದಿಂದ ಪ್ರತಿಭಟನೆ ನಡೆಸಿ ಬಸವೇಶ್ವರ ವೃತ್ತ, ಮಹಾವೀರ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಗರ್ಜನೆ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ ಮರ್ಜಾಪುರ, ರಾಯಣ್ಣ ಯುವ ಪಡೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಡಿ. ಗಣೇಶ, ಗೊಂಡ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ ಜೋಳದಾಪಕೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನಪರ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಅಮರ್ ಕೋಳಾರ ನೇತೃತ್ವದಲ್ಲಿ ಕಾರ್ಯಕರ್ತರು ಮುಖ್ಯಮಂತ್ರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಸ್ವಾತಂತ್ರ್ಯದ ನಂತರ ಭಾಷಾವಾರು ಪ್ರಾಂತಗಳು ರಚನೆಯಾಗಿ ಸಂವಿಧಾನ ಒಪ್ಪಿಕೊಂಡು ಎಲ್ಲ ಭಾಷಿಕರೂ ಸೌಹಾರ್ದದಿಂದ ಬಾಳುತ್ತಿದ್ದಾರೆ. ಎಂಇಎಸ್ ಮುಖಂಡರು ಪದೇ ಪದೇ ಕ್ಯಾತೆ ತೆಗೆದು ಗಡಿಯಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಗಡಿಯಲ್ಲಿ ನಿರಂತರವಾಗಿ ಶಾಂತಿ ಕದಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಬೆಳಗಾವಿ ಸುವರ್ಣಾ ವಿಧಾನ ಸೌಧ ಎದುರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಭೀಮಸಿಂಗ್ ಮಲ್ಕಾಪುರ, ಸಚಿನ್ ಮಲ್ಕಾಪುರ, ಉಮೇಶ ಶಾಹಪುರ, ಕಲ್ಲಪ್ಪ ಬೆನಕನಳ್ಳಿ, ನರಸಪ್ಪ ಜಾನಕನೋರ್, ಅನಿಲ ಚಿಲ್ಲರ್ಗಿ, ರವಿ ಸಿರ್ಸಿ, ಬೊಮಗೊಂಡ ಚಿಟ್ಟಾವಾಡಿ, ವಿಜಯಕುಮಾರ ಬ್ಯಾಲಹಳ್ಳಿ, ಶಿವಶಂಕರ ನೀಲಮನಳ್ಳಿ, ಶಿವ ಬಾಳೂರ, ಸಿದ್ದು ಗಾದಗಿ, ವಿಠ್ಠಲ್ ಹಳೆಂಬುರ್, ಓಂಕಾರ ಕನ್ನಳ್ಳಿ, ಲಕ್ಷ್ಮಣ ಆಣದೂರವಾಡಿ, ಕಲ್ಲಪ್ಪಾ ಶಾಹಪುರ, ಪಂಡಿತ ಫತೇಪುರ, ಶಂಕರ ಬೆಳಕೇರೆ, ವೀರೇಶ ಜಾಂಪಾಡೆ, ಮಲ್ಲಿಕಾರ್ಜುನ ಸಿಕೇನಪುರೆ, ರಾಜಕುಮಾರ ಚಿಟ್ಟಾವಾಡಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.