
ಬೀದರ್: ಮುಂಬರುವ ಜ. 30ರಿಂದ ಫೆ. 1ರ ವರೆಗೆ ನಗರದ ಬಸವಗಿರಿಯಲ್ಲಿ ನಡೆಯಲಿರುವ ‘ವಚನ ವಿಜಯೋತ್ಸವ’ವನ್ನು ಯಶಸ್ವಿಯಾಗಿ ನೆರವೇರಿಸಿಕೊಂಡು ಹೋಗಲು ನಿರ್ಧರಿಸಲಾಯಿತು.
ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಗಂಗಾಂಬಿಕಾ ಅಕ್ಕ ಅವರ ಸಾನ್ನಿಧ್ಯದಲ್ಲಿ ಶುಕ್ರವಾರ ರಾತ್ರಿ ನಗರದ ಶರಣ ಉದ್ಯಾನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಯಿತು.
ಗಂಗಾಂಬಿಕಾ ಅಕ್ಕ ಮಾತನಾಡಿ, ಕಲ್ಯಾಣ ಕ್ರಾಂತಿ ನಂತರ ವಚನ ಸಾಹಿತ್ಯ ಸಂರಕ್ಷಣೆಗೆ ಪ್ರಾಣಾರ್ಪಣೆಯಾದವರ ಸ್ಮರಣೆಗಾಗಿ 2002ರಿಂದ ವಚನ ವಿಜಯೋತ್ಸವ ಕಾರ್ಯಕ್ರಮ ಆಚರಿಸಿಕೊಂಡು ಬರಲಾಗುತ್ತಿದೆ. ಕೆಲವೇ ವರ್ಷಗಳಲ್ಲಿ ಇದು ಕಲ್ಯಾಣ ಕರ್ನಾಟಕದ ಹೆಮ್ಮೆಯ ಉತ್ಸವವಾಗಿದೆ. ನಾಡಿನ ವಿವಿಧಡೆಯಿಂದ ಪೂಜ್ಯರು, ಅನುಭಾವಿಗಳು, ಗಣ್ಯರು, ಬಸವ ಭಕ್ತರು ಆಗಮಿಸುತ್ತಿದ್ದಾರೆ. ಸರ್ವ ಶರಣ ಬಂಧುಗಳು ಸೇವಾ ಮನೋಭಾವದಿಂದ ಶ್ರಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು ಎಂದರು.
ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಹಂಚಿಕೆ ಮಾಡಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರನ್ನು ಆಯ್ಕೆ ಮಾಡಲಾಯಿತು.
ಮೆರವಣಿಗೆ ಸಮಿತಿ, ವಿದ್ಯಾರ್ಥಿಗಳ ಸಂಘಟನೆ ಸಮಿತಿ, ಪ್ರಸಾದ ಸಮಿತಿ, ಪ್ರಸಾದ ವಿತರಣಾ ಸಮಿತಿ, ವಸತಿ ಸಮಿತಿ, ರಕ್ತದಾನ ಸಮಿತಿ, ಪ್ರಚಾರ ಸಮಿತಿ, ಕಾರು ರ್ಯಾಲಿ ಸಮಿತಿ, ಮಹಿಳಾ ಸಮಿತಿ, ಹಣಕಾಸು ಸಮಿತಿ, ಪ್ರಚಾರ ಶಿಸ್ತು ಸಮಿತಿ, ಆರೋಗ್ಯ ಸಮಿತಿ, ಮಂಟಪ ಶಿಸ್ತು ಸಮಿತಿ, ಇಷ್ಟಲಿಂಗ ಪೂಜಾ ಸಿದ್ಧತಾ ಸಮಿತಿ, ವಚನ ಪಾರಾಯಣ ಸಿದ್ಧತಾ ಸಮಿತಿ, ಸಲಹಾ ಸಮಿತಿ ರಚಿಸಲಾಯಿತು.
ವಿವಿಧ ಬಸವಪರ ಸಂಘಟನೆಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.