ADVERTISEMENT

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಅಗತ್ಯ

ವಿ.ಕೆ. ಇಂಟರ್‌ನ್ಯಾಷನಲ್ ಶಾಲಾ ಕಾಲೇಜು ವಾರ್ಷಿಕೋತ್ಸವ: ಡಾ. ಗಂಗಾಂಬಿಕೆ ಅಕ್ಕ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2020, 10:45 IST
Last Updated 23 ಫೆಬ್ರುವರಿ 2020, 10:45 IST
ಬೀದರ್‌ನ ವಿ.ಕೆ. ಇಂಟರ್‌ನ್ಯಾಷನಲ್ ಆವರಣದಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಕ್ಕಳಿಂದ ಪಾಲಕರ ಪೂಜೆ ಕಾರ್ಯಕ್ರಮ ನಡೆಯಿತು
ಬೀದರ್‌ನ ವಿ.ಕೆ. ಇಂಟರ್‌ನ್ಯಾಷನಲ್ ಆವರಣದಲ್ಲಿ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಕ್ಕಳಿಂದ ಪಾಲಕರ ಪೂಜೆ ಕಾರ್ಯಕ್ರಮ ನಡೆಯಿತು   

ಬೀದರ್: ‘ಪ್ರಸ್ತುತ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಅಗತ್ಯ’ ಎಂದು ಬಸವ ಸೇವಾ ಪ್ರತಿಷ್ಠಾನದ ಡಾ.ಗಂಗಾಂಬಿಕೆ ಅಕ್ಕ ಹೇಳಿದರು.

ಇಲ್ಲಿಯ ವಿದ್ಯಾನಗರ ಕಾಲೊನಿಯ ವಿ.ಕೆ.ಇಂಟರ್‌ ನ್ಯಾಷನಲ್ ಆವರಣದಲ್ಲಿ ನಡೆದ ವಿ.ಕೆ.ಇಂಟರ್‌ ನ್ಯಾಷನಲ್ ಪ್ರಾಥಮಿಕ, ಪ್ರೌಢಶಾಲೆ, ಪದವಿ, ಬಿ.ಎಡ್. ಕಾಲೇಜು ಹಾಗೂ ಲಕ್ಷ್ಮೀಬಾಯಿ ಕಮಠಾಣೆ ಬಿ.ಎಡ್. ಕಾಲೇಜುಗಳ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಕ್ಕಳಿಗೆ ಅಕ್ಷರ ಜ್ಞಾನದ ಜತೆಗೆ ನೈತಿಕತೆ ಹಾಗೂ ಮಾನವೀಯ ಮೌಲ್ಯಗಳನ್ನು ಹೇಳಿ ಕೊಡಬೇಕಾಗಿದೆ. ಪಾಲಕರು, ಗುರು- ಹಿರಿಯರನ್ನು ಗೌರವಿಸುವುದನ್ನು ಕಲಿಸಬೇಕಾಗಿದೆ’ ಎಂದು ಹೇಳಿದರು.

ADVERTISEMENT

‘ಬಸವ ತತ್ವ ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಜೀವನ ಮೌಲ್ಯಗಳನ್ನು ಹೇಳಿಕೊಡುತ್ತಿದೆ. ಭಾರತೀಯ ಸಂಸ್ಕೃತಿ, ಪರಂಪರೆಯ ಪರಿಚಯವನ್ನೂ ಮಾಡಿಕೊಡುತ್ತಿದೆ’ ಎಂದು ತಿಳಿಸಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೈಜಿನಾಥ ಕಮಠಾಣೆ ಮಾತನಾಡಿ, ‘ಬಸವ ತತ್ವ ಶಿಕ್ಷಣ ಸಂಸ್ಥೆಯು ಮೂರೂವರೆ ದಶಕದಿಂದ ಜಿಲ್ಲೆಯ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿದೆ’ ಎಂದರು.

‘ಮಹಿಳಾ ಶಿಕ್ಷಣಕ್ಕೆ ಉತ್ತೇಜನ ನೀಡುವ ತನ್ನ ಉದ್ದೇಶದಲ್ಲಿ ಸಂಸ್ಥೆ ಯಶಸ್ವಿಯಾಗಿದೆ. ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಇಂದು ವಿವಿಧ ಉನ್ನತ ಹುದ್ದೆಗಳಲ್ಲಿ ಇದ್ದಾರೆ’ ಎಂದರು.

ಸಂಸ್ಥೆಯ ಕಾರ್ಯದರ್ಶಿ ಡಾ.ದಿಲೀಪ ಕಮಠಾಣೆ ಮಾತನಾಡಿ, ‘ಮಕ್ಕಳಿಗೆ ಇನ್ನಷ್ಟು ಗುಣಮಟ್ಟದ ಶಿಕ್ಷಣ ಕಲ್ಪಿಸಲು ವಸತಿಯುತ ಶಾಲೆ ಆರಂಭಿಸುವ ಉದ್ದೇಶವಿದೆ’ ಎಂದರು.

‘ಸಂಸ್ಥೆಯ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಪ್ರತಿ ವರ್ಷ ಐದು ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಲಾಗುವುದು’ ಎಂದು ಘೋಷಿಸಿದರು.

ಎಐಸಿಸಿ ಸದಸ್ಯ ಆನಂದ ದೇವಪ್ಪ, ಗಾಂಧಿ ಗಂಜ್ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಜಯಕುಮಾರ ಕಾಂಗೆ, ಪತ್ರಕರ್ತ ಅಪ್ಪಾರಾವ್ ಸೌದಿ, ಗಾಯಕಿ ರೇಖಾ ಸೌದಿ, ಡಾ.ಸುರೇಶ ರೋಡೆ, ಶಿವಕುಮಾರ ಭಾಲ್ಕೆ ಅವರನ್ನು ಸನ್ಮಾನಿಸಲಾಯಿತು.

ವಾರ್ಷಿಕೋತ್ಸವದಲ್ಲಿ ಆಯೋ ಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿ ಗಳಿಗೆ ಬಹುಮಾನ ವಿತರಿಸಲಾಯಿತು.

ಯೋಗ ವೇದಾಂತ ಸೇವಾ ಸಮಿತಿಯ ಅಧ್ಯಕ್ಷ ಸಂಜುಕುಮಾರ ನೇಮತಾಬಾದೆ ಹಾಗೂ ಕಾರ್ಯದರ್ಶಿ ಡಾ.ಸುರೇಶ ರೋಡೆ ಅವರು ಮಕ್ಕಳಿಂದ ತಂದೆ-ತಾಯಿ ಪೂಜೆ ಕಾರ್ಯಕ್ರಮ ನಡೆಸಿಕೊಟ್ಟರು.

ವಿದ್ಯಾರ್ಥಿಗಳು ಪ್ರದರ್ಶಿಸಿದ ಜಾನಪದ ನೃತ್ಯ, ದೇಶ ಭಕ್ತಿ ಗೀತೆ ನೃತ್ಯ, ರೂಪಕಗಳು ಸಭಿಕರ ಗಮನ ಸೆಳೆದವು.

ರಾಜೇಶ್ವರಿ, ಲತಾ ಶೇರಿಕಾರ, ಮಹಮ್ಮದ್ ಯುನೂಸ್, ಜಗದೀಶ ಹಿಬಾರೆ, ಕವಿತಾ ಬಿರಾದಾರ, ವೀರೇಂದ್ರ ಜಿಂದೆ, ಪ್ರಿಯಂಕಾ ಕುದರೆ, ಜರೀನಾ ಸುಲ್ತಾನಾ, ದೀಪಿಕಾ, ಅಶ್ವಿನಿ, ಪ್ರೀತಿ ಪ್ರತಾಪುರೆ, ಸುನೀತಾ ಚಂಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಲಕ್ಷ್ಮಿಬಾಯಿ ಕಮಠಾಣೆ, ವೈಶಾಲಿ ಕಮಠಾಣೆ, ದೀಪಾ ಕಮಠಾಣೆ, ಸರೋಜಾ ಹೊಸಳ್ಳಿ, ಉಪ ಪ್ರಾಚಾರ್ಯ ಧನರಾಜ ಪಾಟೀಲ ಇದ್ದರು.ಶಿವಲೀಲಾ ಟೊಣ್ಣೆ ಸ್ವಾಗತಿಸಿದರು. ಪ್ರಿಯಂಕಾ ಕುಲಕರ್ಣಿ, ಶಿವಲಿಂಗಾಬಾಯಿ ಸ್ವಾಮಿ ನಿರೂಪಿಸಿದರು. ಪ್ರಾಚಾರ್ಯ ನಾಗೇಶ ಬಿರಾದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.