ADVERTISEMENT

ಹುಮನಾಬಾದ್: ಚಾಂಗಲೇರಾ ವೀರಭದ್ರೇಶ್ವರ ಜಾತ್ರೆ ನ.3ರಿಂದ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 7:06 IST
Last Updated 31 ಅಕ್ಟೋಬರ್ 2025, 7:06 IST
ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ ಗ್ರಾಮದ ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನ
ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ ಗ್ರಾಮದ ಐತಿಹಾಸಿಕ ವೀರಭದ್ರೇಶ್ವರ ದೇವಸ್ಥಾನ   

ಚಿಟಗುಪ್ಪ (ಹುಮನಾಬಾದ್) : ಚಿಟಗುಪ್ಪ ತಾಲ್ಲೂಕಿನ ಚಾಂಗಲೇರಾ ಗ್ರಾಮದ ಐತಿಹಾಸಿಕ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ನ.3ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರುಗಲಿದೆ.

ದುಷ್ಟರ ಸಂಹಾರಕ, ಶಿಷ್ಟರ ಪರಿಪಾಲಕ ಎಂದೇ ಕರೆಸಿಕೊಳ್ಳುವ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನ. 5 ರಂದು ನಸುಕಿನ ಜಾವ ಗುರುಲಿಂಗ ಶಿವಾಚಾರ್ಯ ಹಾಗೂ ಮರುಳಾರಾಧ್ಯ ಶಿವಾಚಾರ್ಯರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನದಂತೆ ಪೂಜೆ ಸಲ್ಲಿಸಿ ಅಗ್ಗಿ ತುಳಿಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.

ಒಂದು ಬಾರಿ ಅಗ್ನಿ ತುಳಿದರೆ ತಪ್ಪದೆ ಪ್ರತಿವರ್ಷ ಜಾತ್ರೆಗೆ ಆಗಮಿಸಿ ಅಗ್ನಿ ತುಳಿಯಬೇಕು ಎಂಬ ಪ್ರತೀತಿ ಇದೆ. ಜಾತ್ರಾ ಮಹೋತ್ಸವದಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕ ರಾಜ್ಯದ ನಾನಾ ಜಿಲ್ಲೆಗಳು ಸೇರಿದಂತೆ ಹುಮನಾಬಾದ್ ಹಾಗೂ ಚಿಟಗುಪ್ಪ ತಾಲ್ಲೂಕಿನ ಗ್ರಾಮೀಣ ಭಾಗದ ಅಪಾರ ಭಕ್ತರು ಆಗಮಿಸಿ ವೀರಭದ್ರೇಶ್ವರ ದೇವರ ದರ್ಶನ ಪಡೆಯುತ್ತಾರೆ.

ADVERTISEMENT

ನ. 5 ರಂದು ಸಂಜೆ 7 ಗಂಟೆಗೆ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾಗುವ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆಯು ರಥ ಮೈದಾನಕ್ಕೆ ತಲುಪುತ್ತದೆ. ಬಳಿಕ ಐತಿಹಾಸಿಕ ರಥೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ವೀರಭದ್ರೇಶ್ವರ ದೇವರ ರಥವು ಬಸವಣ್ಣನ ದೇವಸ್ಥಾನದವರೆಗೆ ತೆರಳಿ ನಂತರ ಅದೇ ಮಾರ್ಗವಾಗಿ ರಥ ನಿಲ್ಲಿಸುವ ಸ್ಥಳದವರೆಗೆ ಭಕ್ತರು ಸಂಭ್ರಮದಿಂದ ಎಳೆಯುತ್ತಾರೆ.

ಉತ್ಸವ ಮೂರ್ತಿ ಹಾಗೂ ರಥೋತ್ಸವ ಮೆರವಣಿಗೆಯಲ್ಲಿ ದಾರಿಯುದ್ದಕ್ಕೂ ಚಿತ್ರಗೀತೆ, ಗಾಯನ, ಅನೇಕ ಬ್ಯಾಂಡ್, ಭಜನೆ, ನಂದಿ ಕುಣಿತ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಮೆರವಣಿಗೆಯಲ್ಲಿ ವಿಶೇಷವಾಗಿ ಮದ್ದು ಸುಡುವುದು ನೆರೆದ ಜನರ ಕಣ್ಮನ ಸೆಳೆಯುತ್ತದೆ.

ಕಾರ್ಯಕ್ರಮಗಳ ವಿವರ: ನ. 3ರಂದು ಬೆಳಿಗ್ಗೆ 6ರಿಂದ ಗುರುಲಿಂಗ ಶಿವಾಚಾರ್ಯರ ಹಾಗೂ ಮರುಳಾರಾಧ್ಯ ಶಿವಾಚಾರ್ಯರ ನೇತೃತ್ವದಲ್ಲಿ ದೇವರಿಗೆ ವಿಶೇಷ ಪೂಜೆ ಜರುಗುವುದು. ನಂತರ ವೇದಘೋಷಣೆಗಳೊಂದಿಗೆ ಅಗ್ನಿ ಪೂಜೆ ನೆರವೇರುವುದು. ನ. 4ರಂದು ಪಶುಗಳ ಪ್ರದರ್ಶನ. 5 ಗಂಟೆಗೆ ಕ್ಷೀರ ರುದ್ರಾಭಿಷೇಕ, ಶಿವಾನುಭವಗೋಷ್ಠಿ, ಸಂಗೀತ ದರ್ಬಾರ್, ದೇವಸ್ಥಾನದಿಂದ ಅಗ್ನಿಕುಂಡದವರೆಗೆ ಬೆಳ್ಳಿ ಪಲ್ಲಕ್ಕಿ ಉತ್ಸವ, ವೀರಗಾಸೆ, ಪುರವಂತರ ಸೇವೆ ಕಾರ್ಯಕ್ರಮ ಜರುಗುವವು. ನ. 5ರಂದು ಬೆಳಿಗ್ಗೆ 5:50ಕ್ಕೆ ಪೂಜ್ಯರ ಹಾಗೂ ಪುರವಂತರ ಸೇವೆಯೊಂದಿಗೆ ಅಗ್ನಿ ಪ್ರವೇಶ (ಅಗ್ನಿ ತುಳಿಯುವುದು), ಸಂಜೆ 6 ಗಂಟೆಗೆ ರಥೋತ್ಸವ ಉದ್ಘಾಟನಾ ಸಮಾರಂಭ ರಾತ್ರಿ 11:30 ಗಂಟೆಗೆ ರಥೋತ್ಸವ ಜರುಗುವುದು. ನ. 6ರಂದು ದೇವಸ್ಥಾನದ ಥೇರು ಮೈದಾನದಲ್ಲಿ ಬೆಳಿಗ್ಗೆ 9 ರಿಂದ 12ರ ವರೆಗೆ ಜಂಗಿ ಕುಸ್ತಿ ಜರುಗಲಿದೆ. ನ. 7ರಂದು ಸಂಜೆ ದೇವರ ಪಲ್ಲಕಿ ಮೆರವಣಿಗೆ ಪುರವಂತರ ಸೇವೆಯೊಂದಿಗೆ ದೇವಾಲಯದಿಂದ ಚಾಂಗಲೇರಾ ಗ್ರಾಮದವರೆಗೆ ನಡೆಯಲಿದೆ.

ಜಾತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್

ಚಾಂಗಲೇರಾ ಗ್ರಾಮದ ಐತಿಹಾಸಿಕ ವೀರಭದ್ರೇಶ್ವರ ಜಾತ್ರೆಗೆ ರಾಜ್ಯ ಸೇರಿದಂತೆ ವಿವಿಧ ರಾಜ್ಯಗಳ ಜನರು ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗುವುದು. ಸಿಪಿಐ ಪಿಎಸ್ಐ ಸೇರಿದಂತೆ ಸುಮಾರು 200ಕ್ಕೂ ಅಧಿಕ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ದೇವರ ದರ್ಶನ ಪಡೆದು ಹರಕೆ ಈಡೇರಿಸುವ ನಿಟ್ಟಿನಲ್ಲಿ ಹೆಚ್ಚಿನ ಜನರು ಜಾತ್ರೆಗೆ ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಪೂರ್ವ ತಯಾರಿಗಳನ್ನು ಪೊಲೀಸ್ ಇಲಾಖೆ ಮಾಡಿಕೊಂಡಿದೆ’ ಎಂದು ಡಿವೈಎಸ್ಪಿ ಮಡೋಳಪ್ಪ ಪ್ರಜಾವಾಣಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.