ಚಾಮರಾಜನಗರ: ಜಿಲ್ಲೆಯಲ್ಲಿ ಬರ ನಿರ್ವಹಣೆಗೆ ರಾಜ್ಯ ಸರ್ಕಾರ ತಳೆದಿರುವ ದಿವ್ಯನಿರ್ಲಕ್ಷ್ಯ ಖಂಡಿಸಿ ಮೇ 5ರಂದು ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ `ನಡು ಬೀದಿಯಲ್ಲಿ ಮಲಗುವ ಚಳವಳಿ~ ಹಮ್ಮಿಕೊಳ್ಳಲಾಗಿದೆ.
`ಬರದಿಂದ ಜಿಲ್ಲೆಯ ಜನ-ಜಾನುವಾರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಸಂಪೂರ್ಣವಾಗಿ ವೈಫಲ್ಯ ಕಂಡಿದೆ.
ಸಮರ್ಪಕವಾಗಿ ಕುಡಿಯುವ ನೀರು ಹಾಗೂ ಮೇವು ಪೂರೈಕೆಯಾಗಿಲ್ಲ. ಬರ ಪರಿಹಾರ ಕಾಮಗಾರಿ ಅನುಷ್ಠಾನವೂ ಸಮರ್ಪಕವಾಗಿಲ್ಲ. ಈ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗೆ ಹೆಚ್ಚಿನ ಅನುದಾನ ಬಿಡುಗಡೆ ಹಾಗೂ ಉದ್ಯೋಗಾವಕಾಶ ಸೃಷ್ಟಿಸಲು ಆಗ್ರಹಿಸಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ~ ಎಂದು ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲ ತಲೆದೋರಿದೆ. ಈ ಸಂಬಂಧ ಕೇಂದ್ರದ ನೆರವು ಕೋರಿ ಸರ್ವಪಕ್ಷದ ನಿಯೋಗ ತೆರೆಯುವ ಬಗ್ಗೆ ಸಭೆಯೂ ನಡೆ ದಿದೆ. 4,500 ಕೋಟಿ ರೂ ಬೆಳೆ ನಷ್ಟವಾಗಿದೆ. ಆದರೂ, ನಿಯೋಗ ತೆರಳಿ ಪ್ರಧಾನ ಮಂತ್ರಿಗೆ ಮನವಿ ಸಲ್ಲಿ ಸಲು ವಿಳಂಬ ಮಾಡ ಲಾಗುತ್ತಿದೆ. ಇದಕ್ಕಿಂತ ದುಃಖದ ಸಂಗತಿ ಬೇರೊಂದಿಲ್ಲ. ರಾಜ್ಯ ಪ್ರತಿನಿಧಿಸುವ ಕೇಂದ್ರದ ಮಂತ್ರಿಗಳು ಕೂಡ ನಿರ್ಲಕ್ಷ್ಯವಹಿಸಿದ್ದಾರೆ ಎಂದು ದೂರಿದರು.
ಬರ ಪರಿಹಾರಕ್ಕೆ ಎಷ್ಟು ಅನುದಾನ ನೀಡಲಾಗಿದೆ? ಎಂಬ ಬಗ್ಗೆ ಸರ್ಕಾರ ಸ್ಪಷ್ಟಪಡಿಸಿಲ್ಲ. ಪರಿಹಾರ ಸಂಬಂಧ ಉಸ್ತುವಾರಿ ಸಮಿತಿ ಕೂಡ ರಚಿಸಿಲ್ಲ. ಆಡಳಿತ ಪಕ್ಷವಾದ ಬಿಜೆಪಿಯ ಮುಖಂಡರು ಗೊಂದಲದಲ್ಲಿದ್ದಾರೆ. ಪ್ರತಿಪಕ್ಷದ ಮುಖಂಡರು ಟೀಕೆಯಲ್ಲಿ ಮುಳುಗಿದ್ದಾರೆ. ಇದರ ಪರಿಣಾಮ ಜಾನುವಾರು ಸಾಯುತ್ತಿವೆ. ಕೂಡಲೇ, ಬರ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಕೆರೆಗಳ ಹೂಳು ತೆಗೆಯುವಲ್ಲಿಯೂ ಅವ್ಯವಹಾರ ನಡೆದಿದೆ. ಬರ ಪರಿಹಾರ ಕಾಮಗಾರಿ ಯಲ್ಲೂ ಲೋಪವಾಗಿದೆ. ಅರಿಸಿನ ಖರೀದಿಯ ಮಾರ್ಗಸೂಚಿ ಸಮರ್ಪಕವಾಗಿಲ್ಲ ಎಂದ ಅವರು, ನದಿ ಮೂಲದಿಂದ ಎಲ್ಲ ನಗರ, ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯವಹಿಸಿದೆ. ಈ ಸಂಬಂಧ ಬಜೆಟ್ನಲ್ಲೂ ಅನುದಾನ ಮೀಸಲಿಡಲು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹಿಂದೇಟು ಹಾಕಿದ್ದಾರೆ ಎಂದು ಟೀಕಿಸಿದರು.
ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ನಿರ್ಲಕ್ಷ್ಯವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೇ 12ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು. ಸರ್ವಪಕ್ಷ ಸಭೆಗೆ ತಮ್ಮನ್ನು ಆಹ್ವಾನಿಸಿಲ್ಲ. ಹೀಗಾಗಿ, ನಾನು ಸಭೆಗೆ ಹೋಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.