ADVERTISEMENT

ಶಿಷ್ಟಾಚಾರ ಉಲ್ಲಂಘಿಸಿಲ್ಲ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 10:00 IST
Last Updated 8 ಅಕ್ಟೋಬರ್ 2011, 10:00 IST

ಚಾಮರಾಜನಗರ: `ಶಿಷ್ಟಾಚಾರದ ಪ್ರಕಾರವೇ ನಿಗಮದಿಂದ ಫಲಾನುಭವಿ ಗಳಿಗೆ ಸವಲತ್ತು ವಿತರಿಸಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಶಾಸಕರಿಗೂ ಮಾಹಿತಿ ತಿಳಿಸಲಾಗಿದೆ. ಆದರೆ, ಅವರು ಗೈರು ಹಾಜರಾಗಿರುವುದು ಅಸಮಾಧಾನ ತಂದಿದೆ~ ಎಂದು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ ಹೇಳಿದರು.

ತಾಲ್ಲೂಕಿನ ಕೋಳಿಪಾಳ್ಯ ಗ್ರಾಮದಲ್ಲಿ ಶುಕ್ರವಾರ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಶಿಲ್ಪಿ ಸಮೃದ್ಧಿ ಯೋಜನೆಯಡಿ ಹಮ್ಮಿಕೊಂಡಿದ್ದ ಸವಲತ್ತು ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ನನ್ನ ವಿವೇಚನಾ ಕೋಟಾದಡಿ 100 ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ. ಬಡ ಕರಕುಶಲಕರ್ಮಿಗಳ ಆರ್ಥಿಕ ಸ್ವಾವಲಂಬನೆಗೆ ನೆರವಾಗಲು ನಿಗಮ ಮುಂದಾಗಿದೆ. 10 ಸಾವಿರ ರೂ ಸಹಾಯಧನ ಸೇರಿದಂತೆ 10 ಸಾವಿರ ರೂ ಸಾಲ ಸೌಲಭ್ಯ ನೀಡಲಾಗಿದೆ~ ಎಂದು ವಿವರಿಸಿದರು.

2011-12ನೇ ಸಾಲಿಗೆ ಪರಿಶಿಷ್ಟರಿಗೆ ಸೌಲಭ್ಯ ಕಲ್ಪಿಸಲು 4,600 ಕೋಟಿ ರೂ ಮಂಜೂರು ಮಾಡಿದೆ. ನಿಗಮದ ಮೂಲಕ ಗಂಗಾಕಲ್ಯಾಣ ಯೋಜನೆಯಡಿ ಕೊಳವೆಬಾವಿ ಕೊರೆಯಿಸಲು ಘಟಕ ವೆಚ್ಚವನ್ನು 1.50 ಲಕ್ಷ ರೂ ನಿಗದಿಪಡಿಸ ಲಾಗಿದೆ. ಇದರಲ್ಲಿ 1 ಲಕ್ಷ ಹಣವನ್ನು ಸರ್ಕಾರ ನೀಡಲಿದೆ. ಉಳಿದ ಹಣವನ್ನು ಸಾಲದ ರೂಪದಲ್ಲಿ ನೀಡಲಾಗುವುದು ಎಂದರು.

ಗಂಗಾಕಲ್ಯಾಣ ಯೋಜನೆಯಡಿ ಜಿಲ್ಲೆಯಲ್ಲಿ 635 ಕೊಳವೆಬಾವಿಗಳಿಗೆ ಮಂಜೂರಾತಿ ನೀಡಲಾಗಿದೆ. ನಿಗಮದಿಂದ ಹೈನುಗಾರಿಕೆಗೂ ಸೌಲಭ್ಯ ಕಲ್ಪಿಸ ಲಾಗುತ್ತಿದೆ. ಮಹಿಳೆಯರ ಹೆಸರಿನಲ್ಲಿ ಸಾಲ ನೀಡಲಾಗುತ್ತಿದೆ. ಮರುಪಾವತಿಯಲ್ಲಿ ಮಹಿಳೆಯರು ಮುಂದಿರುವ ಹಿನ್ನೆಲೆಯಲ್ಲಿ ಅವರಿಗೆ ಸವಲತ್ತು ಕಲ್ಪಿಸಲಾಗುತ್ತಿದೆ ಎಂದು ಹೇಳಿದರು.

ವಿದೇಶಕ್ಕೆ ವಿದ್ಯಾಭ್ಯಾಸ ಮಾಡಲು ತೆರಳುವ ವಿದ್ಯಾರ್ಥಿಗಳಿಗೂ ನಿಗಮದಿಂದ ಕೇಂದ್ರ ಸರ್ಕಾರದ ಸಹಯೋಗದಡಿ ಆರ್ಥಿಕ ನೆರವು ನೀಡಲಾಗುವುದು. ನಿಗಮದಿಂದ ಹಲವು ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.