ADVERTISEMENT

ಬಿಳಿಕಲ್ಲು ಕ್ವಾರಿ ಕುಸಿತ: ಮೂವರು ಕಾರ್ಮಿಕರು ಸಾವು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2022, 12:49 IST
Last Updated 26 ಡಿಸೆಂಬರ್ 2022, 12:49 IST
   

ಚಾಮರಾಜನಗರ: ತಾಲ್ಲೂಕಿನ ಬಿಸಿಲವಾಡಿ ಗ್ರಾಮ ಬಿಳಿಕಲ್ಲು ಕ್ವಾರಿಯೊಂದರಲ್ಲಿ ಕಲ್ಲು ಕುಸಿದು ಮೂವರು ಕಾರ್ಮಿಕರು ಸೋಮವಾರ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಕಾಗಲವಾಡಿ ಮೋಳೆಯ ಕುಮಾರ್ (28), ಶಿವರಾಜು (35) ಹಾಗೂ ಸಿದ್ದರಾಜು (27) ಮೃತಪಟ್ಟವರು.

ಈ ವರ್ಷದ ಮಾರ್ಚ್‌ 4ರಂದು ಗುಂಡ್ಲುಪೇಟೆ ತಾಲ್ಲೂಕಿನ ಮಡಹಳ್ಳಿಯಲ್ಲಿ ಬಿಳಿಕಲ್ಲು ಕ್ವಾರಿ ಗುಡ್ಡ ಕುಸಿದು ಮೂವರು ಮೃತಪಟ್ಟ ಘಟನೆಯ ನೆನಪು ಇನ್ನೂ ಹಸಿಯಾಗಿರುವಾಗಲೇ ಜಿಲ್ಲೆಯಲ್ಲಿ ಮತ್ತೊಂದು ದುರಂತ ನಡೆದಿದೆ.

ADVERTISEMENT

ಬಿಸಿಲವಾಡಿ ಗ್ರಾಮದ ಸರ್ವೆ ನಂಬರ್‌ 172ರಲ್ಲಿ ಈ ಕ್ವಾರಿ ಇದೆ. ರೇಣುಕಾದೇವಿ ಎಂಬುವವರು ಕ್ವಾರಿ ನಡೆಸುತ್ತಿದ್ದಾರೆ. 3 ಎಕರೆ ಜಾಗದಲ್ಲಿ ಗಣಿಗಾರಿಕೆ ನಡೆಸಲು ಅವರು ಪರವಾನಗಿ ಪಡೆದಿದ್ದಾರೆ. ಕ್ವಾರಿಯೂ 250 ಅಡಿಗೂ ಹೆಚ್ಚು ಆಳ ಹೊಂದಿದೆ.

ಗಣಿಯಲ್ಲಿ 12 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಕಾರ್ಮಿಕರೊಬ್ಬರು ಕ್ವಾರಿಯ ಗೋಡೆಗೆ ಹತ್ತಿ, ಮಧ್ಯದಲ್ಲಿ ಕಂಪ್ರೆಸರ್‌ ಬಳಸಿ ಕುಳಿ ತೆಗೆಯುತ್ತಿದ್ದರು. ಇನ್ನಿಬ್ಬರು ಕೆಳಗಡೆ ನಿಂತು ಅವರಿಗೆ ಸಹಾಯ ಮಾಡುತ್ತಿದ್ದರು. ಕುಳಿ ಮಾಡುವ ಸಂದರ್ಭದಲ್ಲಿ ಉಂಟಾಗುವ ಕಂಪನದಿಂದಾಗಿ ಮೇಲ್ಭಾಗದಲ್ಲಿರುವ ಕಲ್ಲಿನ ತುಂಡುಗಳು ಸಡಿಲಗೊಂಡು ಕುಸಿದಿವೆ. ಈ ಸಂದರ್ಭದಲ್ಲಿ ಮೇಲಿದ್ದ ಕಾರ್ಮಿಕ ಕೆಳಗಡೆ ಬಿದ್ದಿದ್ದಾರೆ. ಕಲ್ಲು ಬಂಡೆಗಳು ಕೆಳಗಡೆ ಇದ್ದ ಇಬ್ಬರ ಮೇಲೆ ಬಿದ್ದಿದೆ.

ತೀವ್ರವಾಗಿ ಗಾಯಗೊಂಡಿದ್ದ ಕುಮಾರ್ ಹಾಗೂ ಶಿವರಾಜು ಸ್ಥಳದಲ್ಲೇ ಮೃತಪಟ್ಟಿದ್ದರೆ, ಚಿಂತಾಜನಕ ಸ್ಥಿತಿಯಲ್ಲಿದ್ದ ಸಿದ್ದರಾಜು ಅವರನ್ನು ಸ್ಥಳೀಯರು ಹಾಗೂ ಪೊಲೀಸರು ಮೇಲಕ್ಕೆ ತಂದು ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಆದರೆ, ದಾರಿ ಮಧ್ಯೆಯೇ ಅವರು ಮೃತಪಟ್ಟರು.

ನಿಯಮ ಉಲ್ಲಂಘನೆ: ಕ್ವಾರಿಗೆ ಪರವಾನಗಿ ಇದ್ದರೂ, ಮಿತಿಗಿಂತ ಹೆಚ್ಚು ಆಳ ಮಾಡಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಈ ಗಣಿ 250–300 ಅಡಿಗಳಷ್ಟು ಆಳ ಇದೆ. ಗ್ರಾಮದಲ್ಲಿ ಇನ್ನೂ ಒಂದು ಕ್ವಾರಿ ನಡೆಯುತ್ತಿದೆ. ವರ್ಷದಿಂದಲೂ ಗಣಿ ಇಲಾಖೆ, ಅರಣ್ಯ ಇಲಾಖೆಗೆ ಮನವಿ ಕೊಟ್ಟು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದೆವು. ಆದರೆ, ಯಾರೂ ಗಮನಹರಿಸಿಲ್ಲ. ಈ ಘಟನೆಗೆ ಗಣಿ ಇಲಾಖೆ ಅಧಿಕಾರಿಗಳು, ಗಣಿ ಮಾಲೀಕರೇ ಕಾರಣ’ ಎಂದು ಗ್ರಾಮಸ್ಥ ರವಿ ಅವರು ದೂರಿದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕ ನಂಜುಂಡಸ್ವಾಮಿ, ‘ಮಡಹಳ್ಳಿ ಘಟನೆಯ ನಂತರ ಎಲ್ಲ ಗಣಿ ಮಾಲೀಕರಿಗೆ ನೋಟಿಸ್‌ ನೀಡಿ ಸುರಕ್ಷಿತ ಕ್ರಮ ಅನುಸರಿಸಬೇಕು ಎಂದು ಸೂಚಿಸಿದ್ದೆವು. ಎಲ್ಲ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದು ಗಣಿ ಮಾಲೀಕರು ಪ್ರಮಾಣ ಪತ್ರವನ್ನೂ ಸಲ್ಲಿಸಿದ್ದರು. ಈ ಗಣಿಯನ್ನು ಅವೈಜ್ಞಾನಿಕವಾಗಿ ನಿರ್ವಹಿಸುತ್ತಿರುವುದು ಕಂಡು ಬಂದಿದ್ದು, ಮಾಲೀಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಾಗಿಸಲಾಗುವುದು ಹಾಗೂ ಪರವಾನಗಿ ರದ್ದುಪಡಿಸಲು ಕ್ರಮ ವಹಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.