
ಚಾಮರಾಜನಗರ: ಸಮಾನತೆ ಹಾಗೂ ಮಹಿಳಾ ಸಬಲೀಕರಣಕ್ಕೆ ಅಂಬೇಡ್ಕರ್ ನೀಡಿರುವ ಕೊಡುಗೆ ಅಪಾರ ಎಂದು ನಳಂದ ಬೌದ್ಧ ವಿಶ್ವವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಭಂತೆ ಬೋಧಿದತ್ತ ಥೇರ ಹೇಳಿದರು.
ತಾಲ್ಲೂಕಿನ ಯಡಪುರ ಗ್ರಾಮದಲ್ಲಿ ಮಹಿಳಾ ವಿಮೋಚನಾ ದಿನಾಚರಣೆ ಅಂಗವಾಗಿ ಇಂಟರ್ ನ್ಯಾಷನಲ್ ಬುದ್ಧಿಸ್ಟ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್, ಉಪಾಸಿಕ-ಉಪಾಸಕ ಸಂಘ, ನಳಂದ ಬೌದ್ದ ವಿಶ್ವವಿದ್ಯಾಲಯ ಧ್ಯಾನ ಮತ್ತು ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಕಂಡ ಬುದ್ಧನೆಡೆಗೆ ನಮ್ಮ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
1927 ಡಿ.12ರಂದು ಮಹಿಳಾ ವಿಮೋಚನೆ ಹಾಗೂ ಸ್ವಾತಂತ್ರ್ಯದ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು ಪ್ರತಿ ಮಹಿಳೆ ಕೂಡ ಅಂಬೇಡ್ಕರ್ ಅವರನ್ನು ಸ್ಮರಿಸಬೇಕು ಎಂದರು.
ಮಹಿಳೆಯರಿಗೆ ವಿಮೋಚನೆ ದೊರೆತ ದಿನ ದೇಶದಲ್ಲಿ ದೊಡ್ಡ ಬದಲಾವಣೆಯಾಗುತ್ತದೆ ಎಂದು ಅಂಬೇಡ್ಕರ್ ಬಲವಾಗಿ ನಂಬಿದ್ದರು. ಅವರ ವಿಮೋಚನಾ ರಥವನ್ನು ಮುಂದಕ್ಕೆ ಎಳೆದೊಯ್ಯಲು ಮಹಿಳೆಯರು ಸಾರಥ್ಯ ಅಗತ್ಯ. ಯಡಪುರ ಗ್ರಾಮದಲ್ಲಿ ಅಂಬೇಡ್ಕರ್ ಕಂಡ ಬುದ್ಧರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು ತಾಲ್ಲೂಕಿನಾದ್ಯಂತ ಪ್ರತಿ ಹಳ್ಳಿಗಳಿಗೆ ತಲುಪಿ ಧಮ್ಮವನ್ನು ಸಾರಲಿದೆ. ಡಿ.26ರಂದು ನಳಂದ ಮಹಾವಿಹಾರದಲ್ಲಿ ಬುದ್ಧವಂದನೆ ಹಾಗೂ ಧ್ಯಾನ ಕಾರ್ಯಕ್ರಮ ನಡೆಯಲಿದ್ದು ಜನತೆ ಭಾಗವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಯಶ ಬಂತೇಜಿ, ಉಪಾಸಕ ಎಂ.ಸಿದ್ದರಾಜು ಸೋಮವಾರಪೇಟೆ, ಯಡಪುರ ಗ್ರಾಮದ ಯಜಮಾನ ಮಹದೇವಸ್ವಾಮಿ,
ಮಾಜಿ ಯಜಮಾನ ಪಾಪಣ್ಣ, ಅಂಬೇಡ್ಕರ್ ಸಂಘದ ಅಧ್ಯಕ್ಷ ಮಹೇಶ್, ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.