ಜನವಾಡ: ‘ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು’ ಎಂದು ತೆಲಂಗಾಣದ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ಚಿಂಚೋಳಿ ತಾಲ್ಲೂಕಿನ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ.ಬಸವಲಿಂಗ ಅವಧೂತರು ಹೇಳಿದರು.
ಬೀದರ್ ತಾಲ್ಲೂಕಿನ ಯರನಳ್ಳಿ ಗ್ರಾಮದಲ್ಲಿ ಗುರುದೇವ ದತ್ತ ದಿಗಂಬರ ಮಾಣಿಕೇಶ್ವರರ 52ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳಿಗೆ ನೈತಿಕತೆ, ಮಾನವೀಯತೆ ಹಾಗೂ ಜೀವನ ಮೌಲ್ಯಗಳನ್ನು ಕಲಿಸಿಕೊಡಬೇಕು ಎಂದು ಕಿವಿಮಾತು ಹೇಳಿದರು.
ಮಕ್ಕಳು ಸಹ ಪಾಲಕರಿಗೆ ವಿಧೇಯರಾಗಿರಬೇಕು. ವೃದ್ಧಾಪ್ಯದಲ್ಲಿ ಅವರ ಸೇವೆ ಮಾಡಬೇಕು. ಯಾವ ಕಾರಣಕ್ಕೂ ಅವರ ಮನಸ್ಸು ನೋಯಿಸಬಾರದು ಎಂದು ತಿಳಿಸಿದರು.
ಪ್ರೀತಿ, ಪ್ರೇಮವೇ ಜೀವನವಾಗಿದೆ. ಗ್ರಾಮಗಳ ಜನ ಸೌಹಾರ್ದದಿಂದ ಬಾಳಬೇಕು. ಪರಿಸ್ಪರರ ಕಷ್ಟ- ಸುಖದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
ಶರಣರು, ಸಂತರು ತೋರಿದ ಭಕ್ತಿ ಮಾರ್ಗದಲ್ಲಿ ಸಾಗಬೇಕು. ಒಳ್ಳೆಯ ಕಾರ್ಯಗಳ ಮೂಲಕ ದೇವರ ಕೃಪೆಗೆ ಪಾತ್ರರಾಗಬೇಕು ಎಂದರು.
ಮಾಣಿಕೇಶ್ವರರು ಭಕ್ತರ ಪಾಲಿನ ಆರಾಧ್ಯ ದೈವವಾಗಿದ್ದರು. ಭಕ್ತರ ಸಂಕಷ್ಟ ಪರಿಹರಿಸಲು ಅವಿತರ ಶ್ರಮಿಸಿದ್ದರು ಎಂದು ಹೇಳಿದರು.
ಹೆಡಗಾಪುರದ ಶಿವಲಿಂಗ ಶಿವಾಚಾರ್ಯ, ಗ್ರಾಮದ ಪ್ರಮುಖರಾದ ವಿಜಯಕುಮಾರ ಅಂಕಲೆ, ಮಲ್ಲಿಕಾರ್ಜುನ ಕಾರಬಾರಿ, ಶಿವಾನಂದ ಬೆಳಕೇರೆ, ಪ್ರಹ್ಲಾದ್ ಚಿಕ್ಕಪೇಟೆ, ಓಂಕಾರ ಹೊಸದೊಡ್ಡೆ, ಸಂತೋಷ ಬಾವಗೆ, ಶಾಂತಕುಮಾರ ದೇಶಮುಖ, ಮಹೇಶ ದೇಶಮುಖ, ಮಡಿವಾಳ ಶೆಟ್ಟಿ ಕಾರಬಾರಿ ಇದ್ದರು. ಯರನಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.