ಹನೂರು: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ಶಾಸಕ ಆರ್.ನರೇಂದ್ರ ಅವರ ಸಂಬಂಧಿ ಕಿದ್ವಾಯಿ ಆಸ್ಪತ್ರೆಯ ಡಾ.ಲೋಕೇಶ್ ಹಾಗೂ ಮುಂಬೈ ಟಾಟಾ ಮೆಮೋರಿಯಲ್ ಹಾಸ್ಪಿಟಲ್ ನಿರ್ದೇಶಕ ಡಾ.ಸಿ.ಎಸ್. ಪ್ರಮೇಶ್ ಅವರು ದೇಣಿಗೆ ನೀಡಿರುವ ₹ 25 ಲಕ್ಷ ಮೌಲ್ಯದ ವೈದ್ಯಕೀಯ ಪರಿಕರಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ಕುಮಾರ್ ಸೇವೆಗೆ ಅರ್ಪಿಸಿದರು.
ಕೊರೊನಾದಂತಹ ಸಂಕಷ್ಟದ ಕಾಲದಲ್ಲಿ ಇನ್ನೂ ಹೆಚ್ಚಿನ ಸ್ವಯಂಸೇವಾ ಸಂಘಗಳು ಹಾಗೂ ದಾನಿಗಳು ಜನತೆಯ ನೆರವಿಗೆ ಬರಬೇಕು. ಪ್ರಸ್ತುತ ನೀಡಲಾಗಿರುವ ಆಮ್ಲಜನಕ ಕಾನ್ಸೆಂಟ್ರೇಟರ್ಸ್ನಿಂದ 5 ಲೀಟರ್ ಆಮ್ಲಜನಕದ ಉತ್ಪಾದನೆಯಾಗುತ್ತದೆ. ಇದನ್ನು ಆಂಬುಲೆನ್ಸ್ನಲ್ಲಿ ತುರ್ತು ಸಂದರ್ಭಗಳಲ್ಲಿ ಅಳವಡಿಸಬಹು ದಾಗಿದ್ದು, ಕೆಲವು ಬ್ಯಾಟರಿ ಚಾಲಿತವಾಗಿವೆ ಎಂದು ಹೇಳಿದರು.
ಶಾಸಕ ಆರ್.ನರೇಂದ್ರ ಮಾತನಾಡಿ, ‘ನನ್ನ ಸಂಬಂಧಿಯಾದ ಕಿದ್ವಾಯಿ ಆಸ್ಪತ್ರೆಯ ಡಾ. ಲೋಕೇಶ್ ಅವರು ತಮ್ಮ ಎನ್ಜಿಒ ವತಿಯಿಂದ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಆಮ್ಲಜನಕ ಕಾನ್ಸೆಂಟ್ರೇಟರ್ಸ್ ನೀಡುತ್ತಿರುವುದನ್ನು ನಾನು ಗಮನಿಸಿದ್ದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಕೋವಿಡ್ ಕಾಯಿಲೆಯಿಂದ ಉಸಿರಾಟದ ತೊಂದರೆ ಕಂಡು ಬರುವ ನಮ್ಮ ತಾಲ್ಲೂಕಿನ ಆಸ್ಪತ್ರೆಗಳಿಗೆ ಈ ಸಲಕರಣೆಗಳನ್ನು ಒದಗಿಸಲು ಡಾ.ಲೋಕೇಶ್ ಅವರಿಗೆ ಮನವಿ ಮಾಡಿದ್ದೆ. ಈ ಹಿನ್ನೆಲೆಯಲ್ಲಿ ಮುಂಬೈ ಟಾಟಾ ಮೆಮೋರಿಯಲ್ ಹಾಸ್ಪಿಟಲ್ ನಿರ್ದೇಶಕ ಡಾ. ಸಿ.ಎಸ್.ಪ್ರಮೇಶ್ ಹಾಗೂ ಡಾ.ಲೋಕೇಶ್ ಅವರು 22 ಆಮ್ಲಜನಕ ಕಾನ್ಸನ್ಟ್ರೇಟರ್ ಹಾಗೂ 5 ಸಾವಿರ ಮಾಸ್ಕ್ಗಳು, ಪಲ್ಸ್ ಆಕ್ಸಿ ಮೀಟರ್ಗಳನ್ನು ನೀಡಿದ್ದಾರೆ. ಒಟ್ಟು ₹ 20 ರಿಂದ 25 ಲಕ್ಷ ಮೌಲ್ಯದ ಆರೋಗ್ಯ ಪರಿಕರಗಳನ್ನು ಅವರು ನೀಡಿದ್ದಾರೆ ಎಂದು ಮಾಹಿತಿ ನೀಡಿದರು.
‘70 ಆಮ್ಲಜನಕ ಹಾಸಿಗೆ ವ್ಯವಸ್ಥೆ’: ಜಿಲ್ಲೆಯಲ್ಲಿ ಸೋಂಕಿತರು ಹೆಚ್ಚಾಗುತ್ತಿರುವುದರಿಂದ 60ರಿಂದ 70 ಆಮ್ಲಜನಕದ ಹಾಸಿಗೆ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
ಆಮ್ಲಜನಕದ ಖಾತರಿ ಸಿಕ್ಕ ತಕ್ಷಣ ಜಿಲ್ಲಾ ಕೋವಿಡ್ ಆಸ್ಪತ್ರೆಯ ಹೊಸ ಬ್ಲಾಕ್ನಲ್ಲಿ ಈ ಹಾಸಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.
‘ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವ ಸಂಬಂಧ ಸರ್ಕಾರದ ಗಮನಕ್ಕೆ ತರಲಾಗಿದೆ. ಪರಿಹಾರದ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಇದು ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗಬೇಕಿರುವುದರಿಂದ ಈ ಬಗ್ಗೆ ಮುಖ್ಯಮಂತ್ರಿಗಳೇ ಕ್ರಮ ಕೈಗೊಳ್ಳಲಿದ್ದಾರೆ. ಜಿಲ್ಲೆಯಲ್ಲಿ ವಾರದ ನಾಲ್ಕು ದಿನ ಕಠಿಣ ಲಾಕ್ಡೌನ್ ಮಾಡಿದ ಹಿನ್ನೆಲೆಯಲ್ಲಿ ಕೊರೊನಾ ಪ್ರಕರಣಗಳು ಇಳಿಮುಖವಾಗುತ್ತಿವೆ’ ಎಂದು ಹೇಳಿದರು.
ನಂತರ ಅವರು ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಕೊವೀಡ್-19 ಪರೀಕ್ಷಾ ಕೇಂದ್ರ, ರಾಮಾಪುರ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಲೊಕ್ಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎನ್.ಸಿ.ರವಿ, ಉಪ ವಿಭಾಗಾಧಿಕಾರಿ ಗಿರೀಶ್ ದಿಲೀಪ್ ಬಡೋಲೆ, ತಹಶೀಲ್ದಾರ್ ಜಿ.ಎಚ್.ನಾಗರಾಜು, ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಕಾಶ್
ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.