ADVERTISEMENT

ಜಿಲ್ಲೆಯಾದ್ಯಂತ ಸಂಭ್ರಮ, ಸಡಗರದ ಕ್ರಿಸ್‌ಮಸ್‌

ಕೋವಿಡ್‌ ಕಾರಣ ಸರಳ ಆಚರಣೆ, ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಏಸುವಿನ ಗುಣಗಾನ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 14:58 IST
Last Updated 25 ಡಿಸೆಂಬರ್ 2020, 14:58 IST
ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಂತ ಪೌಲರ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಅಂಗವಾಗಿ ಗುರುವಾರ ತಡರಾತ್ರಿ ವಿಶೇಷ ಪ್ರಾರ್ಥನೆ ನಡೆಯಿತು
ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಂತ ಪೌಲರ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಅಂಗವಾಗಿ ಗುರುವಾರ ತಡರಾತ್ರಿ ವಿಶೇಷ ಪ್ರಾರ್ಥನೆ ನಡೆಯಿತು   

ಚಾಮರಾಜನಗರ/ಕೊಳ್ಳೇಗಾಲ:ಜಿಲ್ಲೆಯಾದ್ಯಂತ ಕ್ರಿಶ್ಚಿಯನ್‌ ಸಮುದಾಯದವರು ಶುಕ್ರವಾರ ಕ್ರಿಸ್‌ಮಸ್‌ ಅನ್ನು ಸಂಭ್ರಮ, ಸಡಗರದಿಂದ ಆಚರಿಸಿದರು. ಕೋವಿಡ್‌ ಕಾರಣದಿಂದ ಈ ಬಾರಿ ಏಸು ಕ್ರಿಸ್ತನ ಹುಟ್ಟಿದ ದಿನದ ಆಚರಣೆ ಆಚರಣೆ ಸರಳವಾಗಿತ್ತು.

ಗುರುವಾರ ರಾತ್ರಿ 12 ಗಂಟೆಯ ನಂತರ ಹಬ್ಬದ ಅಂಗವಾಗಿ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಆರಾಧನೆ ನಡೆಯಿತು. ದಿವ್ಯ ಬಲಿಪೂಜೆ ನಡೆಯಿತು. ಕ್ರಿಶ್ಚಿಯನ್ನರು ಕುಟುಂಬದ ಸದಸ್ಯರೊಂದಿಗೆ ಚರ್ಚ್‌ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಪಾದ್ರಿಗಳು ಏಸುವಿನ ಗುಣಗಾನ ಮಾಡಿದರು. ಜನ್ಮದಿನದ ಅಂಗವಾಗಿ ಶುಭ ಸಂದೇಶವನ್ನು ನೀಡಿದರು. ಆರಾಧನೆ ಮುಗಿದ ಬಳಿಕ ಎಲ್ಲರಿಗೂ ಕೇಕ್‌ ಹಾಗೂ ಸಿಹಿಯನ್ನು ಹಂಚಲಾಯಿತು.

ADVERTISEMENT

ಶುಭಾಶಯ:ಸ್ಥಳೀಯ ಶಾಸಕರು ಹಾಗೂ ವಿವಿಧ ರಾಜಕೀಯ ಮುಖಂಡರು, ಚರ್ಚ್‌ಗಳಿಗೆ ತೆರಳಿ, ಧರ್ಮಗುರುಗಳನ್ನು ಭೇಟಿಯಾಗಿ ಹಬ್ಬದ ಶುಭಾಶಯ ಕೋರಿದರು.

ಮನೆಗಳಲ್ಲೂ ಸಂಭ್ರಮ: ಕ್ರಿಶ್ಚಿಯನ್ನರ ಮನೆಗಳಲ್ಲೂ ಕ್ರಿಸ್‌ಮಸ್‌ ಸಡಗರ ಮನೆ ಮಾಡಿತ್ತು. ಮಕ್ಕಳು, ಮಹಿಳೆಯರು ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದರು. ಮನೆಗೆ ಸ್ನೇಹಿತರು ಹಾಗೂ ಸಂಬಂಧಿಕರನ್ನು ಆಹ್ವಾನಿಸಿ ಅವರಿಗೆ ಕೇಕ್‌ ನೀಡಿ, ವಿಶೇಷ ಔತಣ ಸಿದ್ಧಪಡಿಸಿ ಬಡಿಸಿದರು.

ಕೊಳ್ಳೇಗಾಲ ವರದಿ: ನಗರ ಹಾಗೂ ತಾಲ್ಲೂಕಿನ ಎಲ್ಲ ಚರ್ಚ್‍ಗಳಲ್ಲಿ ಕ್ರಿಸ್ತ ಜಯಂತಿ ಆಚರಣೆ ಶುಕ್ರವಾರ ಅದ್ಧೂರಿಯಾಗಿ ನಡೆಯಿತು.

ನಗರದ ಬೇತೆಲ್ ಲೂಥರನ್ ಚರ್ಚ್, ಸಂತ ಫಾನ್ಸಿಸ್‍ ಅಸಿಸ್ಸಿ ಚರ್ಚ್, ಎಸ್.ಡಿ.ಎ ಚರ್ಚ್, ಬ್ರದರನ್ ಚರ್ಚ್, ಅರುಣೋದಯ ಚರ್ಚ್, ಎಸ್.ಡಿ.ಎ. ಚರ್ಚ್, ಸಿ.ಎಸ್.ಐ ಚರ್ಚ್ ಸೇರಿದಂತೆ ಎಲ್ಲ ಚರ್ಚ್‍ಗಳಲ್ಲಿ ಕ್ರಿಸ್‌ಮಸ್‌ ಅಂಗವಾಗಿ ವಿಶೇಷ ಆರಾಧನೆ, ಪ್ರಾರ್ಥನೆ ನಡೆಯಿತು.

ವಿಶೇಷ ಸಂಗೀತದ ಮೂಲಕ ಪ್ರಾಥನೆಯನ್ನು ಸಲ್ಲಿಸಲಾಯಿತು. ಆರಾಧನೆ ಮುಗಿದ ನಂತರ ಎಲ್ಲರಿಗೂ ಕ್ರಿಸ್ ಮಸ್ ಕೇಕ್ ಹಾಗೂ ಸಿಹಿ ವಿತರಿಸಿದರು. ವಿಶೇಷವಾಗಿ ಕೋವಿಡ್‍ನಿಂದ ಮೃತಪಟ್ಟ ಎಲ್ಲರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಪ್ರಾರ್ಥಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.