ADVERTISEMENT

ಸಂತೇಮರಹಳ್ಳಿ: ಬೈಪಾಸ್‌ ರಸ್ತೆ ಕಾಮಗಾರಿ ನನೆಗುದಿಗೆ

ಜಮೀನು ಖರೀದಿಸಿ ನಾಲ್ಕು ವರ್ಷ ಕಳೆದರು ಆರಂಭವಾಗದ ಕೆಲಸ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2021, 19:30 IST
Last Updated 20 ಏಪ್ರಿಲ್ 2021, 19:30 IST
ಬೈಪಾಸ್‌ ರಸ್ತೆಗಾಗಿ ಸ್ವಾಧೀನ ಪಡಿಸಿಕೊಂಡಿರುವ ಜಮೀನಿನಲ್ಲಿ ನಿರ್ಮಾಣವಾಗಿರುವ ಕಚ್ಚಾ ರಸ್ತೆ
ಬೈಪಾಸ್‌ ರಸ್ತೆಗಾಗಿ ಸ್ವಾಧೀನ ಪಡಿಸಿಕೊಂಡಿರುವ ಜಮೀನಿನಲ್ಲಿ ನಿರ್ಮಾಣವಾಗಿರುವ ಕಚ್ಚಾ ರಸ್ತೆ   

ಸಂತೇಮರಹಳ್ಳಿ: ಹೋಬಳಿ ಕೇಂದ್ರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 209ಕ್ಕೆ ಬೈಪಾಸ್‌ ರಸ್ತೆ ನಿರ್ಮಿಸುವ ಕಾಮಗಾರಿ ನನೆಗುದಿಗೆ ಬಿದ್ದಿದೆ.ರೈತರಿಂದ ಜಮೀನು ಪಡೆದು ನಾಲ್ಕು ವರ್ಷಗಳಾಗಿದ್ದರೂ ಇನ್ನೂ ರಸ್ತೆ ಕೆಲಸ ಆರಂಭವಾಗಿಲ್ಲ.

ರಾಷ್ಟ್ರೀಯ ಹೆದ್ದಾರಿ 209 ಸಂತೇಮರಹಳ್ಳಿ ಮಾರ್ಗವಾಗಿ ಹಾದು ಹೋಗಿದೆ. ಸಂತೇಮರಹಳ್ಳಿ ವೃತ್ತದಲ್ಲಿ ಹೆಚ್ಚು ವಾಹನ ಹಾಗೂ ಜನಸಂದಣಿ ಇರುವುದರಿಂದ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿತ್ತು.

ಚಾಮರಾಜನಗರದಿಂದ ಬರುವಾಗ ಚುಂಗಡಿಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಿಂದ ಯಳಂದೂರು ಮುಖ್ಯರಸ್ತೆಯ ರೇಷ್ಮೆಮಾರುಕಟ್ಟೆವರೆಗೆ 1.5 ಕಿ.ಮೀ ಉದ್ದದ ಬೈಪಾಸ್ ರಸ್ತೆಗಾಗಿ ರೈತರಿಂದ 50 ಎಕರೆಗಳಷ್ಟು ಜಮೀನನ್ನು ಪ್ರಾಧಿಕಾರ ಸ್ವಾಧೀನ ಪಡಿಸಿಕೊಂಡಿದೆ.

ADVERTISEMENT

‘ನಾಲ್ಕು ವರ್ಷ ಕಳೆಯುತ್ತಾ ಬಂದರೂ ಬೈಪಾಸ್‌ ರಸ್ತೆ ನಿರ್ಮಾಣವಾಗಿಲ್ಲ. ರಸ್ತೆಗಾಗಿ ಮಣ್ಣು ಕಲ್ಲುಗಳನ್ನು ಸುರಿದಿರುವುದರಿಂದ ಕಚ್ಚಾ ರಸ್ತೆ ನಿರ್ಮಾಣವಾಗಿದೆ. ಮುಂದಿನ ಕೆಲಸ ನಡೆದಿಲ್ಲ. ವಾಹನಗಳು ಓಡಾಡುವಷ್ಟರ ಮಟ್ಟಿಗೆ ರಸ್ತೆ ಉತ್ತಮವಾಗಿಲ್ಲ. ರಸ್ತೆ ದೂಳುಮಯವಾಗಿರುವುದರಿಂದ ಅಕ್ಕಪಕ್ಕದ ಜಮೀನಿನ ಬೆಳೆಗಳು ನಾಶವಾಗುತ್ತಿವೆ’ ಎಂದು ಸ್ಥಳೀಯ ರೈತರು ದೂರುತ್ತಾರೆ.

ದಿನದಿಂದ ದಿನಕ್ಕೆ ಸಂತೇಮರಹಳ್ಳಿ ವೃತ್ತದಲ್ಲಿ ವಾಹನ ದಟ್ಟಣೆ ಹಾಗೂ ಜನಸಂದಣಿ ಹೆಚ್ಚಾಗತೊಡಗಿದೆ. ಇದರಿಂದ ಬೈಪಾಸ್ ರಸ್ತೆ ಅಗತ್ಯವಾಗಿದೆ. ಆದಷ್ಟು ಬೇಗ ಬೈ‍‍‍ಪಾಸ್‌ ರಸ್ತೆ ಕಾಮಗಾರಿ ಆರಂಭಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

‘ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರೈತರಿಂದ ಜಮೀನು ಖರೀದಿಸುವಾಗ ಪರಿಹಾರ ನೀಡಿ ಬಾಂಡ್ ಪೇಪರ್‌ನಲ್ಲಿ ರೈತರಿಂದ ಸಹಿ ಪಡೆದು ಖಾತೆ ಮಾಡಿಸಿಕೊಂಡಿದ್ದಾರೆ. ಈಗ ಬೈಪಾಸ್ ರಸ್ತೆ ನಿರ್ಮಿಸಲು ರೈತರಿಂದ ತಕರಾರು ಇಲ್ಲ. ಆದರೆ, ಕಾಮಗಾರಿ ಇನ್ನೂ ಆರಂಭವಾಗದೇ ಇರುವುದರಿಂದ ಜಮೀನು ಕಳೆದುಕೊಂಡಿರುವ ರೈತರಿಗೆ ತಮ್ಮ ಜಮೀನಿನ ಗಡಿಯನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ರಸ್ತೆ ನಿರ್ಮಾಣಗೊಂಡರೆ, ರೈತರಿಗೆ ತಮ್ಮ ತಮ್ಮ ಜಮೀನುಗಳಿಗೆ ರಕ್ಷಣೆಗಾಗಿ ಬೇಲಿ ಹಾಕಿಕೊಳ್ಳಲು ಸಾಧ್ಯವಾಗುತ್ತದೆ. ಜತೆಗೆ ಫಸಲು ತೆಗೆಯಲು ಅನುಕೂಲವಾಗುತ್ತದೆ’ ಎಂದು ಚುಂಗಡಿಪುರ ಗ್ರಾಮದ ರೈತ ಮಹದೇವು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೃಷಿಗೆ ಯೋಗ್ಯವಾಗಿರುವ ಜಮೀನನ್ನು ನೀಡಿರುವುದರಿಂದ ವ್ಯವಸಾಯಕ್ಕೆ ತೊಂದರೆಯಾಗಿದೆ. ಅತೀ ಕಡಿಮೆ ಬೆಲೆಗೆ ನಮ್ಮ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಖರೀದಿಸಿದ್ದಾರೆ. ಮೌಲ್ಯಕ್ಕೆ ತಕ್ಕಂತೆ ಪರಿಹಾರ ನೀಡಿಲ್ಲ. ಜತೆಗೆ ರಸ್ತೆ ಅಭಿವೃದ್ಧಿಗೂ ಕ್ರಮ ಕೈಗೊಂಡಿಲ್ಲ. ಇದರಿಂದ ಉಳಿದ ಜಮೀನಿನಲ್ಲಿ ವ್ಯವಸಾಯ ಮಾಡಲು ತೊಂದರೆಯಾಗುತ್ತಿದೆ. ಕೂಡಲೇ ರಸ್ತೆ ಕಾಮಗಾರಿ ಮುಂದುವರಿಸಬೇಕು. ಜತೆಗೆ ಕಳೆದುಕೊಂಡಿರುವ ಭೂಮಿಗೆ ಹೆಚ್ಚಿನ ಪರಿಹಾರ ಒದಗಿಸಬೇಕು’ ಎಂದು ಸಂತೇಮರಹಳ್ಳಿ ಮಹೇಶ್ ಅವರು ಒತ್ತಾಯಿಸಿದರು.

ಮುಂದಿನವಾರ ಆರಂಭ: ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿ 209 ಅಭಿವೃದ್ಧಿಯ ವಿಶೇಷ ಅಧಿಕಾರಿ ಶ್ರೀಧರ್‌ ಅವರು, ‘ಕಾಮಗಾರಿ ಟೆಂಡರ್‌ ಪಡೆದಿರುವ ಸಂಸ್ಥೆಯ ಸಮಸ್ಯೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ತೊಂದರೆಯಾಗಿದೆ. ಈಗ ಸಮಸ್ಯೆ ಬಗೆಹರಿದಿದ್ದು, ಮುಂದಿನವಾರದಿಂದ ಬೈಪಾಸ್ ರಸ್ತೆ ಕಾಮಗಾರಿ ಆರಂಭವಾಗಲಿದೆ’ ಎಂದರು.

ಹೆಚ್ಚಿನ ಪರಿಹಾರಕ್ಕೆ ಮೊರೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರೈತರಿಂದ 50 ಎಕರೆಗಳಷ್ಟು ಭೂಮಿ ಖರೀದಿಸಿದೆ. ಪ್ರತಿ ಎಕರೆಗೆ ₹5 ಲಕ್ಷದಂತೆ ರೈತರಿಗೆ ಹಣ ನೀಡಲಾಗಿದೆ. ಈ ಪರಿಹಾರ ಹಣ ಸಾಲುತ್ತಿಲ್ಲ ಎಂದು ರೈತರು ಜಿಲ್ಲಾಧಿಕಾರಿಯವರ ನ್ಯಾಯಾಲಯಕ್ಕೆ ಮೊರೆ ಹೋದರು. ಅಲ್ಲಿ ಪರಿಶೀಲನೆ ನಡೆಸಿ, ಸಂತೇಮರಹಳ್ಳಿ ವ್ಯಾಪ್ತಿಯಲ್ಲಿ ಜಮೀನು ಮೌಲ್ಯ ಹೆಚ್ಚಾಗಿರುವುದರಿಂದ ರೈತರಿಗೆ ಹೆಚ್ಚುವರಿಯಾಗಿ ಎಕರೆಗೆ ₹70 ಸಾವಿರ ಪರಿಹಾರ ನೀಡಬೇಕು ಎಂದು ಆದೇಶ ಹೊರಡಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಷ್ಟು ಪರಿಹಾರ ಕೊಡಲು ಸಾಧ್ಯವಿಲ್ಲವೆಂದು ಹೈಕೋರ್ಟ್ ಮೊರೆ ಹೋಗಿದೆ. ರೈತರು ಕೂಡ ಖಾಸಗಿ ವಕೀಲರ ಮೂಲಕ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.