ಚಾಮರಾಜನಗರ: ಕೆಎಸ್ಆರ್ಟಿಸಿ ನೌಕರರ ಮುಷ್ಕರದ ಮೂರನೇ ದಿನವಾದ ಶುಕ್ರವಾರ 37 ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದು, ಚಾಮರಾಜನಗರ ವಿಭಾಗದಲ್ಲಿ 18 ಬಸ್ಗಳು ಸಂಚರಿಸಿವೆ.
ಎಲ್ಲ ಬಸ್ಗಳು ರಸ್ತೆಗಿಳಿಯದೇ ಇದ್ದುದರಿಂದ ಪ್ರಯಾಣಿಕರು, ವಿದ್ಯಾರ್ಥಿಗಳು ಸಂಚಾರಕ್ಕೆ ಖಾಸಗಿ ಬಸ್ಗಳನ್ನೇ ಅವಲಂಬಿಸಿದರು. ಶುಕ್ರವಾರವೂ ಖಾಸಗಿ ಬಸ್ಗಳು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದಲೇ ಕಾರ್ಯಾಚರಿಸಿದವು.
ಕರ್ತವ್ಯಕ್ಕೆ ಬಂದ ನೌಕರರು: ಎರಡು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರದಲ್ಲಿ ತೊಡಗಿದ್ದ 2,300 ನೌಕರರಲ್ಲಿ 37 ಮಂದಿ ಶುಕ್ರವಾರ ಕರ್ತವ್ಯಕ್ಕೆ ಹಾಜರಾದರು. ಕೆಲವರು ಸ್ವಯಂ ಪ್ರೇರಿತರಾಗಿ ಬಂದರೆ, ಇನ್ನೂ ಕೆಲವರನ್ನು ಅಧಿಕಾರಿಗಳು ಒತ್ತಾಯಪೂರ್ವಕವಾಗಿ ಕರೆದುಕೊಂಡು ಬಂದರು.18 ಬಸ್ಗಳು ಮೈಸೂರು ಸೇರಿದಂತೆ ಪ್ರಮುಖ ನಗರ ಹಾಗೂ ಪಟ್ಟಣಗಳ ನಡುವೆ ಸಂಚರಿಸಿದವು.
‘ಆರು ಮಂದಿ ಟ್ರೈನಿ ಚಾಲಕರು, ಒಬ್ಬರು ಮೆಕ್ಯಾನಿಕ್ ಕೂಡ ಕೆಲಸಕ್ಕೆ ಹಾಜರಾಗಿದ್ದಾರೆ. 18 ಬಸ್ಗಳು ಸಂಚಾರ ನಡೆಸಿವೆ. ನೌಕರರ ಮನವೊಲಿಕೆ ಪ್ರಯತ್ನ ಮುಂದುವರಿದಿದೆ. ಶನಿವಾರ ಇನ್ನಷ್ಟು ಹೆಚ್ಚು ನೌಕರರು ಕರ್ತವ್ಯಕ್ಕೆ ಹಾಜರಾಗುವ ನಿರೀಕ್ಷೆ ಇದೆ’ ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ನಾಲ್ವರ ವಜಾ: ಈ ಹಿಂದೆ ವಿವಿಧ ಆರೋಪಗಳನ್ನು ಎದುರಿಸಿದ್ದ ಹಾಗೂ ಪದೇ ಪದೇ ಕರ್ತವ್ಯಕ್ಕೆ ಗೈರು ಆಗುತ್ತಿದ್ದ ನಾಲ್ಕು ಮಂದಿ ಟ್ರೈನಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಖಾಸಗಿ ಬಸ್ ಮಾಲೀಕರ ಆಕ್ಷೇಪ: ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗಿಳಿದು ಪ್ರಯಾಣಿಕನ್ನು ಹತ್ತಿಸಿ ಸಂಚಾರ ಆರಂಭಿಸುತ್ತಿದ್ದಂತೆಯೇ, ಖಾಸಗಿ ಬಸ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದರು. ನಿಲ್ದಾಣದಲ್ಲಿದ್ದ ಬಸ್ಗಳನ್ನೆಲ್ಲ ಹೊರಗಡೆ ಕಳುಹಿಸಿದರು. ಇದರಿಂದ ಕೆಲಕಾಲ ಗೊಂದಲ ಉಂಟಾಯಿತು.ಹಲವು ಪ್ರಯಾಣಿಕರು ಪರದಾಡಿದರು.
‘ಜನರಿಗೆ ತೊಂದರೆಯಾಗಬಾರದು ಎಂದು ನಾವು ಇಲ್ಲಿಂದ ಬಸ್ ಓಡಿಸುತ್ತಿದ್ದೇವೆ. ಇರುವ ಪ್ರಯಾಣಿಕರನ್ನು ಕೆಎಸ್ಆರ್ಟಿಸಿ ಬಸ್ಗಳು ತುಂಬಿಕೊಂಡು ಹೋದರೆ, ನಾವು ಇಲ್ಲಿ ಇದ್ದು ಏನು ಮಾಡುವುದು’ ಎಂದು ಬಸ್ ಮಾಲೀಕ ಚಾ.ಸಿ.ಸೋಮನಾಯಕ ಅವರು ತಿಳಿಸಿದರು.
‘ಪ್ರಯಾಣಿಕರು ಭರ್ತಿಯಾಗದೆ ಬಸ್ ಓಡಿಸಲು ಆಗುವುದಿಲ್ಲ. ಇರುವ ಪ್ರಯಾಣಿಕರನ್ನು ಕರೆದುಕೊಂಡು ಕೆಎಸ್ಆರ್ಟಿಸಿ ಬಸ್ಗಳು ಹೋಗುತ್ತಿವೆ. ನಮಗೆ ನಷ್ಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಬಸ್ ಸಂಚರಿಸದಿದ್ದರೇ ನಮಗೆ ಲಾಭ’ ಎಂದು ಬೇರೆ ಮಾಲೀಕರು ಹೇಳಿದರು.
ಈ ಗೊಂದಲದಿಂದಾಗಿ ಒಂದು ಗಂಟೆಗೂ ಹೆಚ್ಚು ಕಾಲ ಯಾವುದೇ ಬಸ್ ಸಂಚಾರ ಮಾಡಲಿಲ್ಲ. ಪ್ರಯಾಣಿಕರು ಬಸ್ಗಾಗಿ ಕಾಯಬೇಕಾಯಿತು.
ಗೊಂದಲವನ್ನು ಪರಿಹರಿಸುವುದಕ್ಕಾಗಿಕೆಎಸ್ಆರ್ಟಿಸಿ ವಿಭಾಗೀಯ ಅಧಿಕಾರಿ ಶ್ರೀನಿವಾಸ ಬಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಪ್ರಸಾದ್, ಬಸ್ ಮಾಲೀಕರ ಸಂಘದ ಶ್ರೀಕಾಂತ್, ಚಾ.ಸಿ.ಸೋಮನಾಯಕ, ಶಿವಸ್ವಾಮಿ ಹಾಗೂ ಪಟ್ಟಣ ಠಾಣೆ ಇನ್ಸ್ಪೆಕ್ಟರ್ ಮಹೇಶ್ ಅವರು ಮಾತುಕತೆ ನಡೆಸಿದರು.
‘ಕೆಎಸ್ಆರ್ಟಿಸಿ, ಖಾಸಗಿ ಬಸ್ಗಳು ಎರಡೂ ಸಂಚರಿಸಲಿ. ಒಂದು ಬಸ್ ಹೊರಟ ನಂತರ ಇನ್ನೊಂದು ಬಸ್ ಹೊರಡಲಿ. ಮಧ್ಯದಲ್ಲಿ ಕೆಎಸ್ಆರ್ಟಿಸಿ ಬಸ್ ಸಂಚರಿಸುವುದು ಬೇಡ ಎಂಬ ತೀರ್ಮಾನಕ್ಕೆ ಬರಲಾಯಿತು. ಆ ಬಳಿಕ ಎರಡೂ ಬಸ್ಗಳು ನಿಲ್ದಾಣದಿಂದಲೇ ಕಾರ್ಯಾಚರಿಸಿದವು’ ಎಂದು ಇನ್ಸ್ಪೆಕ್ಟರ್ ಮಹೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.