ಚಾಮರಾಜನಗರ: ವಿಧಾನಪರಿಷತ್ ಚುನಾವಣೆಯ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಅಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗುರುವಾರ ಹೇಳಿದರು.
ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಚುನಾವಣೆಯಲ್ಲಿ ಬಿಜೆಪಿ ಮತಗಳು ಸ್ಥಿರವಾಗಿವೆ. ಈ ಹಿಂದೆ ಇದ್ದಂತಹ ಎರಡು ಸ್ಥಾನಗಳನ್ನು ಪಕ್ಷ ಉಳಿಸಿಕೊಂಡಿದೆ.ಜೆಡಿಎಸ್ ಮತಗಳು ಬಿಜೆಪಿಗೆ ಬಂದಿವೆ’ ಎಂದರು.
ಕಾಂಗ್ರೆಸ್ಗೆ ಕೇಡುಗಾಲ: ಜಾರಿ ನಿರ್ದೇಶನಾಲಯ (ಇ.ಡಿ) ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ವಿಚಾರಣೆ ನಡೆಸುತ್ತಿರುವುದನ್ನು ಖಂಡಿಸಿ ಕಾಂಗ್ರೆಸ್ ನಡೆಸುತ್ತಿರುವ ಹೋರಾಟಕ್ಕೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್ಗೆ ಸಂವಿಧಾನ, ಕಾನೂನಿನ ಮೇಲೆ ನಂಬಿಕೆ ಇಲ್ಲ. ಕಾನೂನಿನ ಆಧಾರದಲ್ಲಿ ಇ.ಡಿ ವಿಚಾರ ನಡೆಸುತ್ತಿದೆ. ಹಿಂದೆ ನರೇಂದ್ರ ಮೋದಿ ಹಾಗೂ ಅಮಿತ್ ಷಾ ವಿರುದ್ಧವೂ ಇಡಿ ತನಿಖೆ ಮಾಡಿತ್ತು. ಆಗ ಯಾರೂ ಹೋರಾಟ ಮಾಡಿರಲಿಲ್ಲ. ವಿಚಾರಣೆ ಮಾಡುವುದು ಕಾನೂನಿನ ಧರ್ಮ’ ಎಂದರು.
‘ಕಾಂಗ್ರೆಸ್ ಬೇರೆ ಬೇರೆ ಕಾರಣಗಳಿಗೆ ಹೋರಾಟ ಮಾಡುತ್ತಿದೆ.ತುರ್ತು ಪರಿಸ್ಥಿತಿ ಹೇರಿ ದೇಶದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆ ಮಾಡಿದ್ದು ಕಾಂಗ್ರೆಸ್. ಪ್ರತಿಪಕ್ಷವಾಗಲು ಕಾಂಗ್ರೆಸ್ ನಾಲಾಯಕ್.ದೇಶದಲ್ಲಿ ಜನರು ಕಾಂಗ್ರೆಸ್ ಅನ್ನು ತಿರಸ್ಕರಿಸುತ್ತಿದ್ದಾರೆ. ಆ ಪಕ್ಷಕ್ಕೆ ಕೇಡುಗಾಲ ಬಂದಿದೆ. ಈ ದೇಶದಲ್ಲಿ ತುರ್ತು ಪರಿಸ್ಥಿತಿ ಹೇಳಿದ್ದು ತಮ್ಮದೇ ಪಕ್ಷ ಎಂಬುದನ್ನು ಸಿದ್ದರಾಮತ್ಯ ಯೋಚನೆ ಮಾಡಬೇಕು’ ಎಂದು ಕಟೀಲ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.