ADVERTISEMENT

ಕಮಲನಗರ: ಒಂದು ಕೊಡ ನೀರಿಗೂ ಪರದಾಟ!

ಕ್ರಾಂತಿನಗರ ಬಡಾವಣೆಯ ಕೊಳವೆಬಾವಿ ದುರಸ್ತಿಗೆ ಮಹಿಳೆಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 7:16 IST
Last Updated 11 ಏಪ್ರಿಲ್ 2019, 7:16 IST
ಕಮಲನಗರ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿದ್ದ ಮಹಿಳೆಯರು ನೀರಿಗಾಗಿ ಒತ್ತಾಯಿಸಿದರು
ಕಮಲನಗರ ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿದ್ದ ಮಹಿಳೆಯರು ನೀರಿಗಾಗಿ ಒತ್ತಾಯಿಸಿದರು   

ಕಮಲನಗರ (ಬೀದರ್ ಜಿಲ್ಲೆ): ಪಟ್ಟಣದ ರೈಲ್ವೆ ನಿಲ್ದಾಣ ಬಳಿಯ ವಾರ್ಡ್‌ ಸಂಖ್ಯೆ 2ರ ಕ್ರಾಂತಿನಗರ ಬಡಾವಣೆಯಲ್ಲಿ ನೀರಿದ್ದರೂ ಕಳೆದ 3 ತಿಂಗಳಿಂದ ಕೊಡ ನೀರಿಗಾಗಿ ಪರದಾಡುವಂತಾಗಿದೆ.

50ಕ್ಕಿಂತ ಅಧಿಕ ಮನೆಗಳಿರುವ ಬಡಾವಣೆಗೆ ಒಂದೇ ಒಂದು ಕೊಳವೆ ಬಾವಿ ಇದೆ. ಇದನ್ನು ಬಿಟ್ಟು ಯಾವುದೇ ಜಲಮೂಲ ಇಲ್ಲ. ಇದ್ದ ಒಂದು ಕೊಳವೆ ಬಾವಿ ಒಂದೂವರೆ ತಿಂಗಳಿಂದ ಕೆಟ್ಟು ಹೋಗಿದೆ.

ಹಲವು ದಿನಗಳ ಹಿಂದೆ ದುರಸ್ತಿ ನೆಪದಲ್ಲಿ ತೆಗೆದುಕೊಂಡು ಹೋದ ಮೋಟಾರ್‌ನ್ನು ಮತ್ತೆ ಅಳವಡಿಸಿಲ್ಲ ಎಂದು ಮಲ್ಲಮ್ಮ ಪ್ರಭುರಾವ ಬೋರಾಳೆ ಹೇಳಿದರು.

ADVERTISEMENT

ಮೊದಲು ಸ್ವಲ್ಪ ನೀರು ಬರುತ್ತಿತ್ತು. ಈಗ ಜಲನಿರ್ಮಲ ಯೋಜನೆ ಅಡಿಯಲ್ಲಿ ಲಕ್ಷಾಂತರ ರೂಪಾಯಿ ಅನುದಾನದಲ್ಲಿ ನಿರ್ಮಿಸಿರುವ ಟ್ಯಾಂಕ್ ಇದ್ದರೂ ಜನ ನೀರಿಗಾಗಿ ಪರದಾಡುವಂತಾಗಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಿತಿವಂತರು ನಲ್ಲಿಗಳಿಗೆ ಮೋಟಾರ್ ಹಚ್ಚುವುದರಿಂದ ಮುಂದಿನ ಮನೆಗ
ಳಲ್ಲಿ ನೀರೇ ಬರುತ್ತಿಲ್ಲ. 15 ನಿಮಿಷದಲ್ಲಿ ಒಂದೆರಡು ಕೊಡ ನೀರು ಸಂಗ್ರಹಿಸುವುದು ಕಷ್ಟವಾಗಿದೆ. ಇಲ್ಲವಾದಲ್ಲಿ ಎಪಿಎಂಸಿ ಮಾರ್ಕೆಟ್‍ನಿಂದ ನೀರು ತರಬೇಕು ಎಂದು ಜಯಶ್ರೀ ಸಂಗಪ್ಪ ಪಾಟೀಲ ಹೇಳಿದರು.

ಮೋಟಾರ್ ದುರಸ್ತಿಗಾಗಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಕ್ರಮಕೈಗೊಳ್ಳಲು ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದರು.

ಬಡಾವಣೆಯ ಕೊಳವೆ ಬಾವಿ ಸೂತ್ತಲೂ ಗಲೀಜು ನೀರು ನಿಂತಿವೆ. ನೀರು ಬಿಡುವ ಸಿಬ್ಬಂದಿ ನಿರ್ಲಕ್ಷ್ಯ ಹಾಗೂ ಗ್ರಾ.ಪಂ ಅಧಿಕಾರಿಗಳ ನಿಸ್ಕಾಳಜಿಯಿಂದ ಸ್ವಚ್ಛತೆ ಇಲ್ಲದಂತಾಗಿದೆ ಎಂದು ಗಜರಾಬಾಯಿ ಕಾಂಬಳೆ, ಲಲಿತಾಬಾಯಿ ಪವಾರ, ಸಂಗೀತಾ ನಾಗರಾಜ ಚಿಂದೆ, ಕಾಂತಾಬಾಯಿ ಎಣಕುರೆ, ಕಾಶಿಬಾಯಿ ಗೋಖಲೆ, ವಿದ್ಯಾವತಿ ವೆಂಕಟರಾವ ಕಾಂಬಳೆ ಆಪಾದಿಸಿದ್ದಾರೆ.

ನೀರು ಒದಗಿಸಲು ವಿಫಲವಾದರೆ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ನಿವಾಸಿಗಳಾದ ರಾಧಾಬಾಯಿ, ಅನುಸಾಬಾಯಿ ಗೋವಿಂದರಾವ ತಾಂದಳೆ, ಕಮಲಾಬಾಯಿ ಪ್ರಭುರಾವ ಚವ್ಹಾಣ, ಭಾರತಬಾಯಿ ಕಾಂಬಳೆ, ಸಂಗೀತಾ ಕಾಂಬಳೆ, ಜಯರ್ಶರೀ ಪ್ರಕಾಶ ಕೊಲ್ಲಾಪುರೆ, ಲಲಿತಾ ವೆಂಕಟ ಬಾಂಡೆ, ಶೋಭಾ ವಿಶ್ವನಾಥ ಪಲ್ಲೆ, ಶ್ರೀದೇವಿ ನಾಗರಾಜ ಚತುರೆ, ಸಂಗೀತಾ ದೋಂಡಿಬಾ, ರೇಣುಕಾ ರಾಜೇಂಧ್ರ ಕಾಂಬಳೆ ಮತ್ತು ಜಗದೇವಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.