ADVERTISEMENT

ಯುಜಿಸಿ 2026ರ ನಿಯಮ ಜಾರಿಗೆ ಆಗ್ರಹ

ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 7:19 IST
Last Updated 10 ಫೆಬ್ರುವರಿ 2026, 7:19 IST
ಬೀದರ್‌ನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬೀದರ್‌ನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು
ಬೀದರ್‌ನಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಬೀದರ್‌ನಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು   

ಬೀದರ್‌: ವಿಶ್ವವಿದ್ಯಾಲಯ ಧನ ಸಹಾಯ ಆಯೋಗವು (ಯುಜಿಸಿ) 2026ರಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ದಿವ್ಯಾಂಗ ವಿದ್ಯಾರ್ಥಿಗಳ ಸಮಾನತೆಯ ಉತ್ತೇಜನಕ್ಕೆ ರೂಪಿಸಿರುವ ನಿಯಮಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಅನುಷ್ಠಾನಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಶಹಾಗಂಜ್‌ ಬೌದ್ಧ ಮಂದಿರದಿಂದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿದರು. ಬಳಿಕ ಪ್ರಧಾನಿ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ಕಿರುಕುಳ, ದೌರ್ಜನ್ಯ ಮತ್ತು ದಲಿತ ವಿದ್ಯಾರ್ಥಿಗಳ ಮೇಲಿನ ಮಾನಸಿಕ ಒತ್ತಡದಿಂದ ಉಂಟಾಗುತ್ತಿರುವ ಆತ್ಮಹತ್ಯೆಗಳ ಸರಣಿಯನ್ನು ತಡೆಗಟ್ಟಬೇಕಿದೆ. ಯುಜಿಸಿ ತಂದಿರುವ 2026ರ ಕರಡು ನಿಯಮಗಳಿಗೆ ಸುಪ್ರೀಂ ಕೋರ್ಟ್ ನೀಡಿರುವ ತಡೆ ಆದೇಶವನ್ನು ತೆರವುಗೊಳಿಸಿ, ಎಸ್.ಸಿ.,ಎಸ್.ಟಿ. ವಿದ್ಯಾರ್ಥಿಗಳಿಗೆ ಪ್ರತ್ಯೇಕ ರಕ್ಷಣಾತ್ಮಕ ನಿಯಮಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ADVERTISEMENT

ಯುಜಿಸಿ 2026ರ ನಿಯಮಗಳಿಗೆ ನೀಡಿರುವ ತಡೆ ತೆರವುಗೊಳಿಸಬೇಕು. ಎಸ್.ಸಿ., ಎಸ್.ಟಿ., ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ನಿಯಮ ಜಾರಿಗೊಳಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಜಾತಿ ದೌರ್ಜನ್ಯ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ರೋಹಿತ್ ವೇಮುಲ ಕಾಯ್ದೆಯನ್ನು ರಾಜ್ಯದಲ್ಲಿ ಕಡ್ಡಾಯ ಜಾರಿಗೊಳಿಬೇಕೆಂದು ಆಗ್ರಹಿಸಿದರು.

ದಸಂಸ ರಾಜ್ಯ ಸಂಚಾಲಕ ಮಾರುತಿ ಬೌದ್ಧೆ, ಜಿಲ್ಲಾ ಸಂಚಾಲಕ ರಾಜಕುಮಾರ ವಾಘಮಾರೆ, ಅರುಣ್‌ ಪಟೇಲ್, ಅಶೋಕ್‌ ಗಾಯಕವಾಡ್‌, ರಮೇಶ ಉಮಾಪುರೆ, ಶಿವರಾಜ ತಡಪಳ್ಳಿ, ರಮೇಶ  ಬೆಲ್ದಾರ್, ಸತೀಶ ರತ್ನಾಕರ್, ವಾಮನ್‌ ಮೈಸಲಗೆ, ಶಿರೋಮಣಿ ಹಲಗೆ, ನರಸಿಂಗ್‌ ಮೇಟಿ, ಝರೆಪ್ಪ ವರ್ಮಾ, ಗೌತಮ್‌ ಮುತ್ತಂಗಿಕರ್, ವಿಜಯಕುಮಾರ್‌ ಭಾವಿಕಟ್ಟಿ, ರಾಹುಲ್‌ ಹಾಲಹಿಪ್ಪರ್ಗ, ಬಸವರಾಜ ಭಾವಿದೊಡ್ಡಿ, ಸಂತೋಷ ಪಡಸಾಲೆ, ವಿನೋದ್‌ ಬಂದಗೆ, ಸಾಯಿ ಸಿಂಧೆ, ಬಾಬುರಾವ್‌ ಹೊನ್ನಾ, ಗಾಲೇಬ್ ಹಾಶ್ಮಿ, ಜೈಭೀಮ್‌ ಚಿಮನಾಯಕ, ಅಜಯ್‌ ದೀನೆ, ಶಿವಕುಮಾರ್ ಗುನಳ್ಳಿ, ಗೊಂಡ ವಿದ್ಯಾರ್ಥಿ ಸಂಘದ ಸಂತೋಷ ಜೋಳದಾಬಕಾ, ಓಂ ಪ್ರಕಾಶ ರೊಟ್ಟೆ,  ಲಿಂಗಾಯತ ಸಮಾಜದ ಯುವ ಮುಖಂಡ ಜಗದೀಶ್‌ ಬಿರಾದಾರ, ಕನ್ನಡಪರ ಸಂಘಟನೆಗಳ ಒಕ್ಕೂಟದ ಶಿವಕುಮಾರ ತುಂಗಾ, ಜಗಜೀವನರಾಮ್‌ ಹೊರಾಟ ಸಮಿತಿಯ ಅಭಿ ಕಾಳೆ , ಸಿಪಿಐನ ನಜೀರ್‌ ಅಹ್ಮದ್‌, ಸೈಫದ್‌ ಅಲಿ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.