ಚಾಮರಾಜನಗರ: ದೆಹಲಿಯ ನಿಜಾಮುದ್ದೀನ್ ಪ್ರದೇಶದ ತಬ್ಲಿಗಿ ಜಮಾತ್ ಕೇಂದ್ರ ಕಚೇರಿಯಲ್ಲಿ ನಡೆದಿದ್ದ ಧಾರ್ಮಿಕ ಸಮಾವೇಶದಲ್ಲಿ ಜಿಲ್ಲೆಯ 12 ಜನರು ಭಾಗವಹಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಬುಧವಾರ ಕೊಳ್ಳೇಗಾಲ ಮತ್ತು ಹನೂರಿಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಅವರು ಈ ವಿಷಯ ತಿಳಿಸಿದ್ದಾರೆ.
‘ಧಾರ್ಮಿಕ ಸಮಾವೇಶಕ್ಕೆ ಜಿಲ್ಲೆಯಿಂದ ನಾಲ್ಕು ಜನರು ಹೋಗಿದ್ದರು ಎಂಬ ಮಾಹಿತಿ ಜಿಲ್ಲಾಡಳಿತಕ್ಕೆ ಬಂತು. ಅವರಲ್ಲಿ ಮೂರು ಜನರನ್ನು ಪತ್ತೆ ಹಚ್ಚಲಾಗಿದೆ. ಇಬ್ಬರು ಕೊಳ್ಳೇಗಾಲದವರು, ಇನ್ನೊಬ್ಬರು ಚಾಮರಾಜನಗರದವರು. ಅವರನ್ನು ವಿಚಾರಣೆ ಮಾಡಿದಾಗ ಇನ್ನೂ 9 ಜನ ಬಂದಿದ್ದರು ಎಂಬ ಮಾಹಿತಿ ನೀಡಿದ್ದಾರೆ. ಒಬ್ಬರು ಬೆಂಗಳೂರಿನಲ್ಲಿ ಇದ್ದಾರೆ ಎಂದು ಗೊತ್ತಾಗಿದೆ. ಅವರ ವಿವರ ಹಾಗೂ ಮೊಬೈಲ್ ಸಂಖ್ಯೆ ಪಡೆದು ಬೆಂಗಳೂರಿಗೆ ಮಾಹಿತಿ ನೀಡಲಾಗಿದೆ. ಎಲ್ಲರನ್ನೂ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ’ ಎಂದು ಅವರು ಹೇಳಿದರು.
ಮೂವರನ್ನು ಚಾಮರಾಜನಗರದಲ್ಲಿರುವ ಕೋವಿಡ್–19 ವಿಶೇಷ ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಎಸ್ಸೆಸ್ಸೆಲ್ಸಿ– 14ರ ನಂತರ ತೀರ್ಮಾನ: ಕೊರೊನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮುಂದೂಡಲಾಗಿರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯ ಹೊಸ ದಿನಾಂಕವನ್ನು ಏಪ್ರಿಲ್ 14ರ ನಂತರ ನಿಗದಿಪಡಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರೂ ಆಗಿರುವಸುರೇಶ್ ಕುಮಾರ್ ಹೇಳಿದರು.
ಈಗಾಗಲೇ ಬಹಳಷ್ಟು ಮಕ್ಕಳು ಪರೀಕ್ಷೆಗೆ ತಯಾರಾಗಿದ್ದಾರೆ. ಪರಿಸ್ಥಿತಿ ಅವಲೋಕಿಸಿ 14ರ ನಂತರ ಹೊಸ ವೇಳಾಪಟ್ಟಿ ಘೋಷಣೆ ಮಾಡಲಾಗುವುದು. ಪರೀಕ್ಷೆ ಮುಂದೂಡಿರುವುದರಿಂದ ಯಾರೂ ನಿರಾಶರಾಗಬಾರದು. ಕೊರೊನಾ ಸೋಂಕು ವಿರುದ್ದ ಹೋರಾಡುವುದೂ ಒಂದು ಪರೀಕ್ಷೆಯಾಗಿದೆ. ಯಾರೂ ಮನೆಯಿಂದ ಹೊರಬಾರದು. ಪ್ರತಿನಿತ್ಯ ಇನ್ನಷ್ಟು ಪುಸ್ತಕಗಳನ್ನು ಓದಿ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬೇಕು. ಮಕ್ಕಳ ಆತಂಕದ ಬಗ್ಗೆ ನಮಗೆ ತಿಳಿದಿದೆ ಸರ್ಕಾರ ಅವರ ಜೊತೆ ಯಾವಾಗಲೂ ಇರುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.