ADVERTISEMENT

ಚಾಮರಾಜನಗರ | 108 ಅಡಿ ಮಹದೇಶ್ವರ ಪ್ರತಿಮೆ: ಮಾರ್ಚ್‌ 18ರಂದು ಅನಾವರಣ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 23:41 IST
Last Updated 13 ಮಾರ್ಚ್ 2023, 23:41 IST
ಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡುವಿನಲ್ಲಿ ಸಿದ್ಧಗೊಂಡಿರುವ ಮಹದೇಶ್ವರ ಸ್ವಾಮಿ ಪ್ರತಿಮೆ
ಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡುವಿನಲ್ಲಿ ಸಿದ್ಧಗೊಂಡಿರುವ ಮಹದೇಶ್ವರ ಸ್ವಾಮಿ ಪ್ರತಿಮೆ   

ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ): ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ದೀಪದಗಿರಿ ಒಡ್ಡುವಿನಲ್ಲಿ ₹20 ಕೋಟಿ ವೆಚ್ಚದಲ್ಲಿ ಸಿದ್ಧಪಡಿಸಿರುವ 108 ಅಡಿ ಎತ್ತರದ ಮಹದೇಶ್ವರ ಸ್ವಾಮಿಯ ಪ್ರತಿಮೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾರ್ಚ್‌ 18ರಂದು ಅನಾವರಣಗೊಳಿಸಲಿದ್ದಾರೆ.

ತ್ರಿಶೂಲ ಹಿಡಿದು ಹುಲಿಯ ಮೇಲೆ ಕುಳಿತ ಮಹದೇಶ್ವರ ಸ್ವಾಮಿಯ ಪ್ರತಿಮೆ ಇದು. ಒಟ್ಟು 108 ಅಡಿ ಎತ್ತರದ ಪೈಕಿ ಅಡಿಪಾಯದ ಬಂಡೆಯ ರಚನೆ 27 ಅಡಿ ಇದ್ದು, ಹುಲಿ ಮತ್ತು ಮಾದಪ್ಪನ ಪ್ರತಿಕೃತಿ 81 ಅಡಿ ಎತ್ತರವಿದೆ.

ಪ್ರತಿಮೆಯ ಅಡಿಪಾಯದ ಬಂಡೆಯನ್ನು ಗುಹೆಯ ಮಾದರಿಯಲ್ಲಿ ನಿರ್ಮಿಸಲಾಗಿದೆ. ಮಹದೇಶ್ವರ ಚರಿತ್ರೆ ಸಾರುವ ಮ್ಯೂಸಿಯಂ ನಿರ್ಮಿಸಲು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಯೋಜಿಸಿದೆ. ಬಯಲು ರಂಗಮಂದಿರ, ಮೂಲಿಕಾ ವನ, ಪ್ರಕೃತಿ ಚಿಕಿತ್ಸಾ ಕೇಂದ್ರಗಳ ಅಭಿವೃದ್ಧಿಯೂ ನೀಲನಕ್ಷೆಯಲ್ಲಿದೆ. ಒಟ್ಟು 20 ಎಕರೆ ಜಾಗ ನೀಡಲಾಗಿದೆ.

ADVERTISEMENT

ಸದ್ಯ ಪ್ರತಿಮೆಯ ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಮೆ ನಿರ್ಮಾಣ ಯೋಜನೆ ಘೋಷಿಸಿದ್ದರು. ಖಾಸಗಿ ಜಮೀನು ಸ್ವಾಧೀನ ವಿಚಾರದಲ್ಲಿ ವಿಳಂಬವಾಗಿತ್ತು. 2019ರ ಫೆಬ್ರುವರಿಯಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.