ಬೀದರ್: ತಾಲ್ಲೂಕಿನ ಕೊಳಾರ(ಕೆ) ಸಮೀಪದ ನಿಜಾಂಪುರದಲ್ಲಿ ಶನಿವಾರ ಇಬ್ಬರು ಬಾಲಕರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಸೈಕಲ್ ಟೈಯರ್ ಉರುಳಿಸುತ್ತ ಹೋಗಿ ಆಕಸ್ಮಿಕವಾಗಿ ಕೆರೆಗೆ ಬಿದ್ದ ಅನು ಫಕ್ರು(8) ಹಾಗೂ ಅರಸು ಫಕ್ರು ಮೃತಪಟ್ಟಿದ್ದಾರೆ. ನಾಲ್ಕು ದಿನ ತಾಲ್ಲೂಕಿನಲ್ಲಿ ಸುರಿದ ಮಳೆಗೆ ಕೆರೆಯಲ್ಲಿ ಅಪಾರ ನೀರು ಸಂಗ್ರಹವಾಗಿದೆ.
ಮಕ್ಕಳ ತಂದೆ ತಾಯಿ ಬೀದಿ ಬದಿ ಹಣ್ಣು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಅವರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಅವಘಡ ನಡೆದಿದೆ ಎನ್ನಲಾಗಿದೆ. ಮಕ್ಕಳು ಕೆರೆಯಲ್ಲಿ ಬಿದ್ದಿರುವುದು ತಡವಾಗಿ ಗೊತ್ತಾಗಿದೆ. ಮಧ್ಯಾಹ್ನ ಬಾಲಕರ ಶವ ಹೊರಗೆ ತೆಗೆಯಲಾಗಿದೆ. ನ್ಯೂಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಧಾರಣ ಮಳೆ:ಜಿಲ್ಲೆಯಲ್ಲಿ 24 ಗಂಟೆಗಳ ಅವಧಿಯಲ್ಲಿ ಚಿಟಗುಪ್ಪ, ಹಮನಾಬಾದ್ ಹಾಗೂ ಬಸವಕಲ್ಯಾಣ ಗ್ರಾಮಾಂತರ ಪ್ರದೇಶದಲ್ಲಿ ಸಾಧಾರಣ ಮಳೆಯಾಗಿದೆ.
ಬಸವಕಲ್ಯಾಣದಲ್ಲಿ 16 ಮಿ.ಮೀ, ಬಸವಕಲ್ಯಾಣ ತಾಲ್ಲೂಕಿನ ಸಸ್ತಾಪುರದಲ್ಲಿ 12 ಮಿ.ಮೀ, ಮಂಠಾಳದಲ್ಲಿ 16 ಮಿ.ಮೀ, ರಾಜೇಶ್ವರದಲ್ಲಿ 26 ಮಿ.ಮೀ, ಚಿಟಗುಪ್ಪದಲ್ಲಿ 81 ಮಿ.ಮೀ, ನಿರ್ಣಾದಲ್ಲಿ 49 ಮಿ.ಮೀ, ಸಿಂಧನಕೇರಾದಲ್ಲಿ 14, ಉಡಬಾಳದಲ್ಲಿ 30 ಮಿ.ಮೀ, ಹುಮನಾಬಾದ್ನಲ್ಲಿ 35 ಮಿ.ಮೀ ಹಾಗೂ ಬೀದರ್ ತಾಲ್ಲೂಕಿನ ಮನ್ನಳ್ಳಿಯಲ್ಲಿ ಮಿ.ಮೀ ಮಳೆಯಾಗಿದೆ.
ಜಿಲ್ಲೆಯ 124 ಕೆರೆಗಳ ಪೈಕಿ 76 ಕೆರೆಗಳು ಭರ್ತಿಯಾಗಿವೆ ಅವಿಭಜಿತ ಔರಾದ್ ತಾಲ್ಲೂಕಿನ 34, ಭಾಲ್ಕಿ ತಾಲ್ಲೂಕಿನ 13, ಬಸವಕಲ್ಯಾಣ ತಾಲ್ಲೂಕಿನ 20, ಬೀದರ್ ತಾಲ್ಲೂಕಿನ 7 ಹಾಗೂ ಹುಮನಾಬಾದ್ ತಾಲ್ಲೂಕಿನ ಎರಡು ಕೆರೆಗಳು ತುಂಬಿವೆ. ಕಾರಂಜಾ ಜಲಾಶಯದಲ್ಲಿ 3.826 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.