ಬೀದರ್: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಇಲ್ಲಿಯ ಎಸ್ವಿಇ ಶಿಕ್ಷಣ ಸಂಸ್ಥೆ ಸಂಚಾಲಿತ ಸಪ್ತಗಿರಿ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ತಲಾ ಒಂದು ಸಸಿ ಉಚಿತವಾಗಿ ವಿತರಿಸಲಾಯಿತು.
ಪ್ರಾಚಾರ್ಯ ಗೋವಿಂದರಾವ್ ತಾಂದಳೆ ಅವರು ಕರಿಬೇವು, ಬೇವು, ಅರಳಿ ಸೇರಿದಂತೆ ವಿವಿಧ ಬಗೆಯ ಸಸಿಗಳನ್ನು ವಿತರಿಸಿ, ತಮ್ಮ ತಮ್ಮ ಮನೆ ಆವರಣದಲ್ಲಿ ನೆಟ್ಟು, ಪೋಷಿಸಲು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ಅರಣ್ಯ ನಾಶವೇ ಪರಿಸರ ಹಾಳಾಗಲು ಕಾರಣವಾಗಿದೆ. ಮರ, ಗಿಡಗಳ ಸಂಖ್ಯೆ ಕಡಿಮೆಯಾಗಿರುವ ಕಾರಣ ಸರಿಯಾದ ಸಮಯಕ್ಕೆ ಮಳೆ ಬರುತ್ತಿಲ್ಲ. ಪ್ರಾಣಿ, ಪಕ್ಷಿಗಳ ಸಂತತಿಯೂ ನಶಿಸಿ ಹೋಗುತ್ತಿದೆ ಎಂದು ಹೇಳಿದರು.
ಪರಿಸರ ಉಳಿದರೆ ಮಾತ್ರ ಮಾನವನಿಗೆ ಉಳಿಗಾಲ ಇದೆ. ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.
ಪ್ರಾಣಿಶಾಸ್ತ್ರ ಉಪನ್ಯಾಸಕ ಡಾ. ಆಸಿಫ್, ಇಂಗ್ಲಿಷ್ ಉಪನ್ಯಾಸಕ ಸಾಗರ ಪಡಸಾರೆ ಹಾಗೂ ಜೀವಶಾಸ್ತ್ರ ಉಪನ್ಯಾಸಕ ಜೆ. ಅನಿಲಕುಮಾರ ಅವರು, ನಗರೀಕರಣ, ಕೈಗಾರೀಕರಣ ಹಾಗೂ ಅರಣ್ಯ ನಾಶದಿಂದ ಹವಾಮಾನ ಬದಲಾವಣೆ ಸೇರಿದಂತೆ ಪರಿಸರದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು.
ಉಪನ್ಯಾಸಕ ನಿಜಗುಣ ಇದ್ದರು. ಗಣಿತ ಉಪನ್ಯಾಸಕ ಚಂದ್ರಕಾಂತ ಝಬಾಡೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.