ಬೀದರ್: ದತ್ತಾತ್ರೇಯರ ಎರಡನೇ ಅವತಾರವಾದ ನರಸಿಂಹ ಸರಸ್ವತಿ ಮಹಾರಾಜರು ಶ್ರೀಶೈಲ ಲಿಂಗದಲ್ಲಿ ಐಕ್ಯರಾದ ದಿನದ ವಾರ್ಷಿಕೋತ್ಸವವು ಶ್ರೀಶೈಲದಲ್ಲಿ ಫೆ. 26 ರಿಂದ 28 ರ ವರೆಗೆ ನಡೆಯಲಿದೆ.
ಪಾತಾಳಗಂಗಾ ರಸ್ತೆಯಲ್ಲಿ ಇರುವ ದತ್ತಗಿರಿ ಮಹಾರಾಜ ಆಶ್ರಮದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬರ್ದಿಪುರ ಆಶ್ರಮದ 108 ವೈರಾಗ್ಯ ಶಿಖಾಮಣಿ ಅವಧೂತಗಿರಿ ಮಹಾರಾಜರು ತಿಳಿಸಿದ್ದಾರೆ.
ಬೆಳಿಗ್ಗೆಯಿಂದ ಸಂಜೆವರೆಗೆ ಗಣಪತಿ ಹೋಮ, ರುದ್ರ ಹೋಮ, ದತ್ತ ಹೋಮ, ಮಹಾ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ವಿಶ್ವ ಮಾನವ ಧರ್ಮ ಪ್ರಚಾರ ಸಂಘದ ವತಿಯಿಂದ ಪ್ರವಚನವೂ ನಡೆಯಲಿದೆ ಎಂದು ಹೇಳಿದ್ದಾರೆ.
ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಮನವಿ ಮಾಡಿದ್ದಾರೆ.
ಪೋಸ್ಟರ್ ಬಿಡುಗಡೆ: ನಗರದ ದತ್ತಗಿರಿ ಮಹಾರಾಜ ಕನ್ನಡ ಮಾಧ್ಯಮ ಪಬ್ಲಿಕ್ ಶಾಲೆಯಲ್ಲಿ ನರಸಿಂಹ ಸರಸ್ವತಿ ಮಹಾರಾಜರ ಐಕ್ಯ ದಿನ ವಾರ್ಷಿಕೋತ್ಸವದ ಪೋಸ್ಟರ್ನ್ನು ಮಾಜಿ ಶಾಸಕರೂ ಆದ ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯ ಗೌರವಾಧ್ಯಕ್ಷ ರಮೇಶಕುಮಾರ ಪಾಂಡೆ ಗುರುವಾರ ಬಿಡುಗಡೆ ಮಾಡಿದರು.
ಬರ್ದಿಪುರದ 108 ವೈರಾಗ್ಯ ಶಿಖಾಮಣಿ ಅವಧೂತಗಿರಿ ಮಹಾರಾಜ, ನ್ಯಾಮತಾಬಾದ್ ದತ್ತಗಿರಿ ಆಶ್ರಮದ ವಿಶ್ವ ಆನಂದಗಿರಿ ಮಹಾರಾಜ, ದತ್ತಗಿರಿ ಮಹಾರಾಜ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಹತ್ತಿ, ಜಂಟಿ ಕಾರ್ಯದರ್ಶಿ ರಮೇಶ ಜಿ. ದುಕಾನದಾರ್, ದತ್ತಗಿರಿ ಮಹಾರಾಜ ಕನ್ನಡ ಮಾಧ್ಯಮ ಪಬ್ಲಿಕ್ ಶಾಲೆ ಪ್ರಾಚಾರ್ಯೆ ಮಹಾದೇವಿ ಬೀದೆ, ದತ್ತಗಿರಿ ಮಹಾರಾಜ ಪದವಿಪೂರ್ವ ಕಾಲೇಜು ಉಪ ಪ್ರಾಚಾರ್ಯ ರೇವಣಸಿದ್ದಪ್ಪ ಸ್ವಾಮಿ ಮೊದಲಾದವರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.