ಹನೂರು:ಕಣ್ಣುಹಾಯಿಸಿದಷ್ಟೂ ದೂರಕ್ಕೂ ಹರಡಿಕೊಂಡಿದ್ದ ಜನಸ್ತೋಮ, ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ಆರಾಧ್ಯ ದೈವವನ್ನು ಸ್ಮರಿಸುತ್ತಿದ್ದ ಭಕ್ತಸಮೂಹ, ಬೆಳಗುವ ದೀಪದ ಮಧ್ಯೆ ಜಾಗಟೆ ಶಬ್ದ, ಇವೆಲ್ಲವನ್ನು ಮೀರಿ ಇಡೀ ಕ್ಷೇತ್ರವನ್ನೇ ಆವರಿಸಿತ್ತು 'ಸಿದ್ದಯ್ಯ ಸ್ವಾಮಿ ಬನ್ನಿ, ಪವಾಡ ಗೆದ್ದಯ್ಯ ನೀವೆ ಬನ್ನಿ, ಮಂಟೇದಾ ನೀವೆ ಬನ್ನಿ….' ಪಾರ್ಥನೆ.
ಚಿಕ್ಕಲ್ಲೂರು ಜಾತ್ರೆಯ ಮೊದಲ ದಿನವಾದ ಚಂದ್ರ ಮಂಡಲೋತ್ಸವ ಕಳೆದ ವರ್ಷಕ್ಕಿಂತ ಈ ಬಾರಿ ಅತ್ಯಂತ ವೈಭವವಾಗಿ ಜರುಗಿದ ಉತ್ಸವಕ್ಕೆ ಅಪಾರ ಭಕ್ತಸ್ತೋಮ ಸಾಕ್ಷಿಯಾಯಿತು. ಜಿಲ್ಲಾಡಳಿತ ಪ್ರಾಣಿಬಲಿ ನಿಷೇಧಿಸಿದ್ದರಿಂದ ಈ ಬಾರಿ ಜಾತ್ರೆಗೆ ಬರುವ ಭಕ್ತರ ಸಂಖ್ಯೆ ಕೊಂಚ ಕ್ಷೀಣಿಸಬಹುದು ಎಂಬ ಊಹೆ ಶುಕ್ರವಾರ ಜರುಗಿದ ಚಂದ್ರಮಂಡಲೋತ್ಸವದಲ್ಲಿ ಹುಸಿಯಾಯಿತು.
ಹೂವು, ಹೊಂಬಾಳೆ, ಬಾಳೆಕಂದು, ಮಾವಿನ ತೋರಣ ಮುಂತಾದವು ಗಳಿಂದ ಚಂದ್ರಮಂಡಲ ಕಟ್ಟೆಯನ್ನು ಸಿಂಗರಿಸಲಾಗಿತ್ತು. ರಾತ್ರಿ ಗಂಟೆ ಸಮಯಕ್ಕೆ ಬೊಪ್ಪೇಗೌಡನಪುರ ಧರೆಗೆ ದೊಡ್ಡವರ ಸಂಸ್ಥಾನ ಮಠದ ಪೀಠಾಧಿಪತಿ ಜ್ಞಾನಾನಂದ ಚೆನ್ನರಾಜೇ ಅರಸು ಅವರು ಮಂಗಳಾರತಿ ಬೆಳಗಿಸಿ ಚಂದ್ರಮಂಡಲಕ್ಕೆ ಅಗ್ನಿ ಸ್ಪರ್ಶ ಮಾಡುತ್ತಿದ್ದಂತೆ ಧರೆಗೆ ದೊಡ್ಡವರಾದ ಮಂಟೇಸ್ವಾಮಿ ಅವರ ಪಾದಕ್ಕೆ ಉಘೇ, ಕತ್ತಲ ರಾಜ್ಯದಲ್ಲಿ ಪರಂಜ್ಯೋತಿಯಾಗಿ ಬೆಳೆದಂತಹ ಸಿದ್ದಪ್ಪಾಜಿಯವರ ಚಂದ್ರಮಂಡಲಕ್ಕೆ ಉಘೇ ಎಂಬ ಭಕ್ತರ ಘೋಷಣೆ ಇಡೀ ಜಾತ್ರೆಯಾದ್ಯಂತ ಮಾರ್ದನಿಸಿತು.
ಹರಕೆ ಸಲ್ಲಿಸಿದ ಭಕ್ತರು: ಧಗಧಗನೆ ಉರಿಯುತ್ತಿದ್ದ ಚಂದ್ರ ಮಂಡಲ ಜ್ಯೋತಿಗೆ ನೆರೆದಿದ್ದ ಭಕ್ತರು ದವಸ– ಧಾನ್ಯ, ಹಣ್ಣು– ಜವನ, ನಗ– ನಾಣ್ಯಗಳನ್ನು ಎಸೆಯುವುದರ ಮೂಲಕ ತಮ್ಮ ಹರಕೆ ಕಾಣಿಕೆಗಳನ್ನು ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.