ಚಾಮರಾಜನಗರ: ‘ಪ್ರಜಾವಾಣಿ’ @75 ಮತ್ತು ನಗರದ ಶಾಂತಲಾ ಕಲಾವಿದರು ಸಂಸ್ಥೆಯ ಸುವರ್ಣ ಮಹೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಗರದಲ್ಲಿ ಬುಧವಾರ (ಮಾರ್ಚ್ 29) ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಂ ರಚಿಸಿರುವ ‘ಬದುಕ ಮನ್ನಿಸು ಪ್ರಭುವೇ’ ನಾಟಕ ಪ್ರದರ್ಶನ ನಡೆಯಲಿದೆ.
ನಗರದ ವರನಟ ಡಾ.ರಾಜ್ಕುಮಾರ್ ರಂಗಮಂದಿರದಲ್ಲಿ ಸಂಜೆ 6.30ಕ್ಕೆ ಗಂಟೆಗೆ ವೇದಿಕೆ ಸಮಾರಂಭ ನಡೆಯಲಿದೆ. ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಕಾರ್ಯಕ್ರಮ ಉದ್ಘಾಟಿಸುವರು. ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್.ಎಂ.ಚಿಂತಾಮಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಮಂಜು ಕೋಡಿಉಗನೆ, ‘ಪ್ರಜಾವಾಣಿ’ ಮೈಸೂರು ಬ್ಯೂರೊ ಮುಖ್ಯಸ್ಥ ಕೆ.ನರಸಿಂಹಮೂರ್ತಿ, ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಮೈಸೂರು ಪ್ರಸರಣ ವಿಭಾಗದ ವ್ಯವಸ್ಥಾಪಕ ಸಂಗಣ್ಣ ಪ್ರಕಾಶ್ ಅತಿಥಿಗಳಿಗಾಗಿ ಭಾಗವಹಿಸಲಿದ್ದಾರೆ.
ವೇದಿಕೆ ಸಮಾರಂಭದ ಬಳಿಕ ಶಾಂತಲಾ ಕಲಾವಿದರು ತಂಡದವರು ‘ಬದುಕ ಮನ್ನಿಸು ಪ್ರಭುವೇ’ ನಾಟಕ ಪ್ರದರ್ಶಿಸಲಿದ್ದಾರೆ.
ಟಿ.ಎನ್.ಸೀತಾರಾಂ ರಚಿಸಿರುವ ಈ ನಾಟಕಕ್ಕೆ ‘ಪ್ರಜಾವಾಣಿ’ ದೀಪಾವಳಿ ವಿಶೇಷಾಂಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿತ್ತು. ಶಾಂತಲಾ ಕಲಾವಿದರು ಸಂಸ್ಥೆಯು ಅಸ್ತಿತ್ವಕ್ಕೆ (1973) ಬಂದ ನಂತರ, ಅದರ ಕಲಾವಿದರು ಮೊದಲು ಇದೇ ನಾಟಕವನ್ನು ಅಭಿನಯಿಸಿದ್ದರು. 50 ವರ್ಷಗಳ ಹಿಂದೆ ಅಭಿನಯಿಸಿದ್ದ ಬಹುತೇಕ ಕಲಾವಿದರೇ ಈ ಬಾರಿಯೂ ಬಣ್ಣ ಹಚ್ಚಲಿದ್ದಾರೆ.
ನಾಟಕ ವೀಕ್ಷಣೆಗೆ ಎಲ್ಲರಿಗೂ ಉಚಿತ ಪ್ರವೇಶವಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.