ಚಾಮರಾಜನಗರ: ತಾಲ್ಲೂಕಿನ ದೊಡ್ಡರಾಯಪೇಟೆಯ ದಿವಂಗತ ಎ.ರಂಗಸ್ವಾಮಿ ಮಾಸ್ಟರ್ 2ನೇ ವರ್ಷದ ಪುಣ್ಯಸ್ಮರಣಾರ್ಥ ಅಂಗವಾಗಿ ಎಆರ್ಎಸ್ ಟ್ರಸ್ಟ್, ಕಾವೇರಿ ಡೆಂಟಲ್, ಓರಲ್ ಮೆಡಿಸನ್ ಕ್ಲಿನಿಕ್ ಹಾಗೂ ಕೊಯಮತ್ತೂರಿನ ಅರವಿಂದ ಕಣ್ಣಿನ ಆಸ್ಪತ್ರೆಗಳ ಸಹಯೋಗದಲ್ಲಿ ಭಾನುವಾರ ದೊಡ್ಡರಾಯಪೇಟೆಯ ಪ್ರೌಢಶಾಲೆಯಲ್ಲಿ ನಡೆದ ಕಣ್ಣಿನ ಉಚಿತ ತಪಾಸಣಾ ಶಿಬಿರದಲ್ಲಿ 350ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಇದೇ ಕಾರ್ಯಕ್ರಮದಲ್ಲಿ ಎಆರ್ಎಸ್ ಟ್ರಸ್ಟ್ ಅನ್ನೂ ಉದ್ಘಾಟಿಸಲಾಯಿತು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ‘ಶಿಕ್ಷಕರಾದ ರಂಗಸ್ವಾಮಿಯವರು ಉತ್ತಮ ಸೇವೆ ಸಲ್ಲಿಸುವ ಜೊತೆಗೆ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡಿಸುವ ಮೂಲಕ ಸಮಾಜಕ್ಕೆ ಆಸ್ತಿಯನ್ನಾಗಿ ಮಾಡಿದ್ದಾರೆ. ಅವರ ಹೆಸರಿನಲ್ಲಿ ಮೂರು ವರ್ಷಗಳಿಂದ ಸಮಾಜ ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ’ ಎಂದರು.
‘ರಂಗಸ್ವಾಮಿಯವರ ಮೂವರು ಮಕ್ಕಳಾದ ಡಾ.ಆರ್.ಕೃಪಾಶಂಕರ, ಅರುಣ್ ಕುಮಾರ್, ಅಜಿತ್ ಕುಮಾರ್ ಅವರು ದುಡಿಮೆಯ ಜೊತೆಗೆ ತಂದೆಯವರ ಹೆಸರಿನಲ್ಲಿ ಎಆರ್ಎಸ್ ಟ್ರಸ್ಟ್ ಸ್ಥಾಪಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿರುವುದು ಇತರರಿಗೆ ಮಾದರಿಯಾಗಿದ್ದಾರೆ’ ಎಂದರು.
ಸಾನಿಧ್ಯ ವಹಿಸಿದ್ದ ನಳಂದ ಬೌದ್ದ ವಿಶ್ವವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಬಂತೇ ಬೋಧಿದತ್ತ ಥೇರಾ ಮಾತನಾಡಿ, ‘ತಂದೆ, ತಾಯಿಯರವನ್ನು ನೆನೆಯುವುದು ಪ್ರತಿಯೊಬ್ಬರ ಕರ್ತವ್ಯ. ಅವರ ಋಣವನ್ನು ಯಾವುದೇ ರೀತಿಯಲ್ಲಿ ತೀರಿಸಲು ಸಾಧ್ಯವಿಲ್ಲ’ ಎಂದರು.
ಇದೇ ಸಂದರ್ಭದಲ್ಲಿ ನವೋದಯ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಗೈಡ್ ವಿತರಿಸಲಾಯಿತು
ಟ್ರಸ್ಟ್ ಅಧ್ಯಕ್ಷ ಡಾ.ಆರ್.ಕೃಪಾಶಂಕರ್ ಅಧ್ಯಕ್ಷತೆ ವಹಿಸಿದ್ದರು.
62 ಮಂದಿಗೆ ಶಸ್ತ್ರಚಿಕಿತ್ಸೆ: ತಪಾಸಣೆ ಮಾಡಿಕೊಂಡವರ ಪೈಕಿ 62 ಮಂದಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಅಗತ್ಯವಾಗಿದ್ದು, ಅವನ್ನು ಬಸ್ ಮೂಲಕ ಕೊಯಮತ್ತೂರಿನ ಅರವಿಂದ ಆಸ್ಪತ್ರೆಗೆ ಕಳುಹಿಸಲಾಯಿತು.
ಗ್ರಾಮದ ಸಂತ ತೆರೇಸಾ ಚರ್ಚ್ ಧರ್ಮಗುರು ಅಂಥೋಣಿರಾಜ್, ಪೊಲೀಸ್ ಇನ್ಸ್ಪೆಕ್ಟರ್ ಆನಂದ್, ಜಿಲ್ಲಾಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ಮಹೇಶ್, ಟ್ರಸ್ಟ್ನ ಗೌರವ ಅಧ್ಯಕ್ಷೆ ಎಚ್.ಕೆ.ಯಶೋಧ , ರಂಗಸ್ವಾಮಿ ಅವರ ಮಕ್ಕಳಾದ ವಕೀಲ ಅರುಣ್ ಕುಮಾರ್, ಅಜಿತ್ ಕುಮಾರ್, ಭಾರತೀಯ ಭೌದ್ದ ಮಹಾಸಭಾದ ಜಿಲ್ಲಾಧ್ಯಕ್ಷ ಬಸವರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ದರಾಜು ನಾಗೇಶ್, ಅಂಗಡಿ ರಾಜು, ನಟರಾಜು, ಆಟೊ ರಾಜು, ಮುಖಂಡರಾದ ರವಿಗೌಡ, ಮೂರ್ತಿ, ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷ ಪ್ರದೀಪ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.