ADVERTISEMENT

ಕಾಡುಹಂದಿ ದಾಳಿ: ಇಬ್ಬರಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 15:28 IST
Last Updated 2 ಜುಲೈ 2019, 15:28 IST

ಬೀದರ್: ತಾಲ್ಲೂಕಿನ ಶಹಾಪುರ ಗ್ರಾಮದ ಹೊರ ವಲಯದಲ್ಲಿ ಮಂಗಳವಾರ ಮಧ್ಯಾಹ್ನ ಕುರಿ ಮೇಯಿಸುತ್ತಿದ್ದ ಇಬ್ಬರು ಕುರಿಗಾರರ ಮೇಲೆ ಕಾಡುಹಂದಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದೆ.

ಮಲ್ಕಾಪುರ ಗ್ರಾಮದ ಶಿವರಾಜ ಅಡಿವೆಪ್ಪ ಮಲ್ಕಾಪುರೆ ಹಾಗೂ ತುಕಾರಾಮ ಮಲ್ಲಪ್ಪ ಮಲ್ಕಾಪುರೆ ಅವರ ಕಾಲಿಗೆ ಬಲವಾಗಿ ಕಚ್ಚಿದ್ದು, ಬ್ರಿಮ್ಸ್‌ ಬೋಧಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಿವರಾಜ ಹಾಗೂ ತುಕಾರಾಮ ಕುರಿ ಮೇಯಿಸುತ್ತ ಹೊಲದಲ್ಲಿ ಕುಳಿತಿದ್ದಾಗ ಹಠಾತ್‌ ಆಗಿ ಬಂದ ಕಾಡು ಹಂದಿ ಶಿವರಾಜ ಅವರ ಕಾಲಿಗೆ ಕಚ್ಚಿದೆ. ಅದನ್ನು ಓಡಿಸಲು ಹೋದ ತುಕಾರಾಮ ಅವರ ಮೇಲೂ ದಾಳಿ ನಡೆಸಿದೆ.

ADVERTISEMENT

ತುಕಾರಾಮ ಅವರು ದಾಳಿಯಿಂದ ರಕ್ಷಿಸಿಕೊಳ್ಳಲು ಕಲ್ಲು ಬೀಸಿದಾಗ ಸ್ಥಳದಿಂದ ಓಡಿ ಹೋಗಿದೆ. ಶಹಾಪುರ ಸಮೀಪ ಕುರಚಲು ಕಾಡು ಇದೆ. ಕಾಡು ಹಂದಿಗಳ ಹಾವಳಿ ಹೆಚ್ಚಾಗಿದೆ. ಕಾಡುಹಂದಿಗಳು ಹೊಲದಲ್ಲಿ ಕೆಲಸ ಮಾಡುವವರ ಮೇಲೂ ದಾಳಿ ಇಡುತ್ತಿವೆ ಎಂದು ಶಿವರಾಜ ತಿಳಿಸಿದ್ದಾರೆ.

ಕ್ರೇನ್–ಬೈಕ್‌ ಡಿಕ್ಕಿ: ಸವಾರ ಸಾವು

ಬೀದರ್‌ನಶಿವನಗರ ಸಮೀಪ ಉದಗಿರ–ಬೀದರ್‌ ರಸ್ತೆಯಲ್ಲಿ ಕ್ರೇನ್ ಹಾಗೂ ಬೈಕ್‌ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯನ್ನು ಚಿಂಚೋಳಿಯ ಗಿರೀಶ ಕುಲಕರ್ಣಿ ಎಂದು ಗುರುತಿಸಲಾಗಿದೆ. ಅವರು ಕಂಪನಿಯೊಂದರ ಮಾರಾಟ ಪ್ರತಿನಿಧಿಯಾಗಿದ್ದರು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್‌ ತಿಳಿಸಿದ್ದಾರೆ.

ಸಂಚಾರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.