ಹುಮನಾಬಾದ್: ‘ಯುವಜನತೆಗೆ ಸ್ವಾತಂತ್ರ್ಯ ಹೋರಾಟಗಾರರು ಮಾದರಿಯಾಗಲಿ’ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಪಟ್ಟಣದ ತೇರು ಮೈದಾನದಲ್ಲಿ ಯುವ ಬ್ರಿಗೇಡ್ನಿಂದ ನಡೆದ ಭಾರತಮಾತೆಯ ಪಲ್ಲಕಿ ಉತ್ಸವ ಹಾಗೂ ಕನ್ನಡ ತೇರು ಮೆರವಣಿಗೆ ಸಭೆಯಲ್ಲಿ ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹಲವರು ತ್ಯಾಗ, ಬಲಿದಾನ ಮಾಡಿದ್ದಾರೆ. ಆದ್ದರಿಂದ ಇಂದು ನಾವು ಸುಖವಾಗಿದ್ದೇವೆ. ಯುವಜನತೆ ದೇಶ ಭಕ್ತಿ ಮೈಗೂಡಿಸಿಕೊಂಡು ಸದೃಢ ರಾಷ್ಟ್ರ ನಿರ್ಮಾಣಕ್ಕೆ ಪಣ ತೋಡಬೇಕು ಎಂದರು.
ಸಾನಿಧ್ಯ ವಹಿಸಿದ್ದ ಹಿರೇಮಠದ ರೇಣುಕಾ ವೀರಗಂಗಾಧರ ಶಿವಾಚಾರ್ಯರು, ಹಳ್ಳಿಖೇಡ್ ಕೆ. ಹಿರೇಮಠದ ಸಿದ್ದರಾಮ ಸ್ವಾಮೀಜಿ ಮಾತನಾಡಿ,‘ಸದೃಢ ಸಮಾಜ ನಿರ್ಮಾಣ ಯುವಜನತೆಯ ಕೈಯಲ್ಲಿದೆ. ಹೀಗಾಗಿ ಉತ್ತಮ ಸಂಸ್ಕಾರವನ್ನು ಪಡೆಯಬೇಕು. ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆ ಅಧ್ಯಯನ ಮಾಡಬೇಕು’ ಎಂದು ಹೇಳಿದರು.
ಯುವ ಬ್ರಿಗೇಡ್ನ ಪ್ರಮುಖರಾದ ವರ್ಧಮಾನ ತ್ಯಾಗಿ ಹಾಗೂ ಲಕ್ಷ್ಮೀಕಾಂತ ಹಿಂದೋಡ್ಡಿ ಇದ್ದರು.
ಮೆರವಣಿಗೆ: ಸುಂದರಕಾಂಡ ಸ್ವಾತಂತ್ರ್ಯ ಶ್ರಾವಣ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9.30ಕ್ಕೆ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ತೇರು ಮೈದಾನದವರೆಗೂ ಭಾರತ ಮಾತೆ ಪಲ್ಲಕಿ ಉತ್ಸವ ಹಾಗೂ ಕನ್ನಡ ತೇರು ಮೆರವಣಿಗೆ ನಡೆಯಿತು.
ಹಿರೇಮಠದ ರೇಣುಕಾ ವೀರಗಂಗಾಧರ ಶಿವಾಚಾರ್ಯರು ಮೆರವಣಿಗೆಗೆ ಚಾಲನೆ ನೀಡಿದರು. ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಸೇರಿದಂತೆ ಹಲವರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.