ಭಾಲ್ಕಿ: ತಾಲ್ಲೂಕಿನ ತಳವಾಡ ಗ್ರಾಮದ ಅಂಗವಿಕಲೆ ವಿಮಲಮ್ಮ ತುಕಾರಾಮಗೆ ಸ್ವಾವಲಂಬಿ ಜೀವನ ನಡೆಸಲು ಡಿವೈಎಸ್ಪಿ ದೇವರಾಜ ಬಿ. ಅವರ ಸಹಕಾರದಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಟೇಲರಿಂಗ್ ಮಷಿನ್, ವ್ಹೀಲ್ಚೇರ್, ವಾತ್ಸಲ್ಯ ಕಿಟ್ ಒಳಗೊಂಡು ಅಂದಾಜು ₹25 ಸಾವಿರ ಮೌಲ್ಯದ ಸಾಮಗ್ರಿಗಳನ್ನು ನೀಡಿದೆ.
ಗುಡಿಸಲು ಮನೆಗೆ ಬೆಂಕಿ ಬಿದ್ದು ಬಾಲ್ಯದಲ್ಲೇ ಕಾಲು ಕಳೆದುಕೊಂಡಿರುವ 36 ವರ್ಷದ ವಿಮಲಮ್ಮ ತುಕಾರಾಮಗೆ 2019ರ ಅಕ್ಟೋಬರ್ 2ರಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಟೇಲರಿಂಗ್ ತರಬೇತಿ ಕೇಂದ್ರ ತೆರೆಯಲು ಸರ್ಕಾರದಿಂದ ನೆರವು, ತ್ರಿಚಕ್ರ ವಾಹನ ಹಾಗೂ ವಸತಿ ಸೌಲಭ್ಯ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಒಂದೂವರೆ ವರ್ಷ ಕಳೆದರೂ ಸಚಿವರು ನೀಡಿದ ಭರವಸೆ ಈಡೇರದ ಹಿನ್ನೆಲೆಯಲ್ಲಿ ಪ್ರಜಾವಾಣಿ ಪತ್ರಿಕೆ ಈಚೆಗೆ ‘ಅಂಗವಿಕಲೆ ಗೋಳಿಗೆ ಸ್ಪಂದಿಸದ ಸರ್ಕಾರ’ ಎಂಬ ಶೀರ್ಷಿಕೆ ಅಡಿಯಲ್ಲಿ ವರದಿ ಪ್ರಕಟಿಸಿತ್ತು.
ಆನ್ಲೈನ್ನಲ್ಲಿ ವರದಿ ಓದಿದ ಉಡುಪಿಯ ಪೋಸ್ಟಲ್ ಸೆಕ್ಯೂರಿಟಿ ಫೋರ್ಸ್ ಅಧಿಕಾರಿ ಚೇತನ ಅವರು ಭಾಲ್ಕಿಯ ಡಿವೈಎಸ್ಪಿ ಅವರಿಗೆ ವರದಿಯ ಬಗ್ಗೆ ಮಾಹಿತಿ ನೀಡಿದ್ದರು. ಡಿವೈಎಸ್ಪಿ ದೇವರಾಜ್ ಬಿ. ಅವರು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಅಧಿಕಾರಿಗಳಿಗೆ ವಿಷಯವನ್ನು ತಿಳಿಸಿ ಅಂಗವಿಕಲೆಗೆ ನೆರವಾಗುವಂತೆ ಮಾಡಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ತಾಲ್ಲೂಕು ಯೋಜನಾಧಿಕಾರಿ ಮಹಾಂತೇಶ, ಯೋಗೇಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.