ADVERTISEMENT

ಕೆವಿಕೆಯಲ್ಲಿ ಇನ್ನು ರೈತರಿಗೆ ಶುದ್ಧ ನೀರು

ಕುಡಿಯುವ ನೀರಿನ ಘಟಕ ಸ್ಥಾಪಿಸಿದ ಮುಖಂಡ ಗುರುನಾಥ ಕೊಳ್ಳೂರ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 10:37 IST
Last Updated 9 ಅಕ್ಟೋಬರ್ 2019, 10:37 IST
ಬೀದರ್ ತಾಲ್ಲೂಕಿನ ಜನವಾಡದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪಾವನಧಾಮದ ಪ್ರತಿಮಾ ಬಹೆನ್‌ ಉದ್ಘಾಟಿಸಿದರು. ಗುರುನಾಥ ಕೊಳ್ಳೂರ, ಡಾ. ಭವಾನಿ ಇದ್ದರು
ಬೀದರ್ ತಾಲ್ಲೂಕಿನ ಜನವಾಡದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪಾವನಧಾಮದ ಪ್ರತಿಮಾ ಬಹೆನ್‌ ಉದ್ಘಾಟಿಸಿದರು. ಗುರುನಾಥ ಕೊಳ್ಳೂರ, ಡಾ. ಭವಾನಿ ಇದ್ದರು   

ಜನವಾಡ: ಬೀದರ್ ತಾಲ್ಲೂಕಿನ ಜನವಾಡ ಬಳಿಯ ಕೃಷಿ ವಿಜ್ಞಾನ ಕೇಂದ್ರ ದಲ್ಲಿ ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿ ಔದರ್ಯ ಮೆರೆದಿದ್ದಾರೆ.

ಕೇಂದ್ರಕ್ಕೆ ಬರುವ ರೈತರು, ತರಬೇತುದಾರರು ಹಾಗೂ ಕೃಷಿ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ತಂಪಾದ ಶುದ್ಧ ಕುಡಿಯುವ ನೀರು ಒದಗಿಸಲು ಅವರು ಘಟಕ ಸ್ಥಾಪಿಸಿದ್ದಾರೆ. ಕೇಂದ್ರದ ಆವರಣದಲ್ಲಿ ವಿಶ್ರಾಂತಿ ಪಡೆಯಲು ಬೇಂಚ್‌ಗಳನ್ನೂ ಹಾಕಿಸಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರವು ಕೇಂದ್ರದ ಆವರಣದಲ್ಲಿ ಅವರಿಗೆ ಅಭಿ ನಂದನಾ ಸಮಾರಂಭ ಏರ್ಪಡಿಸಿ ಕೃತಜ್ಞತೆ ಸಲ್ಲಿಸಿದೆ.
ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪಾವನ ಧಾಮ ಕೇಂದ್ರದ ಪ್ರತಿಮಾ ಬಹೆನ್‌ ಮಾತನಾಡಿ, ‘ಕೃಷಿ ವಿಜ್ಞಾನ ಕೇಂದ್ರಕ್ಕೆ ನಿರಂತರ ರೈತರು ಭೇಟಿ ಕೊಡುತ್ತಾರೆ. ಮೇಲಿಂದ ಮೇಲೆ ತರಬೇತಿ ಕಾರ್ಯಕ್ರಮಗಳು ನಡೆಯುತ್ತವೆ. ಕೃಷಿ ಡಿಪ್ಲೊಮಾ ಕಾಲೇಜು ಸಹ ಇದರೊಳಗೆ ಇದೆ. ಗುರುನಾಥ ಕೊಳ್ಳೂರ ಅವರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಶುದ್ಧ ನೀರಿನ ಘಟಕ ಸ್ಥಾಪಿಸಿ ರೈತರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಆವರಣದಲ್ಲಿ ಬೇಂಚ್‌ಗಳನ್ನೂ ಅಳವಡಿಸಿ ಮಾದರಿ ಕೆಲಸ ಮಾಡಿದ್ದಾರೆ’ ಎಂದು ಪ್ರಶಂಶಿಸಿದರು.

ADVERTISEMENT

‘ಸರಳ ಸ್ವಭಾವದ ಕೊಳ್ಳೂರ ಸಾಮಾಜಿಕ ಕಾಳಜಿ ಹೊಂದಿದ್ದಾರೆ. ಫಲಾಪೇಕ್ಷೆ ಇಲ್ಲದೆ ಸಮಾಜೋಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮನುಷ್ಯ ಯಾವಾಗಲೂ ಸತ್ಕಾರ್ಯಗಳನ್ನು ಮಾಡಬೇಕು. ಅದು ಉತ್ತಮ ಫಲವನ್ನೇ ನೀಡುತ್ತದೆ. ಒಳ್ಳೆಯ ಕೆಲಸ ಮಾಡುವವರಿಗೆ ಏನೂ ಕೊರತೆ ಆಗುವುದಿಲ್ಲ. ಸಮಾಜದ ಆಶೀರ್ವಾದ ಸದಾ ಅವರೊಂದಿಗೆ ಇರುತ್ತದೆ’ ಎಂದು ತಿಳಿಸಿದರು.

ಗುರುನಾಥ ಕೊಳ್ಳೂರ ಮಾತನಾಡಿ, ‘ರೈತ ಕುಟುಂಬದಿಂದ ಬಂದಿರುವ ನಾನು ಅನೇಕ ಕಷ್ಟಗಳನ್ನು ಎದುರಿಸಿದ್ದೇನೆ. ಕೃಷಿ ಕಾರ್ಮಿಕನಾಗಿ ಕೆಲಸ ಮಾಡಿದ್ದೇನೆ. ಪ್ರತಿ ಹಂತದಲ್ಲೂ ಸಂಘರ್ಷ ಮಾಡಿದ್ದೇನೆ. ಶ್ರಮದಿಂದ ಏನು ಬೇಕಾದರೂ ಸಾಧಿಸಬಹುದು. ಬೆವರು ಸುರಿಸಿ ದುಡಿದರೆ ಕೃಷಿಯಲ್ಲೂ ಒಳ್ಳೆಯ ಆದಾಯ ಪಡೆಯಬಹುದು’ ಎಂದು ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ.ಕೆ.ಭವಾನಿ ಅಧ್ಯಕ್ಷತೆ ವಹಿಸಿದ್ದರು. ಕೊಳ್ಳೂರ ಅವರಿಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.

ಕನ್ನಡ ಪರ ಸಂಘಟನೆಯ ಮುಖಂಡ ವಿರೂಪಾಕ್ಷ ಗಾದಗಿ, ಪ್ರಭುಶೆಟ್ಟಿ ಮುಚಳಂಬೆ, ರೋಹಿತ್ ಬಿರಾದಾರ, ಶಿವಾನಂದ ಬಿರಾದಾರ ಉಪಸ್ಥಿತರಿದ್ದರು.

ಡಾ. ಮಲ್ಲಿಕಾರ್ಜುನ ನಿಂಗದಳ್ಳಿ ಸ್ವಾಗತಿಸಿದರು. ರಾಮದಾಸ ಕಾಂಬಳೆ ನಿರೂಪಿಸಿದರು. ಸಿದ್ದು ಮಣಗೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.