
ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ರೈತ ಸಂಘಟನೆಗಳ ವಿರೋಧದ ನಡುವೆಯೂ ತಾಲ್ಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭಾನುವಾರ ಸಫಾರಿ ಪುನರಾರಂಭಗೊಂಡಿತು.
ಮಧ್ಯಾಹ್ನ 3 ಗಂಟೆಗೆ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದಿಂದ ನಾಲ್ಕು ಮಿನಿ ಬಸ್ಗಳು ಹಾಗೂ ಮೂರು ಜಿಪ್ಸಿ ವಾಹನಗಳು ಪ್ರವಾಸಿಗರನ್ನು ಸಫಾರಿಗೆ ಕರೆದೊಯ್ದವು.
ರೈತರಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಕಾರಣದಿಂದಾಗಿ ಸಫಾರಿ ಕೇಂದ್ರ, ಗುಂಡ್ಲುಪೇಟೆ, ಹಂಗಳ ಚೆಕ್ಪೋಸ್ಟ್ ಹಾಗೂ ಕಲ್ಲಿಗೌಡನಹಳ್ಳಿ ಗೇಟ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಫೆ.23ರಿಂದ ಪ್ರತಿದಿನ ಐದು ತಾಸು ಸಫಾರಿ ನಡೆಯಲಿದ್ದು ಬೆಳಿಗ್ಗೆ 6.30ರಿಂದ 9 ಗಂಟೆ ಹಾಗೂ ಮಧ್ಯಾಹ್ನ 3.30ರಿಂದ 6ಗಂಟೆಯವರೆಗೆ ಸಫಾರಿಗೆ ಸರ್ಕಾರದಿಂದ ಅನುಮತಿ ನೀಡಲಾಗಿದೆ. ಕೆಲವು ಷರತ್ತುಗಳನ್ನು ವಿಧಿಸಿದ್ದು, ಅವುಗಳನ್ನು ಪಾಲಿಸುವಂತೆಯೂ ಸೂಚಿಸಲಾಗಿದೆ.
ಅರಣ್ಯ ಇಲಾಖೆ ಹಾಗೂ ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ಸ್ ವಾಹನಗಳಲ್ಲಿ ಪ್ರವಾಸಿಗರು ಸಫಾರಿಗೆ ತೆರಳಬಹುದು. ಮಾನವ– ಪ್ರಾಣಿ ಸಂಘರ್ಷ ಹೆಚ್ಚಾದ ಕಾರಣದಿಂದ ನ.7ರಿಂದ ಸಫಾರಿ ಸ್ಥಗಿತವಾಗಿತ್ತು.
ಮಡಿಕೇರಿ ವರದಿ: ಕೊಡಗು ಜಿಲ್ಲೆಯ ನಾಗರಹೊಳೆ ಹುಲಿ ರಕ್ಷಿತಾರಣ್ಯದ ಪೊನ್ನಂಪೇಟೆ ತಾಲ್ಲೂಕಿನ ನಾಣಚ್ಚಿಯಲ್ಲಿ ಸಫಾರಿ ಭಾನುವಾರ ಪುನರಾರಂಭಗೊಂಡಿತು. ಎರಡು ವಾಹನಗಳಲ್ಲಿ 15 ಮಂದಿಯಷ್ಟೇ ಸಫಾರಿಗೆ ತೆರಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.