ADVERTISEMENT

ದೇಶದ ಸಂಸ್ಕೃತಿ, ಪರಂಪರೆ ವಿಶ್ವದಲ್ಲೇ ಶ್ರೇಷ್ಠ

ದೀಪಾವಳಿ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಖೂಬಾ ಅಭಿಮತ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 13:15 IST
Last Updated 1 ನವೆಂಬರ್ 2021, 13:15 IST
ಬೀದರ್‌ನಲ್ಲಿ ಆಯೋಜಸಿದ್ದ ಆಯೋಜಿಸಿದ್ದ ದೀಪಾವಳಿ ಸ್ನೇಹ ಮಿಲನ ಹಾಗೂ ಸಮರ್ಪಿತ ಬ್ರಹ್ಮಕುಮಾರಿ ಸಹೋದರಿಯರ ಜನ್ಮೋತ್ಸವ ಕಾರ್ಯಕ್ರಮವನ್ನು ಕೇಂದ್ರ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಉದ್ಘಾಟಿಸಿದರು. ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ, ಪ್ರತಿಮಾ ಬಹಿನ್‍ಜಿ ಇದ್ದರು
ಬೀದರ್‌ನಲ್ಲಿ ಆಯೋಜಸಿದ್ದ ಆಯೋಜಿಸಿದ್ದ ದೀಪಾವಳಿ ಸ್ನೇಹ ಮಿಲನ ಹಾಗೂ ಸಮರ್ಪಿತ ಬ್ರಹ್ಮಕುಮಾರಿ ಸಹೋದರಿಯರ ಜನ್ಮೋತ್ಸವ ಕಾರ್ಯಕ್ರಮವನ್ನು ಕೇಂದ್ರ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಉದ್ಘಾಟಿಸಿದರು. ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ, ಪ್ರತಿಮಾ ಬಹಿನ್‍ಜಿ ಇದ್ದರು   

ಬೀದರ್‌: ‘ಅಮೂಲ್ಯ ಆಚಾರ, ವಿಚಾರ, ಸಂಸ್ಕೃತಿ ಹಾಗೂ ಪರಂಪರೆ ವಿಶ್ವದಲ್ಲೇ ಶ್ರೇಷ್ಠವಾದದ್ದು. ಅಂತೆಯೇ ಇಂದು ಭಾರತ ಅಧ್ಯಾತ್ಮದ ನೆಲೆಯಲ್ಲೇ ವಿಶ್ವ ಗುರುವಾಗಿ ಗುರುತಿಸಿಕೊಂಡಿದೆ’ಎಂದು ಕೇಂದ್ರ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.

ನಗರದ ಜನವಾಡ ಮಾರ್ಗದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ರಾಜಯೋಗ ಕೇಂದ್ರ ಪಾವನಧಾಮ ಆವರಣದಲ್ಲಿ ಆಯೋಜಿಸಿದ್ದ ದೀಪಾವಳಿ ಸ್ನೇಹ ಮಿಲನ ಹಾಗೂ ಸಮರ್ಪಿತ ಬ್ರಹ್ಮಕುಮಾರಿ ಸಹೋದರಿಯರ ಜನ್ಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಧು, ಸಂತರು, ಋಷಿ ಮುನಿಗಳು ಬಾಳಿ ಬದುಕಿದ ದೇಶದಲ್ಲಿ ಜನಿಸಿದ ಪ್ರತಿಯೊಬ್ಬರು ಪುಣ್ಯವಂತರು. ಈ ನೆಲದ ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ’ ಎಂದು ಹೇಳಿದರು.
‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸದಾ ಈಶ್ವರೀಯ ಸೇವೆಯನ್ನು ಯಾವಾಗಲೂ ಕೊಂಡಾಡುತ್ತಿದ್ದರು’ ಎಂದು ತಿಳಿಸಿದರು.

ADVERTISEMENT

ಬ್ರಹ್ಮಕುಮಾರಿ ಕೇಂದ್ರ ಪಾವನಧಾಮದ ಸಂಚಾಲಕಿ ಬಿ.ಕೆ ಪ್ರತಿಮಾ ಬಹಿನ್‍ಜಿ ಮಾತನಾಡಿ, ಬ್ರಹ್ಮಕುಮಾರಿ ಸಂಸ್ಕೃತಿಯಲ್ಲಿ ದೀಪಾವಳಿಗೆ ವಿಶೇಷ ಸ್ಥಾನವಿದೆ. ಇದೇ ದಿನ ಬ್ರಹ್ಮಬಾಬಾ ತನ್ನ ಸಂಪತ್ತನ್ನು ಆಧ್ಯಾತ್ಮಿಕ ಕೇಂದ್ರ ಆರಂಭಿಸಲು ವಿನಿಯೋಗಿಸಿದರು. ಪ್ರಕಾಶಮಣಿ ದಾದಿ, ಗುಲ್ಜಾರ್ ದಾದಿ ಹಾಗೂ ಜಾನಕಿ ದಾದಿ ಸೇರಿದಂತೆ 1936ರಲ್ಲಿ ಸುಮಾರು 300ಕ್ಕೂ ಅಧಿಕ ಸಹೋದರಿಯನ್ನು ಸೇರಿಸಿಕೊಂಡು ದೀಪಾವಳಿ ದಿನವೇ ಪ್ರಜಾಪಿತ ಬ್ರಹ್ಮಾಕುಮಾರಿ ಕೇಂದ್ರವನ್ನು ಹುಟ್ಟು ಹಾಕಿದರು. ಈ ದಿನವನ್ನು ಸಮರ್ಪಿತ ಸಹೋದರಿಯರ ಜನ್ಮದಿನವಾಗಿ ಆಚರಿಸಿಕೊಂಡು ಬರಲಾಗಿದೆ’ ಎಂದರು.

ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರು ಮಾತನಾಡಿ, ಮನುಷ್ಯ ತನ್ನಲ್ಲಿರುವ ದುರ್ಗುಣಗಳನ್ನು ತೊಡೆದು ಹಾಕಿ ಉತ್ತಮ ಜೀವನ ನಡೆಸಬೇಕು’ ಎಂದು ಹೇಳಿದರು.

ನೂಪೂರ ನೃತ್ಯ ಅಕಾಡೆಮಿ ಅಕಾಡೆಮಿ ಉಷಾ ಪ್ರಭಾಕರ ನೇತೃತ್ವದಲ್ಲಿ ಕಲಾವಿದರು ಅಷ್ಟ ಲಕ್ಷ್ಮೀಯರ ವೇಷ ಧರಿಸಿ ನೃತ್ಯಗೈದರು. ಬಿ.ಕೆ ವಾಣಿ ಸ್ವಾಗತಿಸಿ ನಿರೂಪಿಸಿದರು. ಬಿ.ಕೆ ವಿಜಯಕ್ಷ್ಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.