ಚಾಮರಾಜನಗರ: ಜಿಲ್ಲೆಯಲ್ಲಿ ಹಿಂಗಾರು ಬಿತ್ತನೆ ಚಟುವಟಿಕೆಗಳು ಮುಗಿದು ಮುಂಗಾರು ಬಿತ್ತನೆ ಕಾರ್ಯ ಬಿರುಸುಗೊಂಡಿದೆ. ಕೆಲವು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿರುವುದು ನಾಟಿಗೆ ಪೂರಕ ವಾತಾವರಣ ಸೃಷ್ಟಿಸಿದ್ದು ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸಕ್ತ ಸಾಲಿನ ಮುಂಗಾರು ಅವಧಿಯಲ್ಲಿ ಕೃಷಿ ಇಲಾಖೆ 1,07.914 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು ಇದುವರೆಗೂ 33,368 ಹೆಕ್ಟೇರ್ ನಾಟಿ ನಡೆದಿದೆ.
ಬಿತ್ತನೆ ಪ್ರಮಾಣ: ಚಾಮರಾಜನಗರ ತಾಲ್ಲೂಕಿನಲ್ಲಿ 20765 ಹೆಕ್ಟೇರ್ ಬಿತ್ತನೆ ಗುರಿಗೆ ಪ್ರತಿಯಾಗಿ 4,318 ಹೆಕ್ಟೇರ್ ಬಿತ್ತನೆ ನಡೆದಿದೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 40,144 ಹೆಕ್ಟೇರ್ ಬಿತ್ತನೆ ಗುರಿಗೆ 23,649, ಕೊಳ್ಳೇಗಾಲ ತಾಲ್ಲೂಕಿನಲ್ಲಿ 13,870 ಹೆಕ್ಟೇರ್ ಗುರಿಗೆ 2161, ಹನೂರು ತಾಲ್ಲೂಕಿನಲ್ಲಿ 23,335 ಹೆಕ್ಟೇರ್ ಬಿತ್ತನೆ ಗುರಿಗೆ 1,475, ಯಳಂದೂರು ತಾಲ್ಲೂಕಿನಲ್ಲಿ 9,800 ಹೆಕ್ಟೇರ್ ಗುರಿಗೆ 1,765 ಹೆಕ್ಟೇರ್ ಬಿತ್ತನೆ ನಡೆದಿದೆ.
ಗುಂಡ್ಲುಪೇಟೆ ಅಧಿಕ: ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಶೇ 58.9ರಷ್ಟು ಬಿತ್ತನೆಯಾಗಿದ್ದು ಜಿಲ್ಲೆಗೆ ಮೊದಲ ಸ್ಥಾನದಲ್ಲಿದ್ದರೆ, ಚಾಮರಾಜನಗರ ಶೇ 20.79, ಯಳಂದೂರು ಶೇ 18.01, ಕೊಳ್ಳೇಗಾಲ ಶೇ 15.58 ಕ್ರಮವಾಗಿ ನಂತರದ ಸ್ಥಾನದಲ್ಲಿವೆ. ಹನೂರು ತಾಲ್ಲೂಕು ಶೇ 6.32ರಷ್ಟು ಬಿತ್ತನೆಯೊಂದಿಗೆ ಕೊನೆಯ ಸ್ಥಾನದಲ್ಲಿದೆ.
ಮುಂಗಾರು ಆರಂಭದಲ್ಲಿ ರೈತರು ರಾಗಿ ಹಾಗೂ ಮುಸುಕಿನ ಜೋಳ ಬಿತ್ತನೆಗೆ ಒಲವು ತೋರುತ್ತಿದ್ದು ಬಿತ್ತನೆ ಚುರುಕಾಗಿದೆ. ಪ್ರಾರಂಭಿಕ ಹಂತದಲ್ಲಿ 800 ಹೆಕ್ಟೇರ್ ಬಿತ್ತನೆಗೆ ಗುರಿಗೆ ಪ್ರತಿಯಾಗಿ 156 ಹೆಕ್ಟೇರ್, 25,000 ಹೆಕ್ಟೇರ್ ಮುಸುಕಿನ ಜೋಳ ಬಿತ್ತನೆ ಗುರಿಗೆ ಪ್ರತಿಯಾಗಿ 2,742 ಹೆಕ್ಟೇರ್ ಬಿತ್ತನೆಯಾಗಿದೆ. ನಾಟಿ ಅವಧಿ ಮುಗಿಯುವುದರೊಳಗೆ ಗುರಿ ಮುಟ್ಟುವ ನಿರೀಕ್ಷೆ ಇದೆ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಅಬಿದ್.
ಭತ್ತ ನಾಟಿಗೆ ಸಿದ್ಧತೆ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತರು ಭತ್ತ ನಾಟಿಗೆ ಸಿದ್ಧತೆ ಆರಂಭಿಸುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಸಸಿ ಮಡಿ ತಯಾರಿಸುವ ಕಾರ್ಯ ಆರಂಭವಾಗಲಿದ್ದು ತಿಂಗಳಾಂತ್ಯಕ್ಕೆ ನಾಟಿ ಕಾರ್ಯಕ್ಕೆ ಚಾಲನೆ ಸಿಗಲಿದೆ. ಪ್ರಸಕ್ತ ವರ್ಷ 10,000 ಹೆಕ್ಟೇರ್ ಭತ್ತದ ನಾಟಿ ಗುರಿ ಹೊಂದಲಾಗಿದ್ದು, ಕೊಳ್ಳೇಗಾಲ ತಾಲ್ಲೂಕಿನಲ್ಲಿ ಅತಿ ಹೆಚ್ಚು 6,000 ಹೆಕ್ಟೇರ್ ಗುರಿ ಹೊಂದಲಾಗಿದೆ. ಯಳಂದೂರು ತಾಲ್ಲೂಕಿನಲ್ಲಿ 3,000, ಚಾಮರಾಜನಗರ ತಾಲ್ಲೂಕಿನಲ್ಲಿ 1,000 ಹೆಕ್ಟೇರ್ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದರು.
ಸೆಪ್ಟೆಂಬರ್ ಅಂತ್ಯದವರೆಗೂ ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಕಾರ್ಯ ನಡೆಯಲಿದ್ದು ಕಾಲಕಾಲಕ್ಕೆ ಉತ್ತಮ ಮಳೆ ಸುರಿದರೆ ಗುರಿ ತಲುಪುವ ವಿಶ್ವಾಸವಿದೆ ಎನ್ನುತ್ತಾರೆ ಅವರು.
ಮುಂಗಾರು ಪೂರ್ವ ಬಿತ್ತನೆ ಗುರಿ;45,000 ಮುಂಗಾರು ಪೂರ್ವ ಬಿತ್ತನೆ ಪ್ರಮಾಣ;35000 ಮುಂಗಾರು ಬಿತ್ತನೆ ಗುರಿ;1,07,914 ಮುಂಗಾರು ಬಿತ್ತನೆ ಪ್ರಮಾಣ;33,368
ಪೂರ್ವ ಮುಂಗಾರು ಬಿತ್ತನೆ ಕುಸಿತ
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಅವಧಿಯಲ್ಲಿ 45000 ಹೆಕ್ಟೇರ್ ಬಿತ್ತನೆ ಗುರಿಗೆ ಪ್ರತಿಯಾಗಿ 35000 ಹೆಕ್ಟೇರ್ ಬಿತ್ತನೆಯಾಯಿತು. ತೊಗರಿ ಉದ್ದು ಹೆಸರು ಅಲಸಂದೆ ಅವರೆ ಬಿತ್ತನೆ ನಿರೀಕ್ಷೆಯಂತೆ ನಡೆಯಿತು. ಆದರೆ ಮೇನಲ್ಲಿ ಮಳೆ ಕೊರತೆಯಿಂದ ಹತ್ತಿ ಹಾಗೂ ಸೂರ್ಯಕಾಂತಿ ಬಿತ್ತನೆಗೆ ಹಿನ್ನಡೆಯಾಯಿತು. 17000 ಹೆಕ್ಟೇರ್ ಸೂರ್ಯಕಾಂತಿ ಬಿತ್ತನೆ ಗುರಿಗೆ 10321 ಹೆಕ್ಟೇರ್ 8700 ಹೆಕ್ಟೇರ್ ಹತ್ತಿ ಬಿತ್ತನೆ ಗುರಿಗೆ 1874 ಹೆಕ್ಟೇರ್ ಮಾತ್ರ ಬಿತ್ತನೆಯಾಯಿತು. ಎರಡೂ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಬಿತ್ತನೆ ಪ್ರಮಾಣ ಕುಂಠಿತವಾಯಿತು ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕಅಬಿದ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.