ಬಸವಕಲ್ಯಾಣ: ತಾಲ್ಲೂಕಿನ ರಾಜೇಶ್ವರದ ವಿಠಲ್ ರುಕ್ಮೀಣಿ ದೇವಸ್ಥಾನದಲ್ಲಿ ಶುಕ್ರವಾರ ಶ್ರಾವಣ ಸಮಾಪ್ತಿ, ದಿಂಡಿ ಮೆರವಣಿಗೆ ಮತ್ತು ಗೋಪಾಲಕಾಲಾ ಸಂಭ್ರಮದಿಂದ ನೆರವೇರಿತು.
ಧ್ವಜ ಪತಾಕೆ ಹಿಡಿದುಕೊಂಡು ಭಜನೆ ಮಾಡುತ್ತ ಗ್ರಾಮದ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಅನೇಕ ಮಹಿಳೆಯರು ತಲೆಮೇಲೆ ಕುಂಭ–ಕಳಶ ಹೊತ್ತುಕೊಂಡು ಪಾಲ್ಗೊಂಡಿದ್ದರು. ಮೆರವಣಿಗೆ ಮನೆಗಳ ಎದುರಲ್ಲಿ ಬಂದಾಗ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿ, ತೆಂಗು, ಕರ್ಪೂರ ಅರ್ಪಿಸಿದರು. ಕೆಲ ಮನೆಗಳ ಮಾಳಿಗೆಯ ಮೇಲೆ ನಿಂತುಕೊಂಡು ಭಕ್ತರು ದಿಂಡಿ ಮೇಲೆ ಪುಷ್ಪವೃಷ್ಟಿಗೈದರು.
ಮೆರವಣಿಗೆಯು ಶಿವಾಜಿ ಮಹಾರಾಜ ಚೌಕ್, ಭವಾನಿ ಮಂದಿರಕ್ಕೆ ಹೋಗಿ ಹಿಂದಿರುಗಿತು. ನಂತರ ವಿಠಲ್ ರುಕ್ಮೀಣಿ ದೇವಸ್ಥಾನದಲ್ಲಿ ಭಜನೆ, ಗೋಪಾಲಕಾಲಾ, ಸನ್ಮಾನ ಮತ್ತು ಅನ್ನ ಸಂತರ್ಪಣೆ ನಡೆಯಿತು. ಬ್ರಾಹ್ಮಣ ಸಮಾಜ ಸಂಘದ ಅಧ್ಯಕ್ಷ ಮಿಲಿಂದ ಕುಲಕರ್ಣಿಯವರು ದೇವಸ್ಥಾನ ಸಮಿತಿ ಅಧ್ಯಕ್ಷರು ಹಾಗೂ ಮರಾಠಾ ಸಮಾಜ ಸಂಘದ ಅಧ್ಯಕ್ಷರಿಗೆ ವಿಠಲ್ ರುಕ್ಮೀಣಿ ಭಾವಚಿತ್ರ ನೀಡಿ ಸನ್ಮಾನಿಸಿದರು. ಬಲಭೀಮರಾವ ಪಾಟೀಲ ಕೌಡಿಯಾಳ, ಶರಣಪ್ಪ ಜಮಾದಾರ, ಸುಭಾಷ ಸುಂಠಾಣಕರ್ ನೇತೃತ್ವದಲ್ಲಿ ಕಾಲಾ ಭಜನೆ ನಡೆಯಿತು.
ಮುಖಂಡರಾದ ಸತೀಶ ಪಾಟೀಲ, ದಿಲೀಪ ಜಾಧವ, ಭಾಸ್ಕರರಾವ್ ಕೋಕಾಟೆ, ಶಂಕರರಾವ್ ಘುಗರೆ, ಕೃಷ್ಣಾ ಮೋಹಿತೆ, ಸುಭಾಷ ಮಾನೆ, ನವೀನ ಪವಾರ, ಬಾಬು ಪ್ರಸಾದ ಶುಕ್ಲಾ, ಗುಂಡಪ್ಪ, ಮಾಣಿಕರಾವ್ ಘುಗರೆ, ರಾಹುಲ್ ಘುಗರೆ, ಸಚಿನ ಜಾಧವ, ರಾಚಣ್ಣ ನಂದಗಿ, ಶಾಮ ಮೋಹಿತೆ, ಬಲಭೀಮರಾವ್ ಜಾಧವ, ಮಹಾದೇವ ಮಾನೆ, ಶುಭಂ ಪಾಟೀಲ, ಅರವಿಂದ ಮಾನೆ, ರಾಮ ಮೊದಲಾದವರು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.