ADVERTISEMENT

ಹಳ್ಳಿಗಳಲ್ಲೇ ಉಳಿದಿದೆ ಕಲೆ: ಡಾ.ದಿಲೀಪಕುಮಾರ

ಅಂತರ್ ಕಾಲೇಜುಗಳ ಯುವ ಜನೋತ್ಸವಕ್ಕೆ ಸಂಭ್ರಮದ ತೆರೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 15:41 IST
Last Updated 14 ಅಕ್ಟೋಬರ್ 2019, 15:41 IST
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಬೀದರ್‌ನಲ್ಲಿ ನಡೆದ ಅಂತರ್ ಕಾಲೇಜುಗಳ ಯುವ ಜನೋತ್ಸವದಲ್ಲಿ ದೀಪ ನೃತ್ಯ ಪ್ರದರ್ಶಿಸಿದ ಬಾಗಲಕೋಟೆಯ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು
ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಬೀದರ್‌ನಲ್ಲಿ ನಡೆದ ಅಂತರ್ ಕಾಲೇಜುಗಳ ಯುವ ಜನೋತ್ಸವದಲ್ಲಿ ದೀಪ ನೃತ್ಯ ಪ್ರದರ್ಶಿಸಿದ ಬಾಗಲಕೋಟೆಯ ತೋಟಗಾರಿಕೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು   

ಬೀದರ್‌: ‘ಇಂದಿನ ಆಧುನಿಕ ಯುಗದಲ್ಲಿ ಕಲೆ, ಸಂಸ್ಕೃತಿ ಹಾಗೂ ಸಂಪ್ರದಾಯಗಳು ಹಳ್ಳಿಗಳಲ್ಲೇ ಉಳಿದುಕೊಂಡಿವೆ. ಕಲೆ, ಸಂಸ್ಕೃತಿಗೆ ಉತ್ತೇಜನ ನೀಡುವ ದಿಸೆಯಲ್ಲಿ ವಿಶ್ವವಿದ್ಯಾಲಯವು ಯುವಜನೋತ್ಸವ ಆಯೋಜಿಸಿರುವುದು ಸ್ತುತ್ಯಾರ್ಹವಾಗಿದೆ’ ಎಂದು ಬೀದರ್ ಪಶು ವೈದ್ಯಕೀಯ ಮಹಾವಿದ್ಯಾಲಯದ ಡೀನ್‌. ಡಾ.ದಿಲೀಪಕುಮಾರ ಹೇಳಿದರು.

ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಬೀದರ್‌ನಲ್ಲಿ ಮೂರು ದಿನಗಳ ವರೆಗೆ ನಡೆದ ಅಂತರ್ ಕಾಲೇಜುಗಳ ಯುವ ಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

‘ಮೊಬೈಲ್‌, ದೇಸಿ ಕಲೆಯನ್ನು ಮರೆಯಾಗಿಸುವಷ್ಟು ನಮ್ಮ ಬದುಕಿನ ಸುತ್ತ ಆವರಿಸಿಕೊಂಡಿದೆ. ಆದರೆ, ತೋಟಗಾರಿಕೆ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಯುಜನೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ನಾಡಿನ ಕಲೆಯನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿದ್ದಾರೆ’ ಎಂದು ಬಣ್ಣಿಸಿದರು.

‘ಸ್ಪರ್ಧೆಗಳಲ್ಲಿ ಸೋಲು ಗೆಲುವು ಸಹಜ. ಸೋತವರು ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ. ಕಾರಣ ಸೋಲೇ ಗೆಲುವಿನ ಸೋಪಾನ. ಸೋಲು ಮುಂದೆ ಗೆಲುವಿನ ಸುಳುಹುಗಳನ್ನು ನೀಡುತ್ತದೆ’ ಎಂದು ತಿಳಿಸಿದರು.

ADVERTISEMENT

ಅಬಕಾರಿ ಉಪ ಆಯುಕ್ತ ವೀರಣ್ಣ ಬಾಗೇವಾಡಿ ಮಾತನಾಡಿ, ‘ಸಹಪಠ್ಯೇತರ ಚಟುವಟಿಕೆಯು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುತ್ತದೆ. ಅಷ್ಟೇ ಅಲ್ಲ ಸ್ವಯಂ ಪ್ರೇರಣೆಯ ಕಲಿಕೆಗೆ ನೆರವಾಗುತ್ತದೆ’ ಎಂದು ಹೇಳಿದರು.

ತೋಟಗಾರಿಕೆ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್‌ ಡಾ.ಎಸ್‌.ಐ.ಅಥಣಿ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನ ಗಳ ವಿಶ್ವವಿದ್ಯಾಲಯ ಪ್ರೊ.ಎಂ.ಡಿ.ಸುರನಗಿ,
ತೋಟಗಾರಿಕೆ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿರ್ದೇಶಕ ಡಾ.ಎಂ‌.ಕೆ.ಹೊನ್ನಖೈರಯ್ಯ, ಬೀದರ್‌ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ರವೀಂದ್ರ ಮೂಲಗೆ. ಬಾಗಲಕೋಟೆ ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಡಾ.ಎಚ್‌.ಜಿ.ಪಾಟೀಲ, ಬೆಂಗಳೂರಿನ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಆರ್‌.ಸಿ.ಜಗದೀಶ್, ಅರಭಾವಿಯ ಕಿತ್ತೂರು ರಾಣಿ ಚೆನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯದ ಡೀನ್‌ ಡಾ.ನಾಗೇಶ ನಾಯ್ಕ ಇದ್ದರು.
ಪ್ರೊ.ಪ್ರವೀಣ ನಾಯ್ಕೊಡಿ ಸ್ವಾಗತಿಸಿದರು. ಪ್ರೊ.ಶ್ರೀನಿವಾಸ್‌ ಎನ್‌. ಪ್ರಾಸ್ತಾವಿಕವಾಗಿ ಮಾತನಾಡಿದರು.

ಭಾನುವಾರ ಭಾಷಣ, ಆಶುಭಾಷಣ, ಚರ್ಚಾ ಸ್ಪರ್ಧೆ, ಚಿತ್ರಬಿಡಿಸುವಿಕೆ ಸ್ಪರ್ಧೆ, ಮಣ್ಣಿನ ಆಕೃತಿ ರಚನೆ, ಏಕಾಂಕ ನಾಟಕ ಸ್ಪರ್ಧೆಗಳು ನಡೆದವು. ಸೋಮವಾರ ರಸಪ್ರಶ್ನೆ, ಏಕಪಾತ್ರಾಭಿನಯ ಹಾಗೂ ಮೂಕಾಭಿನಯ ಸ್ಪರ್ಧೆಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.