ADVERTISEMENT

ಬಣ್ಣಾರಿ ಘಾಟಿ: ಸರಕು ಸಾಗಣೆ ವಾಹನಗಳಿಗೆ ರಾತ್ರಿ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 14:48 IST
Last Updated 11 ಫೆಬ್ರುವರಿ 2019, 14:48 IST

ಚಾಮರಾಜನಗರ: ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ಬಣ್ಣಾರಿ–ದಿಂಭಂ ಘಾಟಿಯಲ್ಲಿ (ರಾಷ್ಟ್ರೀಯ ಹೆದ್ದಾರಿ 948) ಸಂಜೆ 6ರಿಂ ಬೆಳಿಗ್ಗೆ 6ರವರೆಗೆ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ರಸ್ತೆ ಸುರಕ್ಷತಾ ಸಮಿತಿಯ ತೀರ್ಮಾನದಂತೆ ಕಾಡು ಪ್ರಾಣಿಗಳ ಹಿತದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂಬಂಧ ಈರೋಡ್‌ ಜಿಲ್ಲಾಧಿಕಾರಿ ಹಲವು ಕ್ರಮಗಳನ್ನು ಕೈಗೊಂಡಿದ್ದಾರೆ.

ಈ ಘಾಟಿಯಲ್ಲಿ ಬರುವ 27 ಹೇರ್‌ಪಿನ್‌ ತಿರುವುಗಳಲ್ಲಿ 12ಕ್ಕಿಂತ ಹೆಚ್ಚು ಚಕ್ರ‌ಗಳನ್ನು ಹೊಂದಿರುವ ಭಾರಿ ವಾಹನಗಳ ಸಂಚಾರವನ್ನೂ ನಿಷೇಧಿಸಲಾಗಿದೆ. ಅಲ್ಲದೆ, ಉಳಿದ ವಾಹನಗಳ ವೇಗಮಿತಿಯನ್ನು ಗಂಟೆಗೆ 30 ಕಿ.ಮೀ ನಿಗದಿಪಡಿಸಲಾಗಿದೆ.

ADVERTISEMENT

ಬಣ್ಣಾರಿ ಮತ್ತು ಹಾಸನೂರು ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತೂಕವನ್ನು ಪರಿಶೀಲಿಸಿದ ನಂತರವಷ್ಟೇ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ಅವಕಾಶ ನೀಡಲಿದೆ.

ಪ್ರವೇಶ ಶುಲ್ಕ: ಇದರ ಜೊತೆಗೆ ಈ ಪ್ರದೇಶದಲ್ಲಿ ಹಾದುಹೋಗುವ ವಾಹನಗಳಿಗೆ ಪ್ರವೇಶ ಶುಲ್ಕವನ್ನೂ ನಿಗದಿಪಡಿಸಲಾಗಿದೆ. ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ಚೆಕ್‌ಪೋಸ್ಟ್‌ನಲ್ಲಿ ಶುಲ್ಕ ಪಾವತಿಸಬೇಕು.

ಪ್ರಯಾಣಿಕರ 4 ಚಕ್ರಗಳ ವಾಹನಗಳಿಗೆ ₹20, ವ್ಯಾನ್‌ಗಳಿಗೆ ₹30, ಲಘು ಮತ್ತು ಭಾರಿ ವಾಣಿಜ್ಯದ 4 ಚಕ್ರಗಳ ವಾಹನ ಹಾಗೂ ಚಿಕ್ಕ ಲಾರಿಗಳಿಗೆ ₹20, 6 ಚಕ್ರಗಳ ವಾಹನಕ್ಕೆ ₹50, 8 ಚಕ್ರದ ವಾಹನಗಳಿಗೆ ₹60, 10 ಚಕ್ರಗಳ ವಾಹನಗಳಿಗೆ ₹80 ಹಾಗೂ 12 ಚಕ್ರಗಳ ವಾಹನಗಳಿಗೆ ₹100 ಶುಲ್ಕ ನಿಗದಿ ಪಡಿಸಲಾಗಿದೆ.

ಸರ್ಕಾರಿ, ಸಾರ್ವಜನಿಕರ ಹಾಗೂ ತುರ್ತು ವಾಹನಗಳಿಗೆ (ಆಂಬುಲೆನ್ಸ್‌) ಪ್ರವೇಶ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.