ಮನ್ನಳ್ಳಿ(ಜನವಾಡ): ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಬೀದರ್ ತಾಲ್ಲೂಕಿನ ಮನ್ನಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಯುವ ಸೌರಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಯಿತು.
ಯುವ ಕಲಾವಿದರು ವಿವಿಧ ಕಲಾ ಪ್ರಕಾರಗಳನ್ನು ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು. ಕಲಾವಿದರಾದ ಶಿವಾನಿ ಸ್ವಾಮಿ, ಆಕಾಶ, ಜೆಸ್ಸಿ, ದಿಲೀಪ್ ಕಾಡವಾದ ಹಾಗೂ ತಂಡ ಜಾನಪದ ಗಾಯನ, ಸ್ನೇಹಾ, ಮಾನಸ ಮತ್ತು ತಂಡ ಸುಗಮ ಸಂಗೀತ, ನಿಶಿತಾ ಹಾಗೂ ತಂಡ ನೃತ್ಯ ರೂಪಕ, ಪ್ರಗತಿ ಮತ್ತು ತಂಡ ಕಂಸಾಳೆ, ಶ್ವೇತಾ ಹಾಗೂ ತಂಡದವರು ಕೋಲಾಟ ಪ್ರದರ್ಶಿಸಿದರು. ಭಾವಗೀತೆ, ಹಾಸ್ಯ ಹಾಗೂ ನಾಟಕಗಳೂ ಸಭಿಕರ ಮನಸೂರೆಗೊಂಡವು.
ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೋಮಶೇಖರ ಬಿರಾದಾರ, ಜಿಲ್ಲೆಯ ಕಲಾವಿದರು ಯಾರಿಗಿಂತಲೂ ಕಡಿಮೆ ಇಲ್ಲ. ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡುತ್ತಿದ್ದಾರೆ ಎಂದು ಹೇಳಿದರು.
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಮನ್ನಳ್ಳಿ ಠಾಣೆ ಪಿಎಸ್ಐ ನಂದಿನಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಶಿಬಾಯಿ ಬಕ್ಕಪ್ಪ ಲಾಲಚಡಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಬ್ದುಲ್ ಸಮದ್ ಷಾ, ಪ್ರಮುಖರಾದ ಚಂದ್ರಶೇಖರ, ಮಾರುತಿ ರೆಡ್ಡಿ, ಕನಕರಾಯ, ಶಾಂತರಸ, ವಿಜಯಕುಮಾರ ದೇವಾ ಇದ್ದರು. ದೇವಿದಾಸ ಜೋಶಿ ನಿರೂಪಿಸಿದರು. ಕ್ಲಾಮೆಂಟಿನಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.