ADVERTISEMENT

ಹಕ್ಕಿಗಳ ಹಾಡಿನಲ್ಲಿ ಪರಿಸರ ಪ್ರಜ್ಞೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2013, 5:55 IST
Last Updated 13 ಏಪ್ರಿಲ್ 2013, 5:55 IST

ಯಳಂದೂರು: `ಅಲ್ಲಿ ಅದ್ದೂರಿ ರಂಗ ಮಂಟಪವಿರಲಿಲ್ಲ, ಸಂಗೀತದ ಹಿಮ್ಮೇಳ ಇರಲಿಲ್ಲ, ಸಾಮಾನ್ಯ ಶಾಮಿಯಾನ ಬಳಸಿ ಮಾಡಲಾಗಿದ್ದ ರಂಗ ಸಜ್ಜಿಕೆ, ಇದರ ನಡುವೆಯೇ ನಾಟಕ ಶಿಕ್ಷಣ ಪಡೆದ ಪ್ರೌಢಶಾಲಾ ಮಕ್ಕಳ ಮನೋಜ್ಞ ಅಭಿನಯ, ಗಂಭೀರ ಸಂಭಾಷಣೆ, ಮುದ ನೀಡುವ ಕವನಗಳ ಸಾಲುಗಳು, ಮನ ಸೆಳೆವ ನೃತ್ಯ...

ಇದು ತಾಲ್ಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ನಾಟಕ ಶಿಕ್ಷಣ ಪಡೆದ ವಿದ್ಯಾರ್ಥಿಗಳು ನಡೆಸಿಕೊಟ್ಟ `ಎಲೆ ಗೊಂಚಲಿನ ಹಕ್ಕಿಗಳ ಹಾಡು' ಎಂಬ ಪರಿಸರ ಪ್ರಜ್ಞೆ ಸಾರುವ ನಾಟಕ ಪ್ರದರ್ಶನದಲ್ಲಿ ಕಂಡ ಬಂದ ದೃಶ್ಯಗಳು.

ಜಿಲ್ಲೆಯಲ್ಲೇ ಏಕೈಕ ನಾಟಕ ಶಿಕ್ಷಕರಿರುವ ಶಾಲೆ ಎಂದು ಖ್ಯಾತಿ ಪಡೆದಿರುವ ಇಲ್ಲಿ ಮಕ್ಕಳಿಗೆ ನಾಟಕ ಶಿಕ್ಷಣ ಹೇಳಿಕೊಡಲಾಗುತ್ತಿದೆ. ನಾಟಕ ಶಿಕ್ಷಕರಾದ ಮಧುಕರ ಮಳವಳ್ಳಿ ಅವರು ಇಲ್ಲಿನ ಮಕ್ಕಳಿಗೆ ರಂಗ ಗೀತೆಗಳು ಹಾಗೂ ನಾಟಕ ತರಬೇತಿ ನೀಡುತ್ತಿದ್ದಾರೆ. ಕಳೆದ 2 ವರ್ಷಗಳಿಂದ  ಸಂಪನ್ಮೂಲ ವ್ಯಕ್ತಿಗಳನ್ನು ಕರೆದು ನಾಟಕ ಕಲಿಸುವ ಪರಿಪಾಠವಿದೆ. ಈ ಬಾರಿ ಪರಿಸರ ಕಾಳಜಿಯುಳ್ಳ ಗಂಭೀರ ವಿಷಯದ ನಾಟಕ ಕಲಿಸಲು ಸಜ್ಜಾಗಿ ಕಳೆದ ಹಲವು ತಿಂಗಳಿಂದ ಮಕ್ಕಳಿಗೆ ಈ ಸಂಬಂಧ ತರಬೇತಿ ನೀಡಲಾಗಿತ್ತು.

ಇದಕ್ಕೂ ಮುಂಚೆ ಈ ನಾಟಕ ಕಲಿತ ವಿದ್ಯಾರ್ಥಿಗಳೇ ನಡೆಸಿಕೊಟ್ಟ, ಜನಪದ ನೃತ್ಯಗಳಾದ ಮಾರಿಕುಣಿತ, ದೇವರಕುಣಿತ, ಪರಿಸರ ಸಂರಕ್ಷಣೆಯ ಜನಪದ ಗೀತೆಗಳು, ರಂಗಗೀತೆಗಳು ಇಲ್ಲಿ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.