
ಭಾಲ್ಕಿ: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಗುರುವಾರ ಭಾಟಸಾಂಗವಿಯ ಸಂತೋಷ ಪಾಟೀಲ ಪರಿವಾರದವರು ತಮ್ಮ ತಂಗಿ ಗಾಯತ್ರಿಯ ಸಂಶಯಾಸ್ಪದ ಸಾವಿನ ತನಿಖೆಗೆ ಆಗ್ರಹಿಸಿ ರಸ್ತೆ ತಡೆ ನಡೆಸಿದರು.
ಸುಮಾರು 15 ನಿಮಿಷಗಳ ಕಾಲ ಎಲ್ಲ ಕುಟುಂಬ ಸದಸ್ಯರು ರಸ್ತೆಯ ಮೇಲೆ ಕುಳಿತು ನ್ಯಾಯಕ್ಕಾಗಿ ಆಗ್ರಹಿಸಿದರು. ಪೊಲೀಸರ ಮನವೊಲಿಕೆಯ ನಂತರ ಪ್ರತಿಭಟನೆ ಹಿಂಪಡೆದರು.
ಪ್ರಕರಣದ ವಿವರ: ತಾಲ್ಲೂಕಿನ ಭಾಟಸಾಂಗವಿ ಗ್ರಾಮದ ಗಾಯತ್ರಿ ನರಸಿಂಗ ಪಾಟೀಲ ಎಂಬುವರ ವಿವಾಹ ಕಾಸರತೂಗಾಂವ ಗ್ರಾಮದ ಉತ್ತಮ ಅಲಿಯಾಸ್ ಅಂಗದ ರಾಜೇಂದ್ರ ಪಾಟೀಲ ಅವರೊಂದಿಗೆ ಸುಮಾರು 12 ವರ್ಷಗಳ ಹಿಂದೆ ಮಾಡಿಕೊಡಲಾಗಿತ್ತು. ಇವರಿಗೆ ಸ್ನೇಹಾ (10), ಜೀವನ (8), ಶ್ರದ್ಧಾ (4) ಎಂಬ ಮೂವರು ಮಕ್ಕಳಿದ್ದಾರೆ. ಈಚೆಗೆ ಗಾಯತ್ರಿಗೆ ಆರೋಗ್ಯ ಸರಿ ಇರದೇ ಇರುವುದರಿಂದ ಮಕ್ಕಳೊಂದಿಗೆ ತವರು ಮನೆಗೆ ಹೋಗಿದ್ದರು. ಕಳೆದ ಐದಾರು ದಿನಗಳ ಹಿಂದೆ ನಮ್ಮ ಭಾವ ಉತ್ತಮ ಅಲಿಯಾಸ್ ಅಂಗದ ರಾಜೇಂದ್ರ ಪಾಟೀಲ ನಮ್ಮ ಮನೆಗೆ ಬಂದು ನನ್ನ ತಂಗಿಗೆ ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಬುಧವಾರ (ನ. 26) ಸಂಜೆ ನನ್ನ ಸಹೋದರಿ ಗಾಯತ್ರಿ ಮನೆಯಲ್ಲಿ ನೇಣು ಬಿಗಿದುಕೊಂಡು ಸತ್ತಿದ್ದಾಳೆ ಎಂದು ನಮ್ಮ ಭಾವ ಕರೆ ಮಾಡಿ ತಿಳಿಸಿದ್ದಾನೆ. ನಮ್ಮ ತಂಗಿ ನೇಣು ಬಿಗಿದುಕೊಂಡು ಸತ್ತಿರುವ ಬಗ್ಗೆ ನಮಗೆ ಸಂಶಯವಿದ್ದು, ಈ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಗಾಯತ್ರಿಯ ಸಹೋದರ ಸಂತೋಷ ಪಾಟೀಲ ಮತ್ತು ಸಹೋದರಿಯರು ಒತ್ತಾಯಿಸಿದ್ದಾರೆ.
ಈ ಸಂಬಂಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.