
ಚಾಮರಾಜನಗರ: ಕರಿನಂಜನಪುರ ಹೊಸ ಬಡಾವಣೆ ವ್ಯಾಪ್ತಿಯಲ್ಲಿ ಬುದ್ಧನಗರದಿಂದ ಪೂರ್ವ ಭಾಗದಲ್ಲಿರುವ ಹೊಸ ಬಡಾವಣೆಗೆ ಸಂಪರ್ಕ ರಸ್ತೆ ಇಲ್ಲದೆ ನಾಗರಿಕರು ಸಮಸ್ಯೆ ಅನುಭವಿಸುವಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ನಗರಸಭೆ ಕನಿಷ್ಠ ರಸ್ತೆ ಸೌಲಭ್ಯ ಮಾಡಿಕೊಡದ ಪರಿಣಾಮ ನಿತ್ಯ ಸಾರ್ವಜನಿಕರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಹೊಸ ಬಡಾವಣೆಯ ಮಣ್ಣಿನ ರಸ್ತೆ ಮಳೆ ನೀರು ಹಾಗೂ ಚರಂಡಿಯ ತ್ಯಾಜ್ಯಗಳಿಂದ ತುಂಬಿಕೊಂಡು ಓಡಾಡಲು ಸಾಧ್ಯವಾಗುವುದಿಲ್ಲ. ಒಳ ಚರಂಡಿ ವ್ಯವಸ್ಥೆ ಸಮರ್ಪಕವಾಗಿರದೆ ಇಡೀ ಪರಿಸರ ಗಬ್ಬೆದ್ದು ನಾರುತ್ತಿದೆ.
ಹಂದಿ ಹಾಗೂ ಸೊಳ್ಳೆಗಳ ಉಪಟಳ ಹೆಚ್ಚಾಗಿದ್ದು ಸ್ಥಳೀಯರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಅನೈರ್ಮಲ್ಯದಿಂದಾಗಿ ಸಾಂಕ್ರಮಿಕ ರೋಗಗಳ ಭೀತಿ ಎದುರಾಗಿದೆ. ಮಕ್ಕಳು, ವೃದ್ಧರು ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಬೀದಿದೀಪಗಳ ವ್ಯವಸ್ಥ ಇಲ್ಲದೆ ರಾತ್ರಿಯ ಹೊತ್ತು ಓಡಾಡಲು ಕಷ್ಟಕರವಾಗಿದೆ. ವಿಷಜಂತುಗಳ ದಾಳಿ ಭೀತಿ ಕಾಡುತ್ತಿದೆ.
ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ, ನೀರು ಪೂರೈಸುವ ಪೈಪ್ಗೆ ಗೇಟ್ವಾಲ್ ಚೇಂಬರ್ ನಿರ್ಮಿಸದೆ ಯುಜಿಡಿ ಹಾಗೂ ಮಳೆಯ ನೀರು ನಲ್ಲಿ ನೀರಿನ ಸಂಪರ್ಕ ಇರುವ ಪೈಪ್ಲೈನ್ಗಳ ಮೇಲೆ ತುಂಬಿದ್ಡು ಗಲೀಜು ನೀರು ಸೇರ್ಪಡೆಯಾಗುವ ಆತಂಕ ಎದುರಾಗಿದೆ. ನಗರಸಭೆಯಿಂದ ಅನುಮೋದನೆಗೊಂಡು ಅಧಿಕೃತ ಖಾತೆ ಪಡೆದು ವಾಸ ಮಾಡುತ್ತಿದ್ದರೂ ಕನಿಷ್ಠ ಸೌಲಭ್ಯಗಳನ್ನು ಒದಗಿಸದಿರುವುದು ಬೇಸರದ ವಿಚಾರ. ಕನಿಷ್ಠ ರಸ್ತೆಯನ್ನಾದರೂ ನಿರ್ಮಾಣ ಮಾಡಿಕೊಡಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.