
ಚಾಮರಾಜನಗರ: ಜಿಲ್ಲೆಯಲ್ಲಿ ಒಂಟಿಯಾಗಿ ಬದುಕುತ್ತಿರುವ ಹಿರಿಯ ನಾಗರಿಕರ ಸುರಕ್ಷತೆ ಹಾಗೂ ರಕ್ಷಣೆ ನೀಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಅನುಷ್ಠಾನಗೊಳಿಸಿರುವ ‘ಆಸರೆ’ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನ ವ್ಯಕ್ತವಾಗಿದೆ.
ಗೃಹ ಇಲಾಖೆಯ ಆದೇಶದಂತೆ ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಯಳಂದೂರು ಹಾಗೂ ಹನೂರು ತಾಲ್ಲೂಕುಗಳಲ್ಲಿ ಒಂಟಿಯಾಗಿ ಬದುಕುತ್ತಿರುವ 562 ಹಿರಿಯ ನಾಗರಿಕರನ್ನು ಪೊಲೀಸ್ ಇಲಾಖೆ ಗುರುತಿಸಿದೆ.
ಏನಿದು ಆಸರೆ ಯೋಜನೆ:
ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಭಾಗವಾಗಿ ಹಾಗೂ ಹಿರಿಯ ನಾಗರಿಕರ ಕಾಳಜಿಯ ದೃಷ್ಟಿಯಿಂದ ರಾಜ್ಯ ಪೊಲೀಸ್ ಇಲಾಖೆ ‘ಆಸರೆ’ ಯೋಜನೆ ಜಾರಿಗೆ ಬಂದಿದೆ. ಇದರ ಅನ್ವಯ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಕಾಂಗಿಯಾಗಿ ವಾಸವಾಗಿರುವ ಹಿರಿಯ ನಾಗರಿಕರ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ವೃದ್ಧರಿಗೆ ಅಗತ್ಯ ಕಾನೂನು ನೆರವು ನೀಡುವುದರ ಜೊತೆಗೆ ಮಾನವೀಯತೆಯ ಸಹಾಯ ಹಸ್ತ ಚಾಚುತ್ತಿದ್ದಾರೆ.
ಜಿಲ್ಲೆಯಲ್ಲಿ ಪ್ರಾಥಮಿಕ ಹಂತದಲ್ಲಿ ಹಿರಿಯ ನಾಗರಿಕರು ವಾಸವಾಗಿರುವ 530 ಮನೆಗಳಿಗೆ ಬೀಟ್ ವ್ಯವಸ್ಥೆ ಮಾಡಲಾಗಿದೆ. ಅದರಂತೆ ಸ್ಥಳೀಯ ಪೊಲೀಸ್ ಠಾಣೆಯ ಬೀಟ್ ಸಿಬ್ಬಂದಿ ನಿಯಮಿತವಾಗಿ ಹಿರಿಯ ನಾಗರಿಕರ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸಿ ಸಮಯೋಚಿತ ನೆರವು ನೀಡುತ್ತಿದ್ದಾರೆ.
‘ಅಪರಾಧ ಕೃತ್ಯಗಳು ನಡೆಯದಂತೆ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ. ಕಳವು, ದರೋಡೆಯಂತಹ ಕೃತ್ಯಗಳು ನಡೆದಾಗ ತುರ್ತು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳನ್ನು ನೀಡಲಾಗುತ್ತಿದೆ. ಅಹಿತಕರ ಘಟನೆಗಳು ನಡೆಯದಂತೆ ಸಿಸಿಟಿವಿ ಕ್ಯಾಮೆರಾ, ಅಪಾಯದ ಸೈರನ್ ಅಳವಡಿಕೆ ಸಹಿತ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆಯೂ ಸಿಬ್ಬಂದಿ ಮಾಹಿತಿ ನೀಡುತ್ತಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ತಿಳಿಸಿದರು.
‘ಹಿರಿಯ ನಾಗರಿಕರಿಗೆ ಕಾನೂನು ನೆರವು ಮಾತ್ರವಲ್ಲದೆ ಮಾನವೀಯ ದೃಷ್ಟಿಯಿಂದಲೂ ಸಹಾಯ ಮಾಡಲಾಗುತ್ತಿದೆ. ತುರ್ತು ವೈದ್ಯಕೀಯ ಅಗತ್ಯತೆ ಇದ್ದರೆ, ಔಷಧಗಳು ಬೇಕಿದ್ದರೂ ಪೊಲೀಸರು ನೆರವು ನೀಡಲಿದ್ದಾರೆ. ಜೊತೆಗೆ ಸರ್ಕಾರಿ ಸೌಲಭ್ಯಗಳಾದ ವೃದ್ಧಾಪ್ಯ ವೇತನ, ಪಡಿತರ ಚೀಟಿ, ಪಿಂಚಣಿ ಸಹಿತ ಸರ್ಕಾರದ ಸೌಲಭ್ಯಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ರವಾನಿಸಲಾಗುವುದು’ ಎಂದರು.
‘ಬೀಟ್ ಸಿಬ್ಬಂದಿಯ ಕರ್ತವ್ಯದ ಮೇಲೆ ನಿಗಾ ಇರಿಸಲಾಗಿದ್ದು, ಹಿರಿಯ ನಾಗರಿಕರ ಮನೆಗಳಿಗೆ ಭೇಟಿ ನೀಡಿ ನಿರ್ದಿಷ್ಟ ಪಾಯಿಂಟ್ಗಳಲ್ಲಿ ಇರಿಸಿರುವ ಲಾಗ್ ಬುಕ್ಗಳಿಗೆ ಸಹಿ ಮಾಡಬೇಕು. ಹಿರಿಯರ ಜೊತೆಗೆ ಗೌರವಯುತವಾಗಿ ನಡೆದುಕೊಳ್ಳುವಂತೆ, ವೈಯಕ್ತಿಕ ಸಮಸ್ಯೆಗಳಿದ್ದರೂ ಆಲಿಸಿ ಪರಿಹರಿಸುವಂತೆ ಸೂಚನೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.
ಮಾಹಿತಿ ಸಂಗ್ರಹ:
ಬೀಟ್ ಸಿಬ್ಬಂದಿ ಹಿರಿಯ ನಾಗರಿಕರ ಮನೆಗಳಿಗೆ ಭೇಟಿಯಾದಾಗ ಕುಟುಂಬದಲ್ಲಿರುವ ಸದಸ್ಯರ ಮಾಹಿತಿ ಪಡೆದು, ತುರ್ತು ಸಂದರ್ಭಗಳಲ್ಲಿ ಸಂಪರ್ಕಿಸಬಹುದಾದ (112) ಸಹಾಯವಾಣಿ ಹಾಗೂ ಸ್ಥಳೀಯ ಪೊಲೀಸ್ ಠಾಣೆಗಳ ದೂರವಾಣಿ ಸಂಖ್ಯೆಗಳನ್ನು ನೀಡುತ್ತಾರೆ. ಜೀವನದ ಸಂಧ್ಯಾಕಾಲದಲ್ಲಿ ಒಂಟಿತನ ಅನುಭವಿಸುತ್ತಿರುವ ಹಿರಿಯ ನಾಗರಿಕರಿಗೆ ‘ನಾವಿದ್ದೇವೆ’ ಎಂಬ ಭರವಸೆ ತುಂಬಲಿದ್ದಾರೆ. ಆಸರೆ ಯೋಜನೆಗೆ ನಾಗರಿಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.
‘ಶಿಕ್ಷಣ ಮುಗಿಸಿದ ಬಳಿಕ ಮಕ್ಕಳು ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳಲು ಮಕ್ಕಳು ಪೋಷಕರನ್ನು ತೊರೆದು ವಿದೇಶ ಸೇರಿದಂತೆ ಬೆಂಗಳೂರು, ಮೈಸೂರು, ಮುಂಬೈನಂತಹ ಮಹಾನಗರಗಳಿಗೆ ತೆರಳುತ್ತಾರೆ. ಇಂತಹ ಸಂದರ್ಭಗಳಲ್ಲಿ ಪೋಷಕರು ಏಕಾಂಗಿಯಾಗಿ ಬದುಕುವುದು ಅನಿವಾರ್ಯವಾಗಿದ್ದು, ಅಪರಾಧ ಕೃತ್ಯ, ವಂಚನೆ ನಡೆಯುವ ಸಂಭವ ಹೆಚ್ಚಾಗಿರುತ್ತದೆ. ಆಸರೆ ಕಾರ್ಯಕ್ರಮದಡಿ ಹಿರಿಯ ನಾಗರಿಕರಿಗೆ ಸುರಕ್ಷತೆಯ ಜೊತೆಗೆ ರಕ್ಷಣೆ ಸಿಗಲಿದೆ’ ಎಂದು ಎಸ್ಪಿ ಎಂ.ಮುತ್ತುರಾಜ್ ತಿಳಿಸಿದರು.
‘ಹಿರಿಯರನ್ನು ಗುರಿಯಾಗಿಸಿ ದಾಳಿ’
‘ಸಮಾಜದಲ್ಲಿ ಒಂಟಿಯಾಗಿ ವಾಸವಾಗಿರುವ ಹಿರಿಯ ನಾಗರಿಕರನ್ನು ಗುರಿಯಾಗಿಸಿ ಅಪರಾಧ ಕೃತ್ಯಗಳನ್ನು ಎಸಗಲಾಗುತ್ತಿದೆ. ಮನೆಗೆ ನುಗ್ಗಿ ಚಿನ್ನಾಭರಣ ನಗದು ಕಳವು ಮಾಡುವುದು ಹಲ್ಲೆ ನಡೆಸಿ ದರೋಡೆ ಮಾಡುವುದು ಆಪ್ತರ ಸೋಗಿನಲ್ಲಿ ವಿಶ್ವಾಸ ಗಿಟ್ಟಿಸಿಕೊಂಡು ಆಸ್ತಿಯನ್ನು ಬರೆಸಿಕೊಳ್ಳುವುದು ಖಾಲಿ ಚೆಕ್ಗೆ ಸಹಿ ಹಾಕಿಸಿಕೊಂಡು ಬ್ಯಾಂಕ್ ಖಾತೆಯಲ್ಲಿರುವ ಹಣ ದೋಚುವುದು ಜಿಪಿಎ ಮಾಡಿಸಿಕೊಳ್ಳುವುದು ಸೇರಿದಂತೆ ಹಲವು ಮಾದರಿಯಲ್ಲಿ ಹಿರಿಯ ನಾಗರಿಕರನ್ನು ವಂಚಿಸಲಾಗುತ್ತಿದೆ. ಇಂತಹ ಸಂಭವನೀಯ ಕೃತ್ಯಗಳನ್ನು ತಡೆಯಲು ಆಸರೆ ಕಾರ್ಯಕ್ರಮ ಸಹಕಾರಿಯಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.