ಯಳಂದೂರು: ‘ಮನುಷ್ಯನ ಅತಿಯಾದ ದಾಹಕ್ಕೆ ಪೃಕೃತಿ ನಾಶವಾಗುತ್ತಿದೆ. ಪ್ರಾಕೃತಿಕ ಸಂಪತ್ತನ್ನು ಪೂಜಿಸುವುದನ್ನು ನಾವು ಕಲಿತಾಗ ಅದೂ ಕೂಡ ನಮ್ಮನ್ನು ರಕ್ಷಿಸುತ್ತದೆ’ ಎಂದು ಮಹದೇಶ್ವರ ಕಾಲೇಜಿನ ಭೂಗೋಳ ಶಾಸ್ತ್ರದ ಉಪನ್ಯಾಸಕ ಎ.ವಿ. ಶಿವಯ್ಯ ತಿಳಿಸಿದರು.
ಅವರು ಪಟ್ಟಣದ ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಭೂಗೋಳ ಶಾಸ್ತ್ರ ವಿಭಾಗದಿಂದ ಹಮ್ಮಿಕೊಂಡಿದ್ದ ಓಜೋನ್ ಪದರದ ಕ್ಷೀಣುಸುವಿಕೆ ಹಾಗೂ ಓಜೋನ್ ರಂಧ್ರ ಕುರಿತಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಅತಿಯಾದ ವಾಹನಗಳ ಬಳಕೆಯಿಂದ ಇಂದು ಸೌರವ್ಯೂಹದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ.
ಮುಂದೊಂದು ದಿನ ಓಜೋನ್ ಪದರಕ್ಕೆ ಇದು ಮಾರಕವಾಗಲಿದೆ. ಇದರ ರಕ್ಷಣೆ ಎಲ್ಲರ ಕರ್ತವ್ಯವಾಗಿದೆ. ಓಜೋನ್ ನಾಶದಿಂದ ಸೂರ್ಯನ ಅತಿ ನೇರಳೆ ಕಿರಣಗಳು ಮನುಷ್ಯನ ಮೇಲೆ ಬಿದ್ದಾಗ ಚರ್ಮ, ಕಣ್ಣು ಹಾಗೂ ಶ್ವಾಸ ಸಂಬಂಧಿ ರೋಗಗಳು ಹೆಚ್ಚಾಗುತ್ತದೆ. ಆಮ್ಲಮಳೆ ಹಾಗೂ ಪ್ರಾಕೃತಿಕ ವಿಪತ್ತುಗಳು ಸಂಭವಿಸುತ್ತದೆ.
ಈ ಬಗ್ಗೆ 1980 ರಿಂದಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಓಜೋನ್ ರಕ್ಷಣೆಯ ಬಗ್ಗೆ ಸಮ್ಮೇಳನ ನಡೆಯುತ್ತಿದೆ. ಇದರ ಉದ್ದೇಶ ಭವಿಷ್ಯ ದಲ್ಲಿ ಬರಬಹುದಾದ ಅವಘಡಗಳನ್ನು ತಪ್ಪಿಸುವುದೇ ಆಗಿದೆ. ಹಾಗಾಗಿಯೇ ಪ್ರತಿ ಸೆಪ್ಟೆಂಬರ್ 16 ರಂದು ವಿಶ್ವ ಓಜೋನ್ ದಿನಾಚರಣೆ ಆಚರಿಲಾಗುತ್ತಿದೆ. ಪ್ರತಿಯೊಬ್ಬರೂ ಓಜೋನ್ ರಕ್ಷಣೆಗೆ ಪಣ ತೊಡಬೇಕು ಎಂದರು.
ಪ್ರಾಂಶುಪಾಲ ಎಂ.ವಿ. ಪುಷ್ಪಕುಮಾರ್ ಮಾತನಾಡಿದರು. ಭೂಗೋಳ ಉಪನ್ಯಾಸಕ ಪ್ರಕಾಶಮೂರ್ತಿ, ಉಪನ್ಯಾಸಕರಾದ ಗಣೇಶ್ಪ್ರಸಾದ್ ಮಲ್ಲಿಕಾರ್ಜುನ್, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.