ADVERTISEMENT

ವಜ್ಯಜೀವಿಗಳ ದಾಹ ನೀಗಿಸಲು ನೀರಿನ ತೊಟ್ಟಿ

ತಾಲ್ಲೂಕಿನಲ್ಲಿದೆ ಎರಡು ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ

ಮನ್ನಥಪ್ಪ ಸ್ವಾಮಿ
Published 2 ಮೇ 2021, 6:58 IST
Last Updated 2 ಮೇ 2021, 6:58 IST
ಔರಾದ್ ತಾಲ್ಲೂಕಿನ ಗಡಿಕುಶನೂರ ಸಮೀಪ ಅರಣ್ಯ ಪ್ರದೇಶದಲ್ಲಿ ಪ್ರಾಣಿ ಪಕ್ಷಿಗಳ ದಾಹ ತಣಿಸಲು ತೋಡಲಾದ ನೀರು ಸಂಗ್ರಹ ತೊಟ್ಟಿಯಲ್ಲಿ ನೀರು ಹಾಕುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ
ಔರಾದ್ ತಾಲ್ಲೂಕಿನ ಗಡಿಕುಶನೂರ ಸಮೀಪ ಅರಣ್ಯ ಪ್ರದೇಶದಲ್ಲಿ ಪ್ರಾಣಿ ಪಕ್ಷಿಗಳ ದಾಹ ತಣಿಸಲು ತೋಡಲಾದ ನೀರು ಸಂಗ್ರಹ ತೊಟ್ಟಿಯಲ್ಲಿ ನೀರು ಹಾಕುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ   

ಔರಾದ್: ಬೇಸಿಗೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಜಲಮೂಲ ಬತ್ತಿ ಹೋಗಿ ಜನ, ಜಾನುವಾರು ಹಾಗೂ ಪ್ರಾಣಿ, ಪಕ್ಷಿಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ಈ ನಡುವೆ ಅರಣ್ಯ ಇಲಾಖೆಯವರು ನಡೆಸುತ್ತಿರುವ ಪ್ರಾಣಿ ಮತ್ತು ಪಕ್ಷಿಗಳ ದಾಹ ನೀಗಿಸುವ ಮಹತ್ವದ ಕೆಲಸದಿಂದ ವನ್ಯಜೀವಿಗಳಿಗೆ ಆಸರೆಯಾಗಿದೆ.

ತಾಲ್ಲೂಕಿನ ಸುಮಾರು 2 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಇಲ್ಲಿ ಜಿಂಕೆ, ನವಿಲು, ಕೃಷ್ಣಮೃಗ, ನರಿ, ಕಾಡು ಹಂದಿ, ಮುಳ್ಳಹಂದಿ, ತೋಳದಂತಹ ಪ್ರಾಣಿ ಹಾಗೂ ಪಕ್ಷಿಗಳಿವೆ. ಬೇಸಿಗೆಯಲ್ಲಿ ಇವುಗಳಿಗೆ ಕುಡಿಯಲು ನೀರಿನ ಕೊರತೆಯಾಗಿ ವಲಸೆ ಹೋಗುವುದನ್ನು ತಪ್ಪಿಸಲು ಅರಣ್ಯ ಇಲಾಖೆ ನೀರು ಸಂಗ್ರಹ ತೊಟ್ಟಿ ವ್ಯವಸ್ಥೆ ಮಾಡಿದೆ.

‘ತಾಲ್ಲೂಕಿನ ಗಡಿಕುಶನೂರ, ಚಟ್ನಾಳ ಹಾಗೂ ಬಾಲೂರ್ ಗ್ರಾಮದ ಅರಣ್ಯ ಪ್ರದೇಶದಲ್ಲಿ 80 ಅಡಿ ಆಳ ಮತ್ತು 3 ಮೀಟರ್ ಸುತ್ತಳತೆಯ ಗುಂಡಿ ತೋಡಲಾಗಿದೆ. ಇಲ್ಲಿ ನಾಲ್ಕು ದಿನಕ್ಕೊಮ್ಮೆ ಒಂದೊಂದು ತೊಟ್ಟಿಯಲ್ಲಿ 7 ಸಾವಿರ ಲೀಟರ್ ನೀರು ಹಾಕಲಾಗುತ್ತದೆ. ಪ್ರಾಣಿಗಳ ಬರುವಿಕೆ ಮತ್ತು ತೊಟ್ಟಿ ಖಾಲಿಯಾಗಿರುವ ಕುರಿತು ಅಲ್ಲಿ ಅಳವಡಿಸಿದ ಕ್ಯಾಮರಾದಿಂದ ನಮಗೆ ಮಾಹಿತಿ ಸಿಗುತ್ತದೆ’ ಎಂದು ಇಲ್ಲಿಯ ವಲಯ ಅರಣ್ಯಾಧಿಕಾರಿ ಪ್ರೇಮಶೇಖರ್ ಚಾಂದೋರಿ ತಿಳಿಸುತ್ತಾರೆ.

ADVERTISEMENT

‘ಕಳೆದ ವರ್ಷದಿಂದ ಈ ರೀತಿ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ನೀರು ಪೂರೈಕೆ ವ್ಯವಸ್ಥೆ ಮಾಡಿದ್ದು ಸಾಕಷ್ಟು ಅನುಕೂಲವಾಗಿದೆ. ಪ್ರಾಣಿಗಳು ವಲಸೆ ಹೋಗುವುದು, ಗ್ರಾಮಗಳಲ್ಲಿ ಬಂದು ಜನರಿಗೆ ತೊಂದರೆ ಕೊಡುವುದು ತಪ್ಪಿದೆ’ ಎಂದು ಅವರು ಹೇಳಿದ್ದಾರೆ.

‘ಸದ್ಯ ಮೂರು ಕಡೆ ಇಂತಹ ನೀರು ಸಂಗ್ರಹ ತೊಟ್ಟಿ ವ್ಯವಸ್ಥೆ ಮಾಡಲಾಗಿದೆ. ಇನ್ನು ನಾಲ್ಕು ಕಡೆ ಈ ರೀತಿ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ಬೇಸಿಗೆ ವೇಳೆ ಚಿಂತಾಕಿ, ನಾಗನಪಲ್ಲಿ ಹಾಗೂ ದಾಬಕಾ ಹೋಬಳಿಯಲ್ಲೂ ಪ್ರಾಣಿಗಳಿಗೆ ನೀರು ಕುಡಿಯುವ ಸೌಲಭ್ಯ ಕಲ್ಪಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ ಅವರ ಕಾಳಜಿ ಮೇರೆಗೆ ಜಿಲ್ಲೆಯ ಹೆಚ್ಚು ಅರಣ್ಯ ಪ್ರದೇಶ ಹಾಗೂ ಪ್ರಾಣಿ ಪಶು ಸಂಪತ್ತು ಇರುವ ಕಡೆ ಇಂತಹ ನೀರು ಸಂಗ್ರಹ ತೊಟ್ಟಿ ನಿರ್ಮಿಸಿದ್ದು, ಪ್ರಾಣಿ ಪ್ರೀಯರು ಹಾಗೂ ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.