ADVERTISEMENT

ರೋಟರಿ: ಸಾಮಾಜಿಕ ಸೇವೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 7 ಜುಲೈ 2012, 9:45 IST
Last Updated 7 ಜುಲೈ 2012, 9:45 IST

ಚಾಮರಾಜನಗರ: `ರೋಟರಿಯಲ್ಲಿ ಸದಸ್ಯರಾಗುವ ಮೂಲಕ ಸಮಾಜಕ್ಕೆ ಉಪಯುಕ್ತ ಸೇವೆ ಸಲ್ಲಿಸಬಹುದು~ ಎಂದು ರೋಟರಿಯ ನಿಯೋಜಿತ ಜಿಲ್ಲಾ ಗೌರ‌್ನರ್ ಎಸ್. ಗುರುರಾಜ್ ಹೇಳಿದರು.

ನಗರದ ರಕ್ಷಿತಾ ಮಹಲ್‌ನಲ್ಲಿ ಬುಧವಾರ ನಡೆದ ರೋಟರಿಯ ನೂತನ ಅಧ್ಯಕ್ಷ ಎಂ. ಮಹೇಶ್ ಮತ್ತು ಕಾರ್ಯದರ್ಶಿ ಯೋಗರಾಜ್ ತಂಡದ ಪದವಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ರೋಟರಿ ಸಂಸ್ಥೆಯಲ್ಲಿ ಪ್ರತಿಯೊಬ್ಬ ಸದಸ್ಯ ಕೂಡ ನಾಯಕನಾಗಿರುತ್ತಾನೆ. ಹೀಗಾಗಿ, ಅಧ್ಯಕ್ಷರಾದವರು ಎಲ್ಲರಿಗೂ ನಾಯಕರಾಗಿ ಕೆಲಸ ಮಾಡುವುದು ಕಷ್ಟಕರ. ರೋಟರಿ ಸಂಸ್ಥೆಯಂತಹ ಪ್ರತಿಯೊಂದು ಕ್ಲಬ್‌ನಲ್ಲಿಯೂ ಕಾಣದ ಕೈಗಳು ಸಹಾಯ ನೀಡುತ್ತವೆ. ಅಂತಹವರ ಸಹಕಾರ ನೂತನ ಸದಸ್ಯರಿಗೆ ಅತ್ಯಗತ್ಯವಾಗಿದೆ ಎಂದರು.

ಸಮಾಜ ಸೇವೆಯಂತಹ ಉತ್ತಮ ಕೆಲಸ ಮಾಡಿದಾಗ ಹಣದ ಕೊರತೆ ಬರುವುದಿಲ್ಲ. ರೋಟರಿ ಸಂಸ್ಥೆಯಲ್ಲಿ ಉತ್ತಮ ಸಾಮಾಜಿಕ ಸೇವೆ ಸಲ್ಲಿಸಲು ಸಾಕಷ್ಟು ಅವಕಾಶವಿರುತ್ತದೆ. ಸದಸ್ಯರು ಅಂತಹ ಕನಸುಗಳನ್ನು ನನಸು ಮಾಡಲು ಮುಂದಾಗಬೇಕು ಎಂದು ಹೇಳಿದರು.

ರೋಟರಿ ಸಹಾಯಕ ಗೌರ‌್ನರ್ ವಿ. ಪ್ರಭಾಕರ್ ಮಾತನಾಡಿ, ರೋಟರಿ ಸಂಸ್ಥೆಯಿಂದ ವಿಮಾ ಯೋಜನೆ, ಸೌರ ವಿದ್ಯುತ್‌ದೀಪ ಅಳವಡಿಕೆ, ಸೀಳುತುಟಿ ಮತ್ತು ನೇತ್ರ ತಪಾಸಣಾ ಚಿಕಿತ್ಸೆ, ಪಲ್ಸ್ ಪೋಲಿಯೊ ಸೇರಿದಂತೆ ವಿವಿಧ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ಹಾಗೂ ಹಿಂದಿ ಬಿ.ಇಡಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಮೇಘಶ್ರೀ ಅವರಿಗೆ ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಲಾಯಿತು.
 
ಕಾರ್ಯಕ್ರಮದಲ್ಲಿ ರೋಟರಿಯ ನಿಕಟಪೂರ್ವ ಅಧ್ಯಕ್ಷ ಹರೀಶ್, ಕಾರ್ಯದರ್ಶಿ ಸಿ.ಎಸ್. ರೇಣುಕಾ ಪ್ರಸಾದ್, ವಲಯ ಪ್ರತಿನಿಧಿ ಎ. ಪ್ರಶಾಂತ್, ಮಾಜಿ ಸಹಾಯಕ ಗೌರ‌್ನರ್ ಸಿ.ವಿ. ಶ್ರೀನಿವಾಸಶೆಟ್ಟಿ, ಬಿ.ಕೆ. ಮೋಹನ್, ಶಾಂತಮಲ್ಲಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.