ADVERTISEMENT

ಬಿಜೆಪಿಗೆ ಅತಿ ಹೆಚ್ಚು ದೇಣಿಗೆ: ಕೆರೆಹಳ್ಳಿ ನವೀನ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 5:18 IST
Last Updated 18 ಡಿಸೆಂಬರ್ 2025, 5:18 IST
ಕೆರೆಹಳ್ಳಿ ನವೀನ್, ಕಾಂಗ್ರೆಸ್‌ ಜಿಲ್ಲಾ ವಕ್ತಾರ 
ಕೆರೆಹಳ್ಳಿ ನವೀನ್, ಕಾಂಗ್ರೆಸ್‌ ಜಿಲ್ಲಾ ವಕ್ತಾರ    

ಚಾಮರಾಜನಗರ: ದೇಶದಲ್ಲಿ ಅತಿ ದೊಡ್ಡ ಶ್ರೀಮಂತ ರಾಜಕೀಯ ಪಕ್ಷವಾಗಿರುವ ಬಿಜೆಪಿ ಅಧಿಕಾರ ದುರ್ಬಳಕೆ ಮಾಡಿಕೊಂಡು ಖಾಸಗಿ ಕಂಪೆನಿಗಳಿಗೆ ಅನುಕೂಲ ಮಾಡಿಕೊಟ್ಟು ಸಾವಿರಾರು ಕೋಟಿ ರೂಪಾಯಿ ದೇಣಿಗೆ ಪಡೆದುಕೊಂಡಿದೆ ಎಂದು ಕಾಂಗ್ರೆಸ್‌ ಜಿಲ್ಲಾ ವಕ್ತಾರ ಕೆರೆಹಳ್ಳಿ ನವೀನ್ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

2018ರಿಂದ 2024ರವರೆಗೆ ಖಾಸಗಿ ಸಂಸ್ಥೆಗಳು, ಉದ್ಯಮಿಗಳು ₹ 16,518 ಕೋಟಿ ಮೊತ್ತದ ಚುನಾವಣಾ ಬಾಂಡ್ ಖರೀದಿ ಮಾಡಿದ್ದು ಅದರಲ್ಲಿ ಬಿಜೆಪಿಗೆ ಶೇ 55ರಷ್ಟು ₹ 6,566 ಕೋಟಿ ದೇಣಿಗೆ ಬಂದಿದೆ. ದೇಶದ ಅಭಿವೃದ್ಧಿ ಮರೆತ ಬಿಜೆಪಿ ಪಕ್ಷದ ಅಭಿವೃದ್ಧಿಗೆ ನಿಂತಿದೆ ಎಂದು ಟೀಕಿಸಿದ್ದಾರೆ.

ಸ್ವಚ್ಛ ಭಾರತ, ಭೇಟಿ ಬಚಾವೋ ಭೇಟಿ ಪಡಾವೋ, ಕಿಸಾನ್ ಸೇವಾ ಯೋಜನೆಗಳ ಹೆಸರಿನಲ್ಲಿ ಸಚಿವಾಲಯದ ಅನುಮತಿ ಇಲ್ಲದೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆರಂಭಿಸಿದ ‘ಮೈಕ್ರೋ ಡೊನೇಷನ್ ಅಭಿಯಾನ’ವನ್ನು ಪ್ರಾರಂಭಿಸಿ ಸೇವೆಯ ಹೆಸರಿನಲ್ಲಿ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಿದ್ದರು. ಇದನ್ನು ಪ್ರಧಾನಿ ಮೋದಿ ಕೂಡ ಎಕ್ಸ್‌ ಖಾತೆಯಲ್ಲಿ ಬೆಂಬಲಿಸಿದ್ದರು. 

ADVERTISEMENT

ಅಭಿಯಾನಕ್ಕೆ ದೇಣಿಗೆ ನೀಡಿದವರಿಗೆ ಬಿಜೆಪಿ ಕೇಂದ್ರ ಕಚೇರಿಯಿಂದ ರಶೀದಿಗಳು ಬಂದಿರುವುದನ್ನು ನೋಡಿದರೆ ದೇಣಿಗೆ ಹಣ ಬಿಜೆಪಿಯ ಖಜಾನೆ ಸೇರಿದಂತೆ ಕಾಣುತ್ತದೆ. ಕೋವಿಡ್ ಸಂದರ್ಭದಲ್ಲೂ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಪಿಎಂ ಕೇರ್ ಫಂಡ್ ಸ್ಥಾಪಿಸಿ ₹ 30,000 ಕೋಟಿ ಸಂಗ್ರಹಿಸಿದ್ದು ವಾರ್ಷಿಕ ವರದಿ ಬಹಿರಂಗ ಪಡಿಸುತ್ತಿಲ್ಲ ಎಂದು ಕೆರೆಹಳ್ಳಿ ನವೀನ್‌  ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.