ಬೀದರ್: ಮಾತು ಮನಸ್ಸನ್ನು ಅರಳಿಸಬೇಕು. ಕೆರಳಿಸಬಾರದು. ಮಾತು ಆತ್ಮೋನ್ನತಿಗೆ ಕಾರಣವಾಗಬೇಕು. ವಂಚನೆ ತುಂಬಿದ ಮಾತು ಜೀವನ ನರಕಾಗಿಸುತ್ತದೆ. ಸ್ವಾರ್ಥರಹಿತ ಮಾತು ಪ್ರೀತಿಯ ಮಾಧುರ್ಯದ ಮಾತು ಹೃದಯ ತುಂಬಿಕೊಳ್ಳುತ್ತದೆ. “ಮಾತೆಂಬುದು ಜ್ಯೋತಿರ್ಲಿಂಗ” ಎಂದು ಪ್ರಭುದೇವರು ಹೇಳಿದರು. “ನುಡಿದರೆ ಮುತ್ತಿನ ಹಾರದಂತಿರಬೇಕು. ನುಡಿದರೆ ಲಿಂಗಮೆಚ್ಚಿ ಅಹುದು ಅಹುದು ಎನ್ನಬೇಕು” ಎಂದು ಬಸವಣ್ಣನವರು ಹೇಳಿದರು. ಚುಚ್ಚುಮಾತನಾಡುವುದಕ್ಕಿಂತ ಬಿಚ್ಚು ಮಾತನಾಡಬೇಕು.
ಒಂದು ಒಳ್ಳೆಯ ಮಾತು ಮಾನವನ ಪ್ರಗತಿಗೆ ಕಾರಣವಾಗಿರುತ್ತದೆ. ಭವ್ಯತೆ ಕಡೆಗೆ ಕರೆದುಕೊಂಡು ಹೋಗುತ್ತದೆ. ಅನಾವಶ್ಯಕ ಮಾತು ದುರ್ಘಟನೆಗಳಿಗೆ ಕಾರಣವಾಗುತ್ತದೆ. “ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು” ಎಂಬ ಗಾದೆ ಕೂಡ ನಮ್ಮನ್ನು ಎಚ್ಚರಿಸುತ್ತದೆ. ಮಾತು ನಮ್ಮ ಅಂತರಂಗದಲ್ಲಿ ಬೆಳಕು ಮೂಡಿಸಬೇಕು. “ಕೂಡಲಸಂಗನ ಶರಣರು ಮನದೆರೆದು ಮಾತನಾಡಿದರೆ ಲಿಂಗವೆ ಕಾಣಬಹುದು” ಎನ್ನುವಂತೆ ಮಾತು ಅರಿತು ಆಡಬೇಕು.
ಮಾತು ಹಿತ-ಮಿತವಾಗಿರಬೇಕು. ಎಂಥ ಸಂದರ್ಭದಲ್ಲಿಯೂ ಮಾತಿನ ತಾಳ್ಮೆ ಕಳೆದುಕೊಳ್ಳಬಾರದು. ನಕಾರಾತ್ಮಕ ಮಾತನಾಡುವುದಕ್ಕಿಂತ ಸಕಾರಾತ್ಮಕ ಮಾತನಾಡಿ ಬೆಳಕು ತುಂಬಬೇಕು. ಒಂದು ಪ್ರೀತಿಯ ಮಾತು ನಮ್ಮನ್ನು ಆನಂದೆಡೆಗೆ ಕರೆದುಕೊಂಡು ಹೋಗುತ್ತದೆ. ಮಾತು ಹೃದಯ ಹೃದಯ ಬೆಸೆಯುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.