ADVERTISEMENT

ಸಂಭ್ರಮದ ಐನೂರು ಮಾರಮ್ಮ ಜಾತ್ರೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2013, 8:03 IST
Last Updated 10 ಜುಲೈ 2013, 8:03 IST
ಗುಂಡ್ಲುಪೇಟೆ ತಾಲ್ಲೂಕಿನ ಮೂಲೆಹೊಳೆ ಅರಣ್ಯದ ನಡುವೆ ಇರುವ ಐನೂರು ಮಾರಮ್ಮ ದೇವಸ್ಥಾನ ಆವರಣದಲ್ಲಿ  ಮಂಗಳವಾರ ನಡೆದ ಕೊಂಡೋತ್ಸವದಲ್ಲಿ ಹೊಂಗಹಳ್ಳಿ ಗ್ರಾಮದ ತಮ್ಮಡಿ ಸಿದ್ದಪ್ಪ ಕೊಂಡ ಹಾಯುತ್ತಿರುವುದು
ಗುಂಡ್ಲುಪೇಟೆ ತಾಲ್ಲೂಕಿನ ಮೂಲೆಹೊಳೆ ಅರಣ್ಯದ ನಡುವೆ ಇರುವ ಐನೂರು ಮಾರಮ್ಮ ದೇವಸ್ಥಾನ ಆವರಣದಲ್ಲಿ ಮಂಗಳವಾರ ನಡೆದ ಕೊಂಡೋತ್ಸವದಲ್ಲಿ ಹೊಂಗಹಳ್ಳಿ ಗ್ರಾಮದ ತಮ್ಮಡಿ ಸಿದ್ದಪ್ಪ ಕೊಂಡ ಹಾಯುತ್ತಿರುವುದು   

ಗುಂಡ್ಲುಪೇಟೆ: ತಾಲ್ಲೂಕಿನ ಮೂಲೆಹೊಳೆ ಅರಣ್ಯದ ನಡುವೆ ಸೋಮವಾರ ಆರಂಭಗೊಂಡ ಐನೂರು ಮಾರಮ್ಮದೇವಿಯ ಜಾತ್ರಾ ಮಹೋತ್ಸವವು ಅರಣ್ಯದಂಚಿನ ಗ್ರಾಮಗಳ ಸಹಕಾರದೊಂದಿಗೆ ಎರಡು ದಿನ ಅದ್ದೂರಿಯಾಗಿ ನಡೆಯಿತು.

ಬಂಡೀಪುರ ಅಭಯಾರಣ್ಯದ ವ್ಯಾಪ್ತಿಗೆ ಸೇರಿದ ಮೂಲೆಹೊಳೆ ಅರಣ್ಯದ ಐನೂರು ಮಾರಿಗುಡಿ ಅರಣ್ಯ ಶಿಬಿರದಿಂದ ಸುಮಾರು 2 ಕಿ.ಮೀ. ದೂರದಲ್ಲಿ  ಐನೂರು ಮಾರಮ್ಮ ದೇವತೆಯ ದೇವಸ್ಥಾನವಿದ್ದು, ಐತಿಹಾಸಿಕ ಮಹತ್ವ ಹೊಂದಿದೆ. ಆಷಾಢ ಅಮಾವಾಸ್ಯೆಯ ನಂತರದ ಸೋಮವಾರ ಮತ್ತು ಮಂಗಳವಾರಗಳಂದು  ಪ್ರತಿ ವರ್ಷ ಈ ಜಾತ್ರೆ ನಡೆಯುತ್ತದೆ. ತಾಲ್ಲೂಕಿನ  ಹೊಂಗಹಳ್ಳಿ, ಹಳ್ಳದಮಾದಹಳ್ಳಿ, ಕೊಡಸೋಗೆ, ದುಂದಾಸನಪುರ ಮುಂತಾದ ಗ್ರಾಮಗಳ ಜನರು ಸೋಮವಾರ ಬೆಳಿಗ್ಗೆ ಅರಣ್ಯಕ್ಕೆ ಪ್ರವೇಶಿಸಿದರು.

ನಂತರ ತಾವು ಮನೆಯಿಂದ ತಂದಿದ್ದ ಬುತ್ತಿಯನ್ನು ತಿಂದು, ನಂತರ ಕಾಡಿನ ಒಳಭಾಗದಲ್ಲಿ ಸಿಗುವ ಒಣ ಸೌದೆಯನ್ನು ಕೊಂಡೋತ್ಸವಕ್ಕಾಗಿ ಆರಿಸಿ ತಂದರು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಸಿದರು.

ಇಡೀ ರಾತ್ರಿ ಪೂಜೆ, ಭಜನೆಗಳು, ಸಾಮೂಹಿಕ ಪ್ರಾರ್ಥನೆಗಳು ನಡೆದವು. ಮಂಗಳವಾರ ಬೆಳಗಿನ ಜಾವ 5.30ಕ್ಕೆ ದೇವಿಯ ತಮ್ಮಡಿಯರಾದ ಹೊಂಗಹಳ್ಳಿ ಗ್ರಾಮದ ಸಿದ್ದಪ್ಪನವರು ಕೊಂಡ ಹಾಯ್ದರು.

ನಂತರ ಹರಕೆ ಹೊತ್ತ ಭಕ್ತರು ಕೊಂಡ ಹಾಯುವುದು, ಉರುಳುಸೇವೆ ಮಾಡಿ ಹರಕೆ ತೀರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.